
ಯಾದಗಿರಿ: ಗಡಿಯನ್ನು ಕಾಯುವುದು ಮಾತ್ರ ದೇಶ ಭಕ್ತಿಯಲ್ಲ, ಗ್ರಾಮಗಳ ಉದ್ಧಾರ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವುದು ಕೂಡ ದೇಶಭಕ್ತಿ ಎಂದು ಖಾಸ ಮಠದ ಪೂಜ್ಯ ಶ್ರೀಮನ್ ನಿ.ಪ್ರ. ಸ್ವರೂಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಖಾಸ ಮಠದಲ್ಲಿ ಗುರುಮಠಕಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಎ ಮತ್ತು ಬಿ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟಿಸಿ ಪೂಜ್ಯರು ಮಾತನಾಡಿದರು.

j3tvkannada
ಶಿಬಿರಾಧಿಕಾರಿ ಬಾಬುರಾಯ ದೊರೆ ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಯನ್ನು ಸಮುದಾಯ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ, ಇದು ವೈಯಕ್ತಿಕ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ನಾಯಕತ್ವ ಸಾಮರ್ಥ್ಯಗಳು ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಕ್ರಿಯ ವೇದಿಕೆಯಾಗಿದೆ. ತಂಡದ ಕೆಲಸ ಸಂವಹನ ಮತ್ತು ಸಮಸ್ಯೆ ಪರಿಹಾರದಂತಹ ನಿರ್ಣಾಯಕ ಜೀವನ ಕೌಶಲ್ಯಗಳು ಮುಂತಾದವುಗಳನ್ನು ಸಕ್ರಿಯವಾಗಿ ಭಾಗವಹಿಸುವ ಮೂಲಕ ಮತ್ತು ನಾಯಕತ್ವದ ಸ್ಥಾನಗಳನ್ನು ತೆಗೆದುಕೊಳ್ಳುವ ಮೂಲಕ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಅನ್ವೇಷಣೆಗಳಿಗೆ ಸಜ್ಜುಗೊಳ್ಳುವ ಪ್ರಾಯೋಗಿಕ ಕೌಶಲ್ಯಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ಶ್ರೀನಿವಾಸ ಕೊಂಕಲ್ ಅವರು ಸಾರ್ವಜನಿಕರಲ್ಲಿ ಸ್ವಚ್ಚತಾ ಅಭಿಯಾನದ ಕುರಿತು ಜಾಗೃತಿ ಮೂಡಿಸುವುದು, ರಾಷ್ಟ್ರಪ್ರೇಮ, ಸೇವಾ ಮನೋಭಾವ, ವ್ಯಕ್ತಿತ್ವ ವಿಕಸನ ಎನ್.ಎಸ್.ಎಸ್ ನ ಮುಖ್ಯ ದ್ಯೇಯ. ಇದರಿಂದ ಸಹಬಾಳ್ವೆ ಸಹಕಾರ ಮನೋಭಾವ ಬೆಳೆಯುತ್ತದೆ. ಶಿಬಿರಾರ್ಥಿಗಳಿಗೆ ಗ್ರಾಮೀಣ ಬದುಕಿನ ಅರಿವು ಅಗತ್ಯ. ಈ ಶಿಬಿರದ ಏಳು ದಿನಗಳು ಬದುಕಿನುದ್ದಕ್ಕೂ ನೆನಪಿಟ್ಟು ಕೊಳ್ಳುವಂತವ ಕಾರ್ಯಮಾಡಬೇಕು. ಸಮಸಮಾಜ ಮತ್ತು ಆರೋಗ್ಯವಂತ ಗ್ರಾಮಗಳ ನಿರ್ಮಾಣ ಮಾಡಲು ತಾವುಗಳು ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ಜೋಶಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ರಘುನಾಥರೆಡ್ಡಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಗದೀಶ ಅವಂಟಿ, ಮಲ್ಲಮ್ಮ ಮಲ್ಲಿಕಾರ್ಜುನ್, ಖಾಸಮಠ ಶಾಲೆಯ ಮುಖ್ಯೋಪಧ್ಯಾಯರಾದ ವೀರೇಂದ್ರ ನಾಯಕ್, ಸುದರ್ಶನ್ ಗೌಡ ಭಾಗವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಇಮ್ರಾನ್ ಖಾಜಿ, ಚೆನ್ನಬಸಪ್ಪ ಓಡ್ಕರ್, ಮಾಲತಿ ಸೂರ್ಯಕಾಂತ್,ಮಾಣಿಕಪ್ಪ ಅಲ್ಲಮಪ್ರಭು, ಬಸಣ್ಣ ಈ.ಎಸ್, ಅಂಜನೇಯ ರಾಮತ್ನಾಳ, ರಾಯಪ್ಪ ಡೋಣಗಾಂವ, ಮಹೇಶ್ ಚಂದಾಪೂರ, ಪ್ರವೀಣ ಸರಪುರೆ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ಎನ್.ಎಸ್.ಎಸ್. ಎ ಮತ್ತು ಬಿ ಘಟಕದ ನೂರು ಜನ ವಿದ್ಯಾರ್ಥಿಗಳು ಇದ್ದರು, ಆಂಜನೇಯ ರಾಮತ್ನಾಳ ಕಾರ್ಯಕ್ರಮ ನಿರ್ವಹಿಸಿದರು, ಬಸಣ್ಣ ಸ್ವಾಗತಿಸಿದರು, ಎನ್.ಎಸ್.ಎಸ್. ಬಿ ಘಟಕದ ಸಂಚಾಲಕ ಶರಣಪ್ಪ ಗಡೇದ್ ವಂದಿಸಿದರು.