
ಕೊಡಗು: ಮಲ್ಲಳ್ಳಿ ಜಲಪಾತ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿದ್ದು, ಭಾರೀ ಮಳೆಯಿಂದ ಜಲಪಾತದ ಸೌಂದರ್ಯ ದ್ವಿಗುಣಗೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಣೆಸಿಕೊಂಡ ಜಿಲ್ಲೆಯ ಈ ಜಲಪಾತಗಳಿಗೆ ಈಗ ಜೀವಕಳೆ ಬಂದಿದೆ. ಅದರಲ್ಲಿಯೂ ಹಚ್ಚ ಹಸಿರಿನ ಪರಿಸರದ ನಡುವೆ ಭೋರ್ಗರೆಯುತ್ತಿರುವ ಮಲ್ಲಳ್ಳಿ ಜಲಪಾತ, ನೋಡುಗರ ಕಣ್ಮನ ಸೆಳೆಯುತ್ತಿದೆ.

j3tvkannada
ಪುಷ್ಪಗಿರಿ ಬೆಟ್ಟದ ತಪ್ಪಲಿನಿಂದ ಹುಟ್ಟುವ ಕುಮಾರಧಾರಾ ನದಿ, ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ ಕೆಳಗೆ ಧುಮುಕುವ ದೃಶ್ಯ ಮನಮೋಹಕವಾಗಿದೆ. ಎತ್ತರದಿಂದ ನೀರು ಧುಮುಕುವ ಮನಮೋಹಕ ದೃಶ್ಯ, ಜಲಪಾತದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ಪ್ರವಾಸೋದ್ಯಮ ಇಲಾಖೆಯು ನೀರಿನೊಳಗೆ ಯಾರೂ ಇಳಿಯದಂತೆ ಬ್ಯಾರಿಕೇಡ್ ಹಾಕಿದೆ. ಬೃಹತ್ ಗಾತ್ರದ ಕಲ್ಲುಗಳ ಮೇಲೆ ನಿಂತು, ಜಲಪಾತದ ಸೌಂದರ್ಯವನ್ನು ಆನಂದಿಸುತ್ತಾ, ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಪ್ರವಾಸಿಗರು ತಮ್ಮ ಗೆಳೆಯ- ಗೆಳತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ, ಪ್ರಕೃತಿ ಸೌಂದರ್ಯದಲ್ಲಿ ತಲ್ಲೀನರಾಗುತ್ತಿದ್ದಾರೆ. ಕೊಡಗು ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಪ್ರವಾಸಿಗರ ರಕ್ಷಣೆಗಾಗಿ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದ್ದು, ಅವರು ಜಲಪಾತದ ಸಮೀಪ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದಾರೆ ಹಾಗೂ ಜಲಪಾತದ ನೀರಿಗೆ ಇಳಿಯದಂತೆ ಎಚ್ಚರಿಸುತ್ತಿದ್ದಾರೆ. ಮಲ್ಲಳ್ಳಿ ಜಲಪಾತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದಿಂದ, ಪ್ರವಾಸಿಗರಿಗೆ ಸುಗಮವಾಗಿದೆ. ಹಾಲಿನ ನೊರೆಯಂತ ನೀರಿನ ವೈಭವ, ಜುಳುಜುಳು ನಾದದೊಂದಿಗೆ ಮನ ತಣಿಸುವ ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಲು ಇದು ಸುಸಂದರ್ಭವಾಗಿದೆ. ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಭಾರೀ ಮಳೆಯ ಸಮಯದಲ್ಲಿ ಜಲಪಾತದ ಬುಡದಲ್ಲಿ ನಿಂತು ನೋಡುವುದು ಕಷ್ಟ, ಆದರೆ 400 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿದು, ಸಮೀಪಕ್ಕೆ ಹೋಗಬಹುದು.