
ಬೆಳಗಾವಿ: ಸೈನಿಕನಾಗಿ ದೇಶಕ್ಕಾಗಿ ಸಮರ್ಪಿಸಿಕೊಂಡವನಿಗೆ ವೈಯಕ್ತಿಕ ಬದುಕಿಗಿಂತ ದೇಶ ಸೇವೆಯೇ ಮುಖ್ಯ ಎಂಬುದಕ್ಕೆ ತಾಲೂಕಿನ ಶಿರಗಾಂವದ ಯೋಧ ರವಿ ಕರೋಶಿ ಸಾಕ್ಷಿಯಾಗಿದ್ದಾರೆ. ಹಸೆಮಣೆಯೇರಿ ಮದುವೆ ಶಾಸ್ತ್ರ ಮುಗಿದ ದಿನವೇ ದೇಶ ಸೇವೆಗೆ ತೆರಳಿದ್ದಾರೆ.

j3tvkannada
ದೇಶದ ಗಡಿ ಭಾಗದಲ್ಲಿ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಸೇನಾ ಕಚೇರಿಯಿಂದ ಅವರಿಗೆ ತುರ್ತು ಕರೆ ಬಂದಿತ್ತು. ಬುಧವಾರ ಮದುವೆ ನಿಶ್ಚಯವಾಗಿದ್ದು, ಅದೇ ದಿನವೇ ಪ್ರಯಾಣ ಬೆಳೆಸಿ ಕರ್ತವ್ಯಕ್ಕೆ ಬರಲು ಅವಕಾಶ ನೀಡುವಂತೆ ರವಿ ಕರೋಶಿ ಅವರು ವಿನಂತಿಸಿದ್ದರು. ಇದಕ್ಕೆ ಸೇನಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು.
ಪೂರ್ವ ನಿಗದಿಯಂತೆ ರವಿ ಕರೋಶಿ ಅವರ ವಿವಾಹ ಪೂಜಾ ಅವರೊಂದಿಗೆ ಗ್ರಾಮದ ಬಸವೇಶ್ವರ ಮಂದಿರದಲ್ಲಿ ಬುಧವಾರ ಅದ್ಧೂರಿಯಾಗಿ ನಡೆಯಿತು. ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡು ಮದುವೆಗೆ ಬಂದ ಅತಿಥಿ, ಅಭ್ಯಾಗತರಿಂದ ಅಕ್ಷತೆ ಹಾಕಿಸಿಕೊಂಡು ಸಂಜೆ ರಾಜಸ್ಥಾನಕ್ಕೆ ತೆರಳಿದರು.
ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮಿಗಳು ನವದಂಪತಿಗೆ ವಿಶೇಷವಾಗಿ ಸನ್ಮಾನಿಸಿ, ಯೋಧನ ಕರ್ತವ್ಯನಿಷ್ಠೆ ಶ್ಲಾಘಿಸಿದರು. ರವಿ ಅವರ ತಂದೆ ಸುರೇಶ ಕರೋಶಿ, ತಾಯಿ, ನವವಧು ಪೂಜಾ, ಸಂಬಂಧಿಕರು ಹಾಗೂ ಗ್ರಾಮಸ್ಥರು ರವಿ ಅವರಿಗೆ ಆರತಿ ಮಾಡಿ, ಸನ್ಮಾನಿಸಿ, ಶುಭ ಹಾರೈಸಿದರು. ರವಿ ಕರೋಶಿ ಅವರು ಐದು ವರ್ಷಗಳಿಂದ ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶಭಕ್ತಿ ಸಂದೇಶ ಸಾರಿದ ವಧು:-
ಹಸೆಮಣೆಯೇರಿ ಕೈಹಿಡಿದ ಪತಿ ಆ ಕ್ಷಣದಲ್ಲೇ ದೇಶ ಸೇವೆಗೆ ಹೋಗುತ್ತಿರುವ ಸಂದರ್ಭದಲ್ಲಿ ವಿಚಲತೆಗೆ ಒಳಗಾಗದ ವಧು ಪೂಜಾ ಅವರು ಆಡಿದ ಮಾತುಗಳು ಮದುವೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಲ್ಲೂ ಹೆಮ್ಮೆ ಮೂಡಿಸಿತು. ನಮಗೆ ದೇಶಸೇವೆ ಮುಖ್ಯ. ಕುಟುಂಬ ನಂತರದ್ದು. ನನ್ನ ಕೈಹಿಡಿದ ಪತಿ ರಾಷ್ಟ್ರದ ರಕ್ಷಣೆಗೆ ತೆರಳುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಇದು ನಮಗೆ ದೊರೆತ ಭಾಗ್ಯ. ಗೆದ್ದು ಬನ್ನಿ, ಎಂದು ಯೋಧ ರವಿ ಅವರನ್ನು ಬೀಳ್ಕೊಟ್ಟಿದ್ದು ಎಲ್ಲರ ಶ್ಲಾಘನೆಗೆ ಕಾರಣವಾಯಿತು.