
ಉಡುಪಿ: ಕನ್ನಡ ಬಿಗ್ ಬಾಸ್ ಸೀಸನ್ 11ರ ಫೈರ್ಬ್ರ್ಯಾಂಡ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಚೈತ್ರಾ ಕುಂದಾಪುರ, ಮೇ 9, 2025ರಂದು ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಕಾಂತ್ ಕಶ್ಯಪ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ಸಂತಸದ ಬೆನ್ನಲ್ಲೇ ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್, ತಮ್ಮ ಮಗಳ ಮದುವೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚೈತ್ರಾ ಮತ್ತು ಆಕೆಯ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

j3tvkannada
ತಮ್ಮ ಮಗಳಾದ ಚೈತ್ರಾ ಕುಂದಾಪುರ ತನ್ನ ಮದುವೆಗೆ ತನ್ನನ್ನು ಆಹ್ವಾನಿಸಲಿಲ್ಲ ಎಂದು ಆರೋಪಿಸಿರುವ ತಂದೆ ಬಾಲಕೃಷ್ಣ ನಾಯ್ಕ್. ಚೈತ್ರಾ ನನ್ನನ್ನು ಕರೆದಿಲ್ಲ, ನಾನೂ ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ ಎಂದಿದ್ದಾರೆ. ಇದಲ್ಲದೆ ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್ ಕಶ್ಯಪ್ ಇಬ್ಬರನ್ನೂ ‘ಕಳ್ಳರು’ ಎಂದು ಕರೆದು, ಅವರಿಗೆ ಮಾನ-ಮರ್ಯಾದೆ ಇಲ್ಲ. ಚೈತ್ರ ಮದುವೆ ಸಂದರ್ಭ ನನ್ನಲ್ಲಿ ಹಣ ಕೇಳಿದಳು ನಾನು ಹೋಟೆಲ್ ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಹಣ ಕೊಡಲಾಗಿಲ್ಲ. ಹೀಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರಾ ಮತ್ತು ನನ್ನ ಪತ್ನಿ ಹಣದ ಆಸೆಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ ಎಂದು ಬಾಲಕೃಷ್ಣ ನಾಯ್ಕ್ ಭಾವುಕರಾಗಿ ಹೇಳಿದ್ದಾರೆ.
ಗೋವಿಂದ ಬಾಬು ಪೂಜಾರಿ ಪ್ರಕರಣದ ಬಗ್ಗೆಯೂ ಆರೋಪ:-
ಗೋವಿಂದ ಬಾಬು ಪೂಜಾರಿ ಪ್ರಕರಣದ ಬಗ್ಗೆಯೂ ಮಾತನಾಡಿರುವ ಬಾಲಕೃಷ್ಣ ನಾಯ್ಕ್, ಮಗಳು ಚೈತ್ರಾ ಕುಂದಾಪುರ ಹಣ ಹಂಚಿಕೊಂಡಿದ್ದಾರೆ . ಪಡ್ಡೆ ಹುಡುಗರ ಹೆಸರಿನಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಳು. ಬಾಂಡ್ ಮೇಲೆ ಸಾಲ ಪಡೆದಿದ್ದಳು ಎಂದು ಅವರು ಆರೋಪಿಸಿದ್ದಾರೆ. ಇದರ ಜೊತೆಗೆ, ಚೈತ್ರಾ ತನ್ನ ಸ್ವಂತ ಹಣದಿಂದ ಸೈನಿಕರಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ ಆದರೆ ಮೋಸದ ಹಣದಿಂದ ಕೊಟ್ಟರೆ ಅದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ನನ್ನ ಪತ್ನಿಯೂ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ:-
ಪತ್ನಿಯ ವಿರುದ್ಧವೂ ಗಂಭೀರ ಆರೋಪ ಮಾಡಿರುವ ಬಾಲಕೃಷ್ಣ ನಾಯ್ಕ್, ನನ್ನ ಪತ್ನಿಯೂ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಹೆಂಡತಿಗೆ ಗೌರವ ಬೇಕಾಗಿಲ್ಲ. ಹಣವಿದ್ದರೆ ಸಾಕು. ಹಣಕ್ಕಾಗಿ ಚೈತ್ರಾಗೆ ಸಪೋರ್ಟ್ ಮಾಡ್ತಿದ್ದಾಳೆ. ಚೈತ್ರಾ ಬಿಗ್ ಬಾಸ್ಗೆ ಹೋಗುವಾಗಲೂ ನನಗೆ ತಿಳಿಸಿಲ್ಲ. ನನ್ನ ಪತ್ನಿ ನನ್ನನ್ನು ಕೂಡಿ ಹಾಕಿ ಬಿಗ್ ಬಾಸ್ಗೆ ಹೋಗಿದ್ದಳು ಎಂದು ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ದೊಡ್ಡ ಮಗಳ ಬಗ್ಗೆ ಹೆಮ್ಮೆ:-
ಬಾಲಕೃಷ್ಣ ನಾಯ್ಕ್ ಅವರು ತಮ್ಮ ದೊಡ್ಡ ಮಗಳಾದ ಗಾಯತ್ರಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಆಕೆ ನಿರಪರಾಧಿ ಎಂದು ಹೇಳಿದ್ದಾರೆ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ಗಾಯತ್ರಿ ಶಾಲೆಯ ಕೆಲಸ ಮಾಡಿಕೊಂಡು, ಹೊಲಿಗೆ ಮಾಡಿಕೊಂಡು ಗೌರವಾನ್ವಿತ ಜೀವನ ನಡೆಸುತ್ತಿದ್ದಾಳೆ, ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಆದರೆ ಬಿಗ್ ಬಾಸ್ನಲ್ಲಿ ಮನೆ ಜವಾಬ್ದಾರಿ ತಾನೇ ಹೊತ್ತಿರುವಂತೆ ಹೇಳಿರುವ ಚೈತ್ರಾಳ ಮಾತು ಸುಳ್ಳ. ನನ್ನ ದೊಡ್ಡ ಮಗಳ ಮೇಲೂ ಸುಳ್ಳು ಅಪವಾದ ಹಾಕಿದ್ದಾಳೆ. ಚೈತ್ರಾ ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ಆಕೆ ಮತ್ತೆಂದೂ ನನ್ನ ಜೀವನದಲ್ಲಿ ಬರಲೇ ಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸ್ಕೃತಿ ಬಗ್ಗೆ ಮಾತಾಡುವುದು ಎಷ್ಟು ಸರಿ?
ತಂದೆಯನ್ನು ದೂರವಿಟ್ಟವರು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಬಾಲಕೃಷ್ಣ ನಾಯ್ಕ್ ಪ್ರಶ್ನಿಸಿದ್ದಾರೆ. ಚೈತ್ರಾ ಹೊರಗಡೆ ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಜನರ ಸಿಂಪಥಿ ಪಡೆಯುತ್ತಾಳೆ ಎಂದು ಆರೋಪಿಸಿದ ಅವರು, ನನ್ನ ತಂದೆ ಬಾಲ ನಾಯ್ಕ್ ಗೌರವಾನ್ವಿತ ವ್ಯಕ್ತಿಯಾಗಿದ್ದರು. ತಂದೆಗೆ ಅನ್ನ ಹಾಕದವಳು ಏನು ದೇಶ ಸೇವೆ ಮಾಡುತ್ತಾಳೆ ಎಂದು ಕಿಡಿಕಾರಿದ್ದಾರೆ.
ಚೈತ್ರಾಳ ಮದುವೆ: ಹನ್ನೆರಡು ವರ್ಷದ ಪ್ರೀತಿ:-
ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಕಶ್ಯಪ್ ಅವರ 12 ವರ್ಷಗಳ ಪ್ರೀತಿ, ವೈದಿಕ ಶಾಸ್ತ್ರದಂತೆ ನಡೆದ ಸರಳ ಮದುವೆಯಾಗಿ ಪೂರ್ಣಗೊಂಡಿತು. ಮದುವೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್, ಗೋಲ್ಡ್ ಸುರೇಶ್, ಧನರಾಜ್ ಸೇರಿದಂತೆ ಆಪ್ತರು ಭಾಗವಹಿಸಿದ್ದರು. ರಜತ್, ಚೈತ್ರಾಳ ಅಣ್ಣನ ಸ್ಥಾನದಲ್ಲಿ ಮದುವೆಯ ಶಾಸ್ತ್ರಗಳನ್ನು ನೆರವೇರಿಸಿದ್ದರು. ಆದರೆ, ಈ ಸಂತಸದ ಸಂದರ್ಭದ ಮಧ್ಯೆ ತಂದೆಯ ಆಕ್ಷೇಪಗಳು ಮತ್ತು ಆರೋಪಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.