ಮಂಡ್ಯ: ಕಲಾಸಕ್ತಿಯುಳ್ಳ ಕಲಾವಿದರಿಗೆ ಕಲೆಯ ಮೇಲೆ ಎಲ್ಲಿಲ್ಲದ ವ್ಯಾಮೋಹವಿದ್ದು ಏನಾದರೊಂದು ಹೊಸ ಸಾಧನೆ ಮಾಡಬೇಕು ಎಂಬ ಕನಸನ್ನು ಕಾಣುತ್ತಲೇ ಇರುತ್ತಾರೆ. ಅದರಂತೆ ಮಂಡ್ಯದ ಆನೆಗೋಳ ಗ್ರಾಮದ ಶ್ರೀ ಆನೆಗೋಳದಮ್ಮ ಹಾಗೂ ಶ್ರೀ ಆಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿಯ ಕಲಾವಿದರು ಉತ್ತರ ಪ್ರದೇಶದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಾಯಣದ ಸಂಪೂರ್ಣ ನಾಟಕ ಪ್ರದರ್ಶನವನ್ನು ನೀಡಬೇಕು ಅಂತ ಅಂದುಕೊಂಡಿದ್ದರು. ಅವರೆಲ್ಲಾ ಒಂದು ಪುಟ್ಟ ಗ್ರಾಮದ ನಾಟಕ ಕಲಾವಿದರು.

ಹೇಗಾದರೂ ಸರಿ ಮರ್ಯಾದಾ ಪರುಷ ಶ್ರೀರಾಮಚಂದ್ರನ ಪುಣ್ಯ ಭೂಮಿಯಲ್ಲಿ ರಾಮಾಯಣ ಕಥಾ ನಾಟಕವನ್ನು ಮಾಡಲೇಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ತಂಡದಲ್ಲಿ ಬರೋಬ್ಬರಿ 170 ಜನ ಕಲಾವಿದರಿದ್ದರು. ಇವರ ತಂಡವು ಅಯೋಧ್ಯೆಯಲ್ಲಿ ರಾಮಾಯಣದ ಸಂಪೂರ್ಣ ನಾಟಕ ಪ್ರದರ್ಶನ ಮಾಡಿದ್ದಾರೆ.
ಅಲ್ಲಿ ಜಾತಿ, ಮತ, ಭಾಷೆ ಎಂಬ ಬೇದವಿರಲಿಲ್ಲ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಆನೆಗೋಳ ಗ್ರಾಮದ ಜನರು ದೂರದ ಅಯೋಧ್ಯೆಯಲ್ಲಿ ನಮ್ಮ ಹೆಮ್ಮೆಯ ಭಾಷೆಯಾದ ಕನ್ನಡದಲ್ಲೇ ರಾಮಾಯಣ ನಾಟಕ ಪ್ರದರ್ಶನ ಮಾಡಿದ್ದಾರೆ. ಹಿಂದಿ ಭಾಷೆಯ ಊರಿನಲ್ಲಿ ಕನ್ನಡ ಭಾಷೆಯ ಕಂಪನ್ನು ಸೂಸಿದ್ದಾರೆ ಜೊತೆಗೆ ಜನರಿಂದ ಸೈ ಅನಿಸಿಕೊಂಡಿದ್ದಾರೆ.