
ಬಳ್ಳಾರಿ: ಮಳೆಯ ಆತಂಕ, ಬಿರು ಬಿಸಿಲಿನ ತಾಪದ ನಡುವೆ ಬಿತ್ತನೆ ಮಾಡಿ ನಿರೀಕ್ಷೆಯಂತೆ ಉತ್ತಮ ಇಳುವರಿ ಕಂಡ ಭತ್ತದ ಬೆಳೆಗೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಬಾರದೇ ಇರುವುದರಿಂದ ರೈತರಿಗೆ ಈ ಬಾರಿಯೂ ಗೋಳು ತಪ್ಪದಂತಾಗಿದೆ.

j3tvkannada
ಜಿಲ್ಲೆಯ ಕಂಪ್ಲಿ, ಸಿರುಗುಪ್ಪ, ಸಂಡೂರು, ಕುರುಗೋಡು ಹಾಗೂ ಬಳ್ಳಾರಿ ತಾಲೂಕು ಸೇರಿ ಒಟ್ಟು ನೀರಾವರಿ 108943 ಹೆಕ್ಟೇರ್, ಖುಷ್ಕಿ 64953 ಹೆಕ್ಟೇರ್ ಪ್ರದೇಶವಿದ್ದು, ಇದರಲ್ಲಿ ಬೇಸಿಗೆ ಹಂಗಾಮಿನಲ್ಲಿ ತುಂಗಭದ್ರಾ ಜಲಾಶಯ ಆಶ್ರಿತ ಎಚ್.ಎಲ್.ಸಿ, ಎಲ್.ಎಲ್.ಸಿ ಅವಲಂಬಿತ ಹಾಗೂ ಪಂಪ್ಸೆಟ್ ಆಧಾರಿತ ಸೇರಿ ಸುಮಾರು 3 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತ ಬಿತ್ತಿದ್ದಾರೆ.
ಭತ್ತದ ಬೆಲೆಗಾಗಿ ಪರದಾಟ:-
ಜಿಲ್ಲೆಯಲ್ಲಿ ಸೋನಾ ಮಸುರಿ, ಗಂಗಾ ಕಾವೇರಿ, ಆರ್.ಎನ್.ಆರ್ ತಳಿಯ ಭತ್ತದ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಭತ್ತಕ್ಕೆ 1800-1900ರೂ.ವರೆಗೆ ಸದ್ಯ ಮಾರಾಟ ಮಾಡಲಾಗುತ್ತಿದೆ. ಆರಂಭದಲ್ಲಿ ಪ್ರತಿ ಕ್ವಿಂಟಾಲ್ ಭತ್ತ ಚೀಲಕ್ಕೆ 2 ಸಾವಿರಕ್ಕೂ ಅಧಿಕ ಬೆಲೆಯಿತ್ತು. ಈಗ 300-400 ರೂ. ಬೆಲೆ ಕುಸಿತ ಕಂಡಿದೆ. ಅಲ್ಲದೆ, ಕೆಲವೆಡೆ 1300 ರೂ.ಗೂ ಭತ್ತ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಪ್ರತಿ ದಿನ ಬೆಲೆ ಏರಿಕೆಯಾಗುತ್ತಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.
ರೈತರಿಗೆ ಮಳೆಯ ಆತಂಕ:-
ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರು ಈಗಾಗಲೇ ಬೆಳೆಯನ್ನು ಕಟಾವು ಮಾಡಿ ಉತ್ತಮ ಬೆಲೆಗಾಗಿ ಜಮೀನುಗಳಲ್ಲಿ, ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಭತ್ತದ ರಾಶಿಗಳನ್ನು ಹಾಕಿಕೊಂಡು ಕಾಯುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಆತಂಕ ಎದುರಾಗುವಂತಾಗಿದೆ. ಮಳೆಗೆ, ಬೆಳೆ ನೀರು ಪಾಲಾಗುವುದನ್ನು ತಪ್ಪಿಸಲು ಹೆಚ್ಚುವರಿ ಖರ್ಚು ಮಾಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ದಲ್ಲಾಳಿಗಳು, ವ್ಯಾಪಾರಿಗಳು ಕೇಳುವ ದರಕ್ಕೆ ಬೆಳೆ ಮಾರಾಟ ಮಾಡುವಂತಾಗಿದೆ. ತುಮಕೂರು, ದಾವಣಗೆರೆ ಸೇರಿ ನೆರೆಯ ಆಂಧ್ರದ ಭಾಗಗಳಿಂದಲೂ ವ್ಯಾಪಾರಿಗಳು ಜಿಲ್ಲೆಯಲ್ಲಿ ಬೀಡು ಬಿಟ್ಟು ಭತ್ತ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಖರೀದಿ ಕೇಂದ್ರಕ್ಕೆ ಬಾರದ ರೈತರು:-
ಮುಂಗಾರು ಹಂಗಾಮಿನ ಭತ್ತದ ಬೆಳೆ ಖರೀದಿಗಾಗಿ ಸರಕಾರದಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಭತ್ತಕ್ಕೆ 2300ರೂ. ಬೆಲೆಯನ್ನು ಸಹ ನಿಗದಿಪಡಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಸುಮಾರು 450 ಜನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈವರೆಗೂ ಯಾವ ರೈತರು ಖರೀದಿ ಕೇಂದ್ರದತ್ತ ಬಾರದೇ ಇರುವುದು ವಿಪರ್ಯಾಸವಾಗಿದೆ.
ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರಿಗೆ ಈ ಬಾರಿ ಉತ್ತಮ ಇಳುವರಿ ಬಂದರೂ, ಬೆಲೆ ಇಲ್ಲದಂತಾಗಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ಗೆ 2200ರೂ. ಗೂ ಅಧಿಕ ಬೆಲೆ ದೊರಕಿತ್ತು. ಆದರೆ, ಈ ಬಾರಿ 1800ರೂ.ಗೆ ಕುಸಿದಿದೆ. ಖರೀದಿ ಕೇಂದ್ರದಲ್ಲಿ ಮಾರಾಟಕ್ಕೆ ನಾನಾ ನಿಯಮಗಳಿಂದಾಗಿ ರೈತರು ಮಾರಾಟಕ್ಕೆ ಹಿಂಜರಿಯುತ್ತಿದ್ದಾರೆ. ಭತ್ತ ಕಟಾವು ಆರಂಭದಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈಗ ಆರಂಭಿಸಿದರೆ, ಇದರಿಂದ ದೊಡ್ಡ ರೈತರಿಗೆ ಅನುಕೂಲವಾಗಲಿದ್ದು, ಸಣ್ಣ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ.