
ಕೋಲಾರ: ಕೋಲಾರ ಕೋಟೆ ಪ್ರದೇಶದ ಶೃಂಗೇರಿ ಶ್ರೀಶಂಕರ ಮಠದಲ್ಲಿ ಶ್ರೀಶಾರದಾ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಲಲಿತಾ ಸಹಸ್ರ ನಾಮ ಹೋಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಆವನಿ ಶಂಕರ ಮಠದ ಅದ್ವೈತಾನಂದ ಭಾರತೀ ಸ್ವಾಮಿಗಳು, ಮಾನವ ಜನ್ಮ ವಿಶೇಷವಾದುದು. ಧರ್ಮಾಚರಣೆಯಿಂದ ಮಾತ್ರ ಮಾನವ ಜನ್ಮದ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ಧರ್ಮ ಮಾರ್ಗದಿಂದ ಬದುಕಿ, ಧರ್ಮ, ಸಂಪ್ರದಾಯಗಳ ಆಚರಣೆಯನ್ನು ಅಳವಡಿಸಿಕೊಂಡು, ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ತಿಳಿಸಿದರು.

j3tvkannada.in
ಶ್ರೀಶಂಕರ ಭಗವತ್ಪಾದರು ದೇಶವೆಲ್ಲ ಸಂಚರಿಸಿ, ಜನರು ಧರ್ಮ ಮಾರ್ಗದಲ್ಲಿ ನಡೆಯುವಂತೆ ಕರೆ ಕೊಟ್ಟು ಧರ್ಮದ ಜಾಗೃತಿಗಾಗಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಎಲ್ಲರ ಉನ್ನತಿಗಾಗಿ ಅನೇಕ ಸ್ತೋತ್ರಗಳನ್ನು ರಚಿಸಿದರು. ಪ್ರತಿದಿನ ಶ್ರೀಶಂಕರರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇವರ ಸ್ತೋತ್ರಗಳ ಪಠಣದಿಂದ ಮನ:ಶಾಂತಿ ಮತ್ತು ಜೀವನದಲ್ಲಿ ಉನ್ನತಿ ಸಿಗುತ್ತದೆ ಎಂದರು.
ಭಾರತ ಇತಿಹಾಸದಲ್ಲಿ ಶ್ರೀ ಶಂಕರಾಚಾರ್ಯರ ಸ್ಥಾನ ವೈಶಿಷ್ಟ್ಯ ಪೂರ್ಣವಾಗಿದೆ. ಸಾಕ್ಷಾತ್ ಶಂಕರಾವತಾರಿಗಳಾದ ಅವರು ಅಲ್ಪ ವಯಸ್ಸಿನಲ್ಲಿಯೇ ಅನೇಕ ಅದ್ಭುತ ಕಾರ್ಯಗಳನ್ನು ಮಾಡಿ ಧರ್ಮ ರಕ್ಷಣೆ ಮಾಡಿದರು. ಅಸತ್ಯವನ್ನು ಸತ್ಯವೆಂದು ಭಾವಿಸಿದಾಗ ದುಃಖದ ಪರಂಪರೆ ಕಟ್ಟಿಟ್ಟ ಬುತ್ತಿ. ಇದಕ್ಕೆ ಪರಿಹಾರವೇ ಜ್ಞಾನಿ ಆಗುವುದು. ಉಪನಿಷತ್ ಸಾರವೇ ಆಗಿರುವ ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಅಯಮಾತ್ಮ ಬ್ರಹ್ಮ, ಪ್ರಜ್ಞಾನಂ ಬ್ರಹ್ಮ ಈ ಮಹಾ ವಾಕ್ಯಗಳ ಶ್ರವಣ, ಮನನ ಮತ್ತು ಅನುಷ್ಠಾನಗಳ ಮೂಲಕ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ನಾನು ಯಾರು ಎಂಬುದನ್ನು ಸಾಕ್ಷಾತ್ಕರಿಸಿಕೊಳ್ಳುವುದು ನಮ್ಮೆಲ್ಲರ ಜೀವನದ ಧ್ಯೇಯವಾಗಬೇಕು ಎಂಬುದೇ ಭಗವತ್ಪಾದಾಚಾರ್ಯ ಶ್ರೀಶಂಕರರ ಸಾರ್ವಕಾಲಿಕ ಸಂದೇಶವೆಂದು ತಿಳಿಸಿದರು.
ದೇಶ ಪರ್ಯಟನೆ ಮಾಡಿ ಅಖಂಡ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ಶಂಕರರದು ಎಂದ ಅವರು, ಹಿಂದೂ ಧರ್ಮದ ಉನ್ನತಿಗಾಗಿ ಶೃಂಗೇರಿ, ಕೇದಾರ, ಜಗನ್ನಾಥಪುರಿ, ದ್ವಾರಕ ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ವಾಪಿಸಿ ಆತ್ಮಜ್ಞಾನದ ಮಾರ್ಗ ತೋರಿಸಿದ್ದಾರೆ ಎಂದು ತಿಳಿಸಿದರು.
ವರ್ಧಂತಿಯ ಅಂಗವಾಗಿ ಐದು ಲಕ್ಷ ಕುಂಕುಮಾರ್ಚನೆ, ಮಡಿಲು ತುಂಬುವ ಕಾರ್ಯಕ್ರಮ, ಸಪ್ತಶತಿ ಪಾರಾಯಣ, ಅರವತ್ತು ಕುಂಭಗಳ ಕ್ಷೀರಾಭಿಷೇಕ, ರಥೋತ್ಸವ, ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಆವನಿ ಶ್ರೀಗಳು ಶಾರದೆಗೆ ಅರವತ್ತು ನಾಣ್ಯಗಳ ಹಾರವನ್ನು ಸರ್ಮಪಿಸಿದರು.
ಸಂಜೆ ಅಂತಾರಾಷ್ಟ್ರೀಯ ಕಲಾವಿದರಾದ ವಿದುಷಿ ರೂಪಾ ಶ್ರೀಕಾಂತ್ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂದಿತು. ವಿದುಷಿ ಡಾ.ಜ್ಯೋತ್ಸ್ನ ಶ್ರೀಕಾಂತ್ ಪಿಟೀಲು, ವಿದುಷಿ ದೀಪಿಕಾ ಶ್ರೀನಿವಾಸನ್ ರಿಂದ ಮೃದಂಗ, ವಿದ್ವಾನ್ ಗುರುಮೂರ್ತಿಯವರಿಂದ ಘಟ್ಟಂ ಪಕ್ಕವಾದ್ಯಗಳ ಕಾರ್ಯಕ್ರಮಗಳು ನಡೆದವು. ಚೊಕ್ಕಹಳ್ಳಿಯ ಚಿನ್ಮಯ ಸಾಂದೀಪನಿ ಆಶ್ರಮದ ಪೂಜ್ಯ ಸ್ವಾಮಿ ದತ್ತಪಾದಾನಂದರು ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಿತ್ತರು.
ಬಾಲಸುಬ್ರಹ್ಮಣ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಪೂಜೆ, ಹೋಮಾದಿಗಳು ನಡೆದವು. ಅಧ್ಯಕ್ಷ ಡಾ. ಎಮ್ ವಿ ಜಯರಾಮ್, ಉಪಾಧ್ಯಕ್ಷ ಹಾಬಿ ರಮೇಶ್, ಖಜಾಂಚಿ ಮುರಳಿ ಸುಂದರ್ ಮತ್ತಿತರ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ಮಠದ ಧರ್ಮಾಧಿಕಾರಿ ಜೆ.ಎನ್ ರಾಮಕೃಷ್ಣ ನಿರೂಪಿಸಿ ವಂದಿಸಿದರು.