ಚಿತ್ರದುರ್ಗ: ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ರಸ್ತೆ ಕಾಮಗಾರಿಗಳು ಭರದಿಂದ ಸಾಗುತ್ತಿರುತ್ತವೆ. ಹಾಗೆಯೇ ಚಿತ್ರದುರ್ಗ ಜಿಲ್ಲೆಯ ನಗರದಲ್ಲಿ ರಸ್ತೆ ಅಗಲೀಕರಣದ ವಿಚಾರ ತೀವ್ರ ಚರ್ಚೆಯಲ್ಲಿದೆ. ಇದರ ನಡುವೆಯೇ ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಎರಡು ಜೆ.ಸಿ.ಬಿ.ಗಳು ಬಂದು ಗಾಂಧಿ ವೃತ್ತದಲ್ಲಿ ನಿಂತ ತಕ್ಷಣ ಕಟ್ಟಡ ಮಾಲಿಕರಲ್ಲಿ ನಡುಕ ಶುರುವಾಗಿತ್ತು.

j3tvkannada.in
ಅಧಿಕಾರಿಗಳು, ಸಾಕಷ್ಟು ಮಂದಿ ಸಾರ್ವಜನಿಕರು ತಕ್ಷಣವೇ ಅಲ್ಲಿಗೆ ಜಮಾಯಿಸಿದರು. ಸಂಚಾರಕ್ಕೆ ಅಡ್ಡಿಯಾಗಿದ್ದ ಗಾಂಧಿ ವೃತ್ತದ ಪಕ್ಕದಲ್ಲೇ ಇರುವ ಕಟ್ಟಡವೊಂದನ್ನು ತೆರವುಗೊಳಿಸಲು ಆರಂಭಿಸಿದರು. ಬಾಟೆಲ್ ನೆಕ್ ರೀತಿಯಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿರುವ ಕಟ್ಟಡಗಳ ತೆರವಿಗೆ ನಗರಸಭೆ ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದು ಕಾರ್ಯಾಚರಣೆಗೆ ಇಳಿದಿದ್ದಾರೆ.
ಹಳೆಯ ಕಟ್ಟಡದ ಮೂರು ಮಳಿಗೆಗಳನ್ನು ಎರಡು ಜೆ.ಸಿ.ಬಿ.ಗಳ ಮೂಲಕ ತೆರವು ಮಾಡಲು ಪೊಲೀಸ್ ಭದ್ರತೆಯೊಂದಿಗೆ ಚಾಲನೆ ನೀಡಲಾಯಿತು. ನಗರಸಭೆಯ ಕಟ್ಟಡ ತೆರವು ಕಾರ್ಯಾಚರಣೆಗೆ ಅಲ್ಲಿನ ಮಳಿಗೆಗಳ ಮಾಲಕರು, ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಕಟ್ಟಡ ತೆರವು ಮಾಡುವುದರಿಂದ ನಮ್ಮ ಕಟ್ಟಡಗಳಿಗೂ ತೊಂದರೆಯಾಗಲಿದೆ ಎಂದು ಅಕ್ಕಪಕ್ಕದ ಕಟ್ಟಡದ ಮಾಲಿಕರು ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ತಿಳಿಸಿದರೂ ಕೂಡಾ ಮಾತಿನ ಚಕಮಕಿ ಮುಂದುವರೆದಿತ್ತು. ಅಂತಿಮವಾಗಿ ಪೊಲೀಸರ ಭದ್ರತೆಯೊಂದಿಗೆ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರೆದಿದೆ.