
ಬೆಂಗಳೂರು: ನಗರದ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತದ ಘಟನೆ ಹಲವು ತಿರುವುಗಳನ್ನು ಪಡೆಯುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಅವರನ್ನು ತುರ್ತಾಗಿ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆಯನ್ನು ನೀಡಿದೆ. ಇನ್ನು ವಿಧಾನಸೌಧದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಕೂಡಾ ಭಾಗವಹಿಸಿದ್ದರು. ಅಸಲಿಗೆ, ರಾಜಭವನವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್ಮಾನಿಸಲು ಯೋಚಿಸಿತ್ತು ಎನ್ನುವ ಮಾಹಿತಿಯನ್ನು ರಾಜಭವನದ ಮೂಲಗಳೇ ನೀಡಿವೆ.

j3tvkannada
ರಾಯಲ್ ಚಾಲೆಂಜರ್ಸ್ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಲ್ಲ, ಅದನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಯದ್ದು (KSCA). ಅವರೇ ರಾಜ್ಯಪಾಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸರ್ಕಾರ ಪೊಲೀಸ್ ಇಲಾಖೆ ಮತ್ತು ಕ್ರಿಕೆಟ್ ಸಂಸ್ಥೆಗಳು ತಮ್ಮದೇ ದಾಟಿಯಲಿ ವಾದವನ್ನು ಮುಂದಿಡುತ್ತಿದ್ದು, ಘಟನೆಗೆ ಯಾರೂ ಹೊಣೆ ಹೊರಲು ಸಿದ್ದರಿಲ್ಲ. ಈ ನಡುವೆ, ವಿಧಾನಸೌಧದ ಆವರಣದಲ್ಲಿ ಭದ್ರತಾ ದೃಷ್ಟಿಯಿಂದ ಬೇಡ ಎಂದು ಡಿಸಿಪಿ ಕಚೇರಿ, ಸರ್ಕಾರಕ್ಕೆ ನೀಡಿರುವ ಪತ್ರ, ವೈರಲ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 35 ಸಾವಿರ ಸಾಮರ್ಥ್ಯದ ಕ್ರೀಡಾಂಗಣದ ಸುತ್ತ 2-3 ಲಕ್ಷ ಜನ ಜಮಾಯಿಸಿದ್ದರು.

j3tvkannada
ಕರ್ನಾಟಕದ ರಾಜ್ಯಪಾಲರು ಆರ್ಸಿಬಿ ಆಟಗಾರರನ್ನು ರಾಜಭವನದಲ್ಲಿ ಸನ್ಮಾನಿಸಲು ಕಾರ್ಯಕ್ರಮ ಆಯೋಜಿಸಲು ಯೋಜಿಸಿದ್ದರು. ಆದರೆ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯಪಾಲರನ್ನು ಅಧಿಕೃತವಾಗಿ ಆಹ್ವಾನಿಸಿದ್ದರು. ಸಿ.ಎಂ ಸಿದ್ದರಾಮಯ್ಯನವರ ಇಂದಿನ ಮತ್ತು ಹಿಂದಿನ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ರಾಜಭವನ ಈ ಸ್ಪಷ್ಟನೆಯನ್ನು ನೀಡಿದೆ. ಕಾಲ್ತುಳಿತದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸಿಎಂ ಈ ಹೇಳಿಕೆಯನ್ನು ನೀಡಿದ್ದಾರೆ.
ಕಾಲ್ತುಳಿತದ ಘಟನೆ ಮತ್ತು ಬೆಂಗಳೂರು ಕಮಿಷನರ್ ದಯಾನಂದ್ ಅವರ ಅಮಾನತಿನ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿವೆ. ಇದರಲ್ಲಿ, ಸರ್ಕಾರದ ಏನೂ ಲೋಪದೋಷಗಳಿಲ್ಲ ಎಂದು ಸಿದ್ದರಾಮಯ್ಯ, ವಿಪಕ್ಷಗಳ ನಿಲುವನ್ನು ಖಂಡಿಸಿದ್ದಾರೆ. ಈಗಾಗಲೇ, ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಸಿಎಂ ಹೇಳಿದ್ದಾರೆ. ಕಾರ್ಯಕ್ರಮ ಮತ್ತು ಕಾಲ್ತುಳಿತದ ಬಗ್ಗೆ ಆರಂಭಿಕ ಹಂತದಲ್ಲಿ ಹೆಚ್ಚಿನ ಮಾಹಿತಿ ನನಗಿರಲಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮಕ್ಕೆ ಡಿಪಿಎಆರ್ ಇಲಾಖೆ ಅನುಮತಿಯನ್ನು ನೀಡಿತ್ತು. ಆದರೆ ವಿಧಾನಸೌಧದ ಮೆಟ್ಟಿಲುಗಳಲ್ಲಿ ಸಮಾರಂಭ ನಡೆಸಲು ನಾನು ಹೇಳಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಸಲಿಗೆ ಐಪಿಎಲ್ ಫೈನಲ್ ಮರುದಿನ ವಿಜಯೋತ್ಸವ ನಡೆಸಲು ಬೆಂಗಳೂರು ಪೊಲೀಸರು ಅನುಮತಿಯನ್ನು ನೀಡಿರಲಿಲ್ಲ. ಅದರ ಬದಲು ಭಾನುವಾರದಂದು ನಡೆಸುವಂತೆ ಸೂಚಿಸಿತ್ತು. ಆದರೆ ಕೆಲವು ಕಾರಣಗಳನ್ನು ನೀಡಿ, ಮರುದಿನವೇ ಸಂಭ್ರಮಾಚರಣೆ ಮಾಡಬೇಕೆಂದು ಹಠ ಹಿಡಿದ ಹಿನ್ನಲೆಯಲ್ಲಿ ಇಷ್ಟೆಲ್ಲಾ ಅನಾಹುತಕ್ಕೆ ಇದು ಕಾರಣವಾಯಿತು.