
ಬೆಂಗಳೂರು: ಕಳೆದ ಎರಡು ದಿನದಿಂದ ದೇಶದಾದ್ಯಂತ ಸುದ್ದಿಯಾಗುತ್ತಿರುವ ಹಾಗೂ ಭಾರತೀಯರು ಹೆಮ್ಮೆಯಿಂದ & ಗರ್ವದಿಂದ ಹೇಳುತ್ತಿರುವ ಹೆಸರು “ಕರ್ನಲ್ ಸೋಫಿಯಾ ಖುರೇಷಿ”. ಮತ್ತೊಂದು ವಿಶೇಷವೆಂದರೆ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಮುದ್ದು ಸೊಸೆ. ಹೌದು ನೆನ್ನೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ ದೇಶದಾದ್ಯಂತ ಸುದ್ದಿಯಾದವರಲ್ಲಿ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇಬ್ಬರು ಮಹಿಳೆಯರು. ಸಿಂಧೂರ ಕಾರ್ಯಾಚರಣೆಯ ಬಗ್ಗೆ ಎಳೆ ಎಳೆಯಾಗಿ ಹಾಗೂ ಅತ್ಯಂತ ಸ್ಪಷ್ಟವಾಗಿ ಜಗತ್ತಿಗೆ ಇವರಿಬ್ಬರು ಹೇಳಿದ್ದರು. ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಅಳೆದು ತೂಗಿ, ಒಂದೊಂದು ಪದವನ್ನೂ ಅವಶ್ಯವಿದ್ದರೆ ಮಾತ್ರ ಬಳಸಿರುವುದಕ್ಕೆ ಹಾಗೂ ಇಡೀ ಪತ್ರಿಕಾಗೋಷ್ಠಿಯ ಬಗ್ಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಿದವರಿಗೆ ಪ್ರತ್ಯುತ್ತರವನ್ನು ನೀಡಿದ್ದು, ಭಾರತೀಯ ಸೇನೆಯು ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಅಡಗುತಾಣದ ಮೇಲೆ ಕ್ಷಿಪಣಿ ದಾಳಿಯನ್ನು ಮಾಡಿದ್ದು, ಈ ಕ್ಷಿಪಣಿ ದಾಳಿಯಲ್ಲಿ 70 ಜನ ಉಗ್ರರು ಸಾವನ್ನಪ್ಪಿದ್ದಾರೆ. 60 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ಕಾರ್ಯಾಚರಣೆಯ ಸಂಪೂರ್ಣ ವಿವರವನ್ನು ನೀಡಿರುವುದು ಕರ್ನಾಟಕದ ಸೊಸೆ ಎನ್ನುವುದು ಈಗ ಕನ್ನಡಿಗರಿಗೆ ಮತ್ತೊಂದು ಖುಷಿಯ ವಿಚಾರ.
ಭಾರತೀಯ ಸೇನೆಯ ಸೋಫಿಯಾ ಖುರೇಷಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎನ್ನಲಾಗಿದ್ದು. ಇವರು ಸಹ ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭಾರತದ ಪಹಲ್ಗಾಮ್ನಲ್ಲಿ ಹಿಂದೂ – ಮುಸ್ಲಿಮರನ್ನು ಪ್ರತ್ಯೇಕಿಸಿ ಉದ್ದೇಶಪೂರ್ವಕವಾಗಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು. ಇದೇ ಕಾರಣಕ್ಕೆ ಭಾರತೀಯ ಸೇನೆಯ ಪತ್ರಿಕಾಗೋಷ್ಠಿಯು ಅತ್ಯಂತ ಮಹತ್ವ ಪಡೆದುಕೊಂಡಿತ್ತು. ಭಾರತೀಯ ಸೇನೆಯು ಪ್ರತೀಕಾರದ ಉತ್ತರವನ್ನು ಪಾಕಿಸ್ತಾನಕ್ಕೆ ನೀಡಿದೆ. ಇದರ ವಿವರವನ್ನು ಸಿಂಹಿಣಿಯರೇ ವಿಶ್ವಕ್ಕೆ ಕೊಟ್ಟಿದ್ದಾರೆ. ಅವರಲ್ಲೊಬ್ಬರು ಕರ್ನಾಟಕದ ಸೊಸೆ ಎನ್ನುವುದು ವಿಶೇಷವಾಗಿದೆ.
ಜಮ್ಮು & ಕಾಶ್ಮೀರದ ಪಹಲ್ಗಾಮ್ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರ ತೆಗೆದುಕೊಳ್ಳಲಾಗಿದೆ. ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿಯ ಸೊಸೆ ಈಗ ಭಾರತದ ಹೆಮ್ಮೆ. ಇನ್ನು ಇವರು ಭಾರತೀಯ ಸೇನೆಯಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಇವರಿಗಿದೆ.

ಖುರೇಷಿ ಅವರ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮದವರು. ಪತಿ, ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಖುರೇಷಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಸಹ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರೇಮ ವಿವಾಹ: ಕರ್ನಲ್ ಸೋಫಿಯಾ ಖುರೇಷಿ ಮತ್ತು ತಾಜುದ್ದೀನ್ ಬಾಗೇವಾಡಿ ಅವರಿಬ್ಬರು 2015ರಲ್ಲಿ ಪ್ರೀತಿಸಿ ವಿವಾಹವಾಗಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಅವರು ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. ಪತಿ & ಪತ್ನಿ ಇಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಫಿಯಾ ಖುರೇಷಿ ಅವರು ಜಮ್ಮುವಿನಲ್ಲಿ ಕರ್ನಲ್ ಆಗಿದ್ದಾರೆ. ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.