
ಧಾರವಾಡ: ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ನವೀಕರಣಗೊಂಡ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಮೂರ್ತಿಗಳ ಪುರ ಪ್ರವೇಶ ಸಂಭ್ರಮದಿಂದ ನಡೆಯಿತು.

j3tvkannada
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಾದ್ಯ ಮೇಳದ ಜತೆಗೆ ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭಹೊತ್ತು, ಆರತಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಸಾಂಪ್ರದಾಯಕ ಉಡುಪು ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಗ್ರಾಮದಲ್ಲಿ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು, ನಾಟಕ, ಸವಾಲ್ ಭಜನಾ ಪದ, ರಸಮಂಜರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ನವಲಗುಂದದ ಬಸವಲಿಂಗ ಸ್ವಾಮೀಜಿ, ಎ.ಸಿ.ವಾಲಿ ಗುರೂಜಿ, ವೀರೇಂದ್ರ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಶಿವಶರಣೆ ನೀಲಮ್ಮ ತಾಯಿ, ಗುದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಕೀಲ ಪ್ರಕಾಶ ಅಂಗಡಿ, ಗ್ರಾಮದ ಹಿರಿಯರಾದ ವಿ.ಡಿ.ಅಂದಾನಿಗೌಡ್ರ, ವೆಂಕರಡ್ಡಿ ಹೊಸಮನಿ, ಶಿವಾಜಿ ಮೊಖಾಸಿ, ಶಿವನಗೌಡ ಅಂದಾನಿಗೌಡ್ರ, ವಿನಾಯಕ ಬೋಸ್, ದೊಡ್ಡಫಕ್ಕಿರಪ್ಪ ಗಾಣಿಗೇರ ಇನ್ನು ಮುಂತಾದವರು ಇದ್ದರು.