
ಯಾದಗಿರಿ: ಹುಣಸಗಿ ತಾಲೂಕಿನ ಬರದೇವನಹಾಳ ಗ್ರಾಮದ ಸರ್ವೆ ನಂ 81/2 ರಲ್ಲಿಯ 5 ಎಕರೆ 32 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ಸಹಾಯಕ ಆಯುಕ್ತರ ಸಹಿಯನ್ನೇ ಫೋರ್ಜರಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರ ಹೆಸರಿನಲ್ಲಿ ನಕಲಿ ಸಹಿ ಮಾಡಿದ್ದ ವಕೀಲ ಶಂಕರಗುರು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

j3tvkannada
ಸಹಾಯಕ ಆಯುಕ್ತರ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ ನಕಲಿ ಆದೇಶ 5 ಎಕರೆ 32 ಗುಂಟೆ ಜಮೀನನ್ನು ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಈರಣ್ಣ ಮತ್ತು ಮಲ್ಲಪ್ಪ ಎಂಬುವವರು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ವಕೀಲ ಶಂಕರಗುರು ಅವರಿಗೆ ಬರೋಬ್ಬರಿ 8 ಲಕ್ಷ ರೂ ಹಣ ನೀಡಿ ಮೋಸ ಹೋಗಿದ್ದಾರೆ.
ಹಣ ಪಡೆದುಕೊಂಡ ವಕೀಲರೊಬ್ಬರು ಸಹಾಯಕ ಆಯುಕ್ತರ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ ನಕಲಿ ಆದೇಶ ಕೂಡ ನೀಡಿದ್ದಾರೆ. ಈ ಆದೇಶದ ಬಗ್ಗೆ ಅನುಮಾನ ಬಂದಿದ್ದರಿಂದ ಸಹಾಯಕ ಆಯುಕ್ತರ ಕಚೇರಿಗೆ ಬಂದು ವಿಚಾರಿಸಿದಾಗ ಫೋರ್ಜರಿ ಸಹಿ ಮಾಡಿರುವ ಹಗರಣ ಬೆಳಕಿಗೆ ಬಂದಿದೆ.
ಸಹಾಯಕ ಆಯುಕ್ತರ ಸೂಚನೆ ಮೇರೆಗೆ ಸಹಾಯಕ ಆಯುಕ್ತರ ಕಚೇರಿಯ ಎಸ್.ಡಿ.ಎ ಬಾಪುಗೌಡ ದೋರನಹಳ್ಳಿ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶಂಕರಗುರು ವಕೀಲನನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ಹಣದ ವ್ಯವಹಾರ ಹಾಗೂ ಫೋರ್ಜರಿ ಸಹಿಯ ಬಗ್ಗೆಯೂ ಪರಿಶೀಲನೆ ಕಾರ್ಯ ಆರಂಭಿಸಿರುವ ಪೊಲೀಸರು ಪ್ರಕರಣದ ಸಂಬಂಧ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹಣ ಮರಳಿಸುತ್ತೇನೆ, ಬಿಟ್ಟುಬಿಡಿ ಎಂದ ಆರೋಪಿ:-
ಸಹಾಯಕ ಆಯುಕ್ತರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಅರ್ಜಿದಾರರ ಪರವಾಗಿ ಆದೇಶ ಮಾಡಿರುವುದು ಬಯಲಾಗುತ್ತಿದ್ದಂತೆ ವಕೀಲ ಶಂಕರಗುರು ತಮ್ಮಿಂದ ತಪ್ಪಾಗಿ ಪಡೆದ ಹಣವನ್ನು ಮರಳಿಸುತ್ತೇನೆ. ತಮ್ಮನ್ನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಹಾಳ ಗ್ರಾಮದ ಇನ್ನೊಬ್ಬ ವ್ಯಕ್ತಿಗೂ ಇದೇ ರೀತಿ ಮೋಸ ಮಾಡಲು ಶಂಕರಗುರು ಪ್ರಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದೇ ರೀತಿ ಇತರರು ಮೋಸ ಹೋಗಿರುವ ಸಾಧ್ಯತೆಗಳಿವೆ.