
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ (ಜೂನ್ 4-ಬುಧವಾರ) ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳ ಪಟ್ಟಿ ಬಿಡುಗಡೆಗೊಂಡಿದೆ. ಈ ಪೈಕಿ ಆರ್ಸಿಬಿ ವಿಜಯೋತ್ಸವದಲ್ಲಿ ಭಾಗವಹಿಸಲು ತಾವು ಕೆಲಸ ಮಾಡುತ್ತಿದ್ದ ಕಚೇರಿಯಿಂದ ಅನುಮತಿ ಪಡೆದು ಬಂದಿದ್ದ ತಮಿಳುನಾಡು ಮೂಲದ ದೇವಿ ಎಂಬ ಟೆಕ್ಕಿ, ಕಾಲ್ತುಳಿತಕ್ಕೆ ಸಿಕ್ಕಿ ಭೀಕರವಾಗಿ ಸಾವನ್ನಪ್ಪಿದ್ದಾರೆ.

j3tvkannada
ಬೆಳಗ್ಗೆ ಕೆಲಸಕ್ಕೆಂದು ಕಚೇರಿಗೆ ತೆರಳಿದ್ದ ದೇವಿ, ಸಂಜೆ ಆರ್ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ತಮ್ಮ ಬಾಸ್ಗೆ ದುಂಬಾಲು ಬಿದ್ದಿದ್ದರು. ದೇವಿಯ ಮನವಿಯನ್ನು ಪುರಸ್ಕರಿಸಿದ ಆಕೆಯ ಬಾಸ್, ಎರಡು ಗಂಟೆಯ ಬಿಡುವು ನೀಡಿದ್ದರು. ಬಿಡುವು ಸಿಕ್ಕ ಖುಷಿಯಲ್ಲಿ ತಮ್ಮ ಲ್ಯಾಪ್ಟಾಪ್ ಮತ್ತು ಬ್ಯಾಗ್ನ್ನು ಕಚೇರಿಯ ಮೇಜಿನ ಮೇಲೆಯೇ ಬಿಟ್ಟು ಹೋಗಿದ್ದ ದೇವಿ, ಕಾಲ್ತುಳಿತಕ್ಕೆ ಸಿಕ್ಕಿ ಮೃತರಾಗಿದ್ದಾರೆ. ದೇವಿ ಆಕೆಯ ಪೋಷಕರ ಒಬ್ಬಳೇ ಮಗಳು ಎಂಬುದು ಜೀವ ಹಿಂಡುವ ಸತ್ಯ.
ನಿನ್ನೆ ಮಧ್ಯಾಹ್ನ 2.30ರ ವೇಳೆ ಬಾಸ್ನಿಂದ ಅನುಮತಿ ಪಡೆದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ ದೇವಿ, ಕಾಲ್ತುಳಿತ ಸಂಭವಿಸಿದಾಗ ಜನರ ಮಧ್ಯೆ ಸಿಲುಕಿಕೊಂಡಿದ್ದರು. ಜನಜಂಗುಳಿಯಿಂದ ಹೊರ ಬರಲಾರದೇ, ಕಾಲ್ತುಳಿತಕ್ಕೆ ಸಿಕ್ಕಿದ ದೇವಿ ಜೀವ ಕಳೆದುಕೊಂಡಿದ್ದಾರೆ. ದೇವಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ, ಆಕೆಯ ಸಹೋದ್ಯೋಗಿಗಳು. ಬಾಸ್ ಎರಡು ಗಂಟೆಯ ಬಿಡುವು ನೀಡಿದ್ದಾರೆ ಎಂಬ ಖುಷಿಯಲ್ಲಿ ದೇವಿ ನಗು ನಗುತ್ತಾ ಕಚೇರಿಯಿಂದ ತೆರಳಿದ ಕ್ಷಣಗಳನ್ನು ನೆನೆದು ಭಾವುಕರಾಗುತ್ತಾರೆ. ಅವಳ ಲ್ಯಾಪ್ಟಾಪ್ ಇನ್ನೂ ಮೇಜಿನ ಮೇಲಿದೆ ಮತ್ತು ಅವಳ ಬ್ಯಾಗ್ ಕೂಡ ಅಲ್ಲೇ ಇದೆ. ಆದರೆ ಈಗ ಆಕೆಯೇ ಇಲ್ಲ ಎಂದು ದೇವಿಯ ಸಹೋದ್ಯೋಗಿ ಮತ್ತು ಸ್ನೇಹಿತೆಯೋರ್ವಳು ಕಣ್ಣೀರಿಟ್ಟಿದ್ದಾರೆ.

j3tvkannada
ತಮಿಳುನಾಡು ಮೂಲದ ದೇವಿ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಪೂರೈಸಿ, ಟೆಕ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಬೆಂಗಳೂರು ನಗರದ ಬಗ್ಗೆ ಆಳವಾದ ಪ್ರೀತಿ ಹೊಂದಿದ್ದ ದೇವಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಅಭಿಮಾನಿ. ಅದರಲ್ಲೂ ವಿರಾಟ್ ಕೊಹ್ಲಿ ಎಂದರೆ ಹಿರಿಹಿರಿ ಹಿಗ್ಗುತ್ತಿದ್ದ ದೇವಿ, ಆರ್ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪಂದ್ಯ ನಡೆದಾಗಲೆಲ್ಲಾ ತಪ್ಪದೇ ಹಾಜರಾಗುತ್ತಿದ್ದ ದೇವಿ, ಆರ್ಸಿಬಿಯ ಐಪಿಎಲ್ ವಿಜಯೋತ್ಸವದಲ್ಲಿ ಬಾಗಿಯಾಗಲು ನಿರ್ಧರಿಸಿದರು. ಅದರಂತೆ ತಮ್ಮ ಬಾಸ್ನಿಂದ ಅನುಮತಿ ಪಡೆದು ಚಿನ್ನಸ್ವಾಮಿ ಕ್ರೀಡಾಂಗಣ ತಲುಪಿದ್ದರು. ಆರ್ಸಿಬಿ ವಿಜಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದ್ದ ದೇವಿ, ಅದು ಸಾಧ್ಯವಾಗದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಟಿಕೆಟ್ ಖರೀದಿಸಲು ನಿರ್ಧರಿಸಿದ್ದರು.
ಅಲ್ಲದೇ ತಾವು ಮೆಟ್ರೋದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೊರಟಿರುವುದಾಗಿ ತಮ್ಮ ಸ್ನೇಹಿತರಿಗೆ ಮೆಸೇಜ್ ಮಾಡಿದ್ದರು. ಇದೇ ಅವರ ಕೊನೆಯ ಮೆಸೇಜ್ ಕೂಡ ಆಗಿತ್ತು. ನಮಗೆ ಆಸ್ಪತ್ರೆಯಿಂದ ಕರೆ ಬಂತು. ದಾಖಲೆಗಳಲ್ಲಿ ಪಟ್ಟಿ ಮಾಡಲಾದ ತುರ್ತು ಸಂಪರ್ಕ ಸಂಖ್ಯೆಯನ್ನು ಬಳಸಿ ಆಸ್ಪತ್ರೆಯವರು ನಮಗೆ ಕರೆ ಮಾಡಿ ದೇವಿಯ ಸಾವನ್ನು ಖಚಿತಪಡಿಸಿದರು. ನಾವು ಕೂಡಲೇ ಆಕೆಯ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ಆಕೆಯ ಪೋಷಕರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ದೇವಿಯ ಸ್ನೇಹಿತರು ಹೇಳುತ್ತಾರೆ.