
ಕೋಲಾರ: ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಹಣ ಆಸ್ತಿ ಹೊಂದಿರುವವರ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗುತ್ತದೆ. ಇನ್ನು ಇದೀಗ ಕೋಲಾರದಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಎಪಿಎಂಸಿ ಮಾರುಕಟ್ಟೆ ಹಾಗೂ ಜೈಲಿಗೆ ಇಂದು (ಮಾರ್ಚ್ 10) ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ಹೊರಹಾಕಿದರು.
ಎಪಿಎಂಸಿಯಲ್ಲಿ ರೈತರಿಗೆ ನೀರಿನ ವ್ಯವಸ್ಥೆ ಇಲ್ಲ, ತ್ಯಾಜ್ಯ ತುಂಬಿ ತುಳುಕಾಡುತ್ತಿದೆ. ಇದರಿಂದ ಕೆಟ್ಟ ವಾಸನೆ ಹರಡಿಬಿಟ್ಟಿದೆ. ಈ ನಡುವೆಯೂ ಕಮಿಷನ್ ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ. ಒಳಗೆ ಏನು ನಡೆಯುತ್ತಿದೆ ಎಂಬುದು ಅಲ್ಲಿನ ಅಧಿಕಾರಿಗಳಿಗೇ ಗೊತ್ತಿಲ್ಲ. ಅವರು ಏನು ಕೆಲಸ ಮಾಡುತಿದಾದ್ದರೆ ಎಂದು ಪರಿಶೀಲಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ ಎಂದರು.
ವಸತಿ ಪ್ರದೇಶದ ನಡುವೆ ಜೈಲು ಇದೆ. ಪಕ್ಕದ ಮನೆಯಿಂದ ಏನಾದರೂ ಎಸೆಯಬಹುದು. ಮೊದಲು ನಗರದ ಹೊರಕ್ಕೆ ಸ್ಥಳಾಂತರಿಸಿ ಎಂದು ಸೂಚನೆ ನೀಡಿದರು. ನಗರದ ನೈರ್ಮಲ್ಯ ಪ್ರಶ್ನಿಸಿದಾಗ ಸಿಬ್ಬಂದಿ ಇಲ್ಲ ಎಂಬ ಉತ್ತರ ಕೇಳಿಬಂದಿದೆ. ಆಗ ವೀರಪ್ಪ ಸಿಬ್ಬಂದಿ ಕೊರತೆ ಊಟ ಮಾಡದೇ ಇರುತ್ತೀರಾ? ಏಕೆ ಸ್ವಚ್ಛತೆ ಮಾಡುತ್ತಿಲ್ಲ? ಲೋಕಾಯುಕ್ತದಲ್ಲಿ ಸಿಬ್ಬಂದಿ ಇಲ್ಲ ಎಂದು ನಾವು ಕೆಲಸ ಮಾಡದೇ ಸುಮ್ಮನಿದ್ದೇವೆಯೇ ಎಂದು ಕೋಲಾರ ನಗರಸಭೆ ಪೌರಾಯುಕ್ತರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.