
ಬೀದರ್: ನಾವು ಮಾಡುವ ಸತ್ಕಾರ್ಯಗಳೇ ಸದಾಶಿವನ ನಿಜವಾದ ಪೂಜೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು. ಬಸವ ಕಲ್ಯಾಣದ ಹೊಳಕುಂದೆ ಮನೆತನದ ಹಿರಿಯ ಜೀವ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳಾದ ಶ್ರೀಮತಿ ಡಾ. ಸುಶೀಲಾಬಾಯಿ ಹೊಳಕುಂದೆ ರವರ 75ನೇ ಜನ್ಮದಿನದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಆದರ್ಶ ಸೇವೆಯಿಂದ ಜೀವನದಲ್ಲಿ ಎತ್ತರದ ಸ್ಥಾನವನ್ನು ಗಳಿಸಬಹುದು, ಸರಳತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬಹುದು ಎನ್ನುವುದಕ್ಕೆ ಡಾ. ಸುಶೀಲಾಬಾಯಿ ಹೊಳಕುಂದೆರವರು ನಮಗೆ ಮಾದರಿಯಾಗಿ ಕಾಣ ಸಿಗುವರು.

j3tvkannada
ವೈದ್ಯ ವೃತ್ತಿಯಲ್ಲಿ ಆಧ್ಯಾತ್ಮ ಹಾಗೂ ಗುರು ನಿಷ್ಠೆಯನ್ನು ಮೇಳೈಸಿಕೊಂಡು ಸೇವೆ ಮಾಡಿದ ಅಪರೂಪದ ಸಾಮಾಜಿಕ ಕಳಕಳಿ ಹೊಂದಿರುವ, ಬಸವ ನೆಲದ ಜನ ಮೆಚ್ಚಿದ ವೈದ್ಯರು ಎನ್ನುವ ಖ್ಯಾತಿ ಗಳಿಸಿದವರು ಡಾ. ಸುಶೀಲಾಬಾಯಿ ಹೊಳಕುಂದೆ. ಸರಕಾರದ ಕೆಲಸ ದೇವರ ಕೆಲಸ ಎನ್ನುವುದಕ್ಕೆ ನಿಜಾರ್ಥವನ್ನು ಕಲ್ಪಿಸಿಕೊಟ್ಟು ಸಾರ್ಥಕ ಸೇವೆ ಸಲ್ಲಿಸಿದ ಡಾ. ಸುಶೀಲಾಬಾಯಿ ಹೊಳಕುಂದೆ ರವರು ಶತಾಯುಷಿಯಾಗಿ ಬಾಳಿ ಬದುಕಲಿ ಹಾಗೂ ಈ ಸಮಾರಂಭವನ್ನು ಆಯೋಜಿಸಿದ ಅವರ ಪರಿವಾರದವರೆಲ್ಲರಿಗೂ, ಬಂಧು ಮಿತ್ರರಿಗೂ, ಸರ್ವರಿಗೂ ಸನ್ಮಂಗಳವಾಗಲಿ ಎಂದು ಶುಭ ಹಾರೈಸಿದರು.
ಸುಶೀಲಾಬಾಯಿ ಹೊಳಕುಂದೆ ಅವರು ಸಮಯೋಚಿತವಾಗಿ ಮಾತನಾಡಿದರು. ಪೂಜ್ಯ ಬಸವಲಿಂಗ ಪಟ್ಟದೇವರು ಭಾಲ್ಕಿ, ಎಂಎಲ್ಸಿ ಮಾರುತಿ ರಾವ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಶ್ರೀಮತಿ ಸಾವಿತ್ರಿ ಶರಣು ಸಲಗರ, ನಿವೃತ್ತ ನ್ಯಾಯಾಧೀಶರಾದ ಸುಭಾಷ ಚಂದ್ರ ನಾಗರಾಳೆ, ಸುವಾಸ ಹೊಳಕುಂದೆ, ಮಲ್ಲಿನಾಥ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಹಾಡಿದರು. ನವಲಿಂಗ ಪಾಟೀಲ ನಿರೂಪಣೆ ಮಾಡಿದರು.