
ಮಂಡ್ಯ: ಶಿಕ್ಷಣ ಆಧುನಿಕ ಯುಗದ ಆಯುಧವಾಗಿದ್ದು ಮಕ್ಕಳ ಭವಿಷ್ಯ ಕಲಿಸುವ ಶಿಕ್ಷಕ ಹಾಗೂ ಕಲಿಯುವ ಮಕ್ಕಳ ಸಾಮರ್ಥ್ಯದ ಮೇಲೆ ನಿಂತಿದೆ ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು. ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಅವರ ಸ್ವಗ್ರಾಮ ಹರಳಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುನರಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

j3tvkannada
ಕಳೆದ 2 ವರ್ಷಗಳಿಂದ ಅನಿವಾರ್ಯ ಕಾರಣಗಳಿಂದ ಮುಚ್ಚಿದ್ದ ಶಾಲೆಯನ್ನು ಏನಾದರೂ ಮಾಡಿ ಆರಂಭಿಸಬೇಕು ಎಂಬ ಮಹದಾಸೆಯಿಂದ ಪೋಷಕರಿಗೆ ನಾನೇ ಮನವಿ ಮಾಡಿಕೊಂಡು ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡುತ್ತೇನೆ ಎಂದು ಬಿ.ಇ.ಓಗೆ ಹೇಳಿ ಸಭೆ ಮಾಡಿ ಪೋಷಕರ ಮನವೊಲಿಸಲಾಗಿ 20ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲಾಗಿದೆ. ಖಾಸಗಿ ಶಾಲೆಗೂ ಸೆಡ್ಡು ಹೊಡೆಯುವಂತೆ ಶಿಕ್ಷಣ ಕೊಡಲು ಸೂಚಿಸಿದ್ದು ಇಬ್ಬರು ಉತ್ತಮ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪಾಠ ಪ್ರವಚನಗಳಿಗೆ ಅಗತ್ಯ ಪಾಠೋಪಕರಣಗಳನ್ನು ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಗ್ರಾಮಿಣ ಪ್ರದೇಶದ ಸರ್ಕಾರಿ ಶಾಲೆಗೆ ಸೇರಿಸಿದರೆ ಮುಂದೆ ಗ್ರಾಮೀಣ ಕೃಪಾಂಕ, ಕನ್ನಡ ಮಾದ್ಯಮದ ವ್ಯಾಸಂಗದ ಅನುಕೂಲ ಮುಂತಾದುವುಗಳು ದೊರೆಯಲಿವೆ.
ಪೋಷಕರು ಕೇವಲ ಖಾಸಗಿ ಶಾಲೆಗಳಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ ಎಂಬ ಭಾವನೆ ಬಿಡಬೇಕು. ನೀವು ಯಾವ ಶಾಲೆಯಲ್ಲಿ ಓದಿದ್ದೀರಿ ಎಂಬುದು ಮುಖ್ಯವಲ್ಲ ಎಷ್ಟು ಕಲಿಕೆಯಾಗಿದೆ ಎಂಬುದು ಮುಖ್ಯ. ಮಕ್ಕಳ ಭವಿಷ್ಯ ಕಲಿಸುವ ಶಿಕ್ಷಕ ಹಾಗೂ ಮಕ್ಕಳ ಕಲಿಯುವ ಸಾಮರ್ಥ್ಯದ ಮೇಲೆ ನಿಂತಿದೆ. ಪಟ್ಟಣದ ಹಲವಾರು ಖಾಸಗಿ ಶಾಲೆಗಳಿಗೆ ನೀವು ಮಕ್ಕಳನ್ನು ಕಳುಹಿಸುತ್ತಿದ್ದೀರಿ ಪ್ರತಿ ದಿನ ಎರಡು ಗಂಟೆ ಬಸ್ಸಿನಲ್ಲಿ ಹೋಗಿ ಬರಲು ಸಮಯ ವ್ಯರ್ಥವಾಗುತ್ತದೆ. ಒಂದು ವರ್ಷದಲ್ಲಿ ಆರು ನೂರು ಗಂಟೆಗಳ ಸಮಯ ಅನಾವಶ್ಯಕವಾಗಿ ವ್ಯಯವಾಗಲಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದರು.
ಇದೇ ಸಂದರ್ಭದಲ್ಲಿ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೋಟ್ಬುಕ್ಗಳನ್ನು ವಿತರಿಸಲಾಯಿತು. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್, ಪಿ.ಎಂ ಘೋಷಣ್ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಗ್ರಾಪಂ ಅಧ್ಯಕ್ಷ ಅಶೋಕ್, ಮಾಜಿ ಅಧ್ಯಕ್ಷರಾದ ಶಿವಲಿಂಗೇಗೌಡ, ಭೈರಾಪುರಹರೀಶ್, ಗ್ರಾಪಂ ಉಪಾದ್ಯಕ್ಷರು ಸದಸ್ಯರು, ಪಿ.ಡಿ.ಓ ಬಸವಶೆಟ್ಟಿ, ಕಾರ್ಯದರ್ಶಿ ಮಹದೇವ, ಬಿ.ಆರ್.ಪಿಗಳಾದ ಕನಗನಹಳ್ಳಿ ಮಂಜು, ಮೋಹನ್, ಸಿ.ಆರ್.ಪಿ ಮಹೇಶ್, ಸೇರಿದಂತೆ ಹಲವರಿದ್ದರು.