
ಕೊಡಗು : ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದ ಮಿತಿಯ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಜಲಾಶಯಕ್ಕೆ ಅಪಾಯ ಎದುರಾಗಿದೆ ಎಂದು ಹೇಳಲಾಗಿದೆ.
ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಮಿತಿಯ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಬಗ್ಗೆ ನಿವಾಸಿಗಳು ದೂರು ನೀಡುತ್ತಿರುವಂತೆಯೇ ಎಕರೆಗಟ್ಟಲೆ ಭೂಮಿಯಲ್ಲಿ ಬೆಲೆಬಾಳುವ ಮರಗಳನ್ನು ತೆರವುಗೊಳಿಸಲಾಗಿದೆ.

ದುರ್ಬಲ ಪ್ರದೇಶದಲ್ಲಿ ನಿರಂತರ ಮಾನವ ಹಸ್ತಕ್ಷೇಪವು ವಿಪತ್ತಿಗೆ ಆಹ್ವಾನ ನೀಡುತ್ತಿದೆ ಎಂದು ನಿವಾಸಿಗಳು ಭಯಪಡುತ್ತಿದ್ದಾರೆ. ಅಲ್ಲದೆ ಕೂಡಲೇ ಅಕ್ರಮ ಗಣಿಗಾರಿಕೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಹಾರಂಗಿ ಜಲಾಶಯ ರಸ್ತೆಯಲ್ಲಿ ನಿಯಮಿತವಾಗಿ ಬೃಹತ್ ಲೋಡ್ಗಳಷ್ಟು ಮಣ್ಣನ್ನು ಸಾಗಿಸಲಾಗುತ್ತಿದ್ದು, ಹೆಚ್ಚಿದ ಟ್ರಕ್ ಸಂಚಾರದಿಂದಾಗಿ ರಸ್ತೆಗೆ ಹಾನಿಯಾಗುತ್ತಿದೆ. ಇದಲ್ಲದೆ ಹಾರಂಗಿ ಜಲಾಶಯದಿಂದ ಕೇವಲ 200 ರಿಂದ 300 ಮೀಟರ್ ದೂರದಲ್ಲಿ, ಗಣಿಗಾರಿಕೆ ಚಟುವಟಿಕೆಗೆ ಅನುವು ಮಾಡಿಕೊಡಲು ಎಕರೆಗಟ್ಟಲೆ ಭೂಮಿಯಲ್ಲಿ ಬೆಲೆಬಾಳುವ ಮರಗಳನ್ನು ತೆರವುಗೊಳಿಸಲಾಗಿದೆ.
ಈ ವ್ಯಾಪಕ ಅಕ್ರಮ ಚಟುವಟಿಕೆಯ ಹೊರತಾಗಿಯೂ ಯಾವುದೇ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಹೇಳಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೆ ರೋಸ್ವುಡ್, ಶ್ರೀಗಂಧ ಮತ್ತು ಇತರ ಹಳೆಯ ಮರಗಳನ್ನು ಒಳಗೊಂಡಂತೆ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಅವರು ವಿವರಿಸಿದರು. ಇದಲ್ಲದೆ ಮಣ್ಣು ತೆಗೆಯುವವರಿಂದ ಭೂಮಿಯಲ್ಲಿ ಹೆಚ್ಚುತ್ತಿರುವ ಹಸ್ತಕ್ಷೇಪವು ಜಲಾಶಯದ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಆತಂಕ ಹೊರ ಹಾಕಿದ್ದಾರೆ.

ಅಧಿಕಾರಿಗಳ ಭಯವಿಲ್ಲದೆ ಗಣಿಗಾರಿಕೆ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ಈ ದೊಡ್ಡ ಪ್ರಮಾಣದ ಅಕ್ರಮ ಚಟುವಟಿಕೆಯ ಬಗ್ಗೆ ಯಾವುದೇ ಅಧಿಕಾರಿಗಳಿಗೆ ತಿಳಿದಿಲ್ಲ. ಭಾರೀ ಯಂತ್ರೋಪಕರಣಗಳು ಮತ್ತು ಸರಕುಗಳನ್ನು ಸಾಗಿಸುವ ಟ್ರಕ್ಗಳ ಚಲನೆಯಿಂದಾಗಿ ಹಾರಂಗಿ ಅಣೆಕಟ್ಟಿನಿಂದ ಗ್ರಾಮಕ್ಕೆ ಕಾವೇರಿ ನೀರಾವರಿ ನಿಗಮವು ನಿರ್ಮಿಸಿರುವ ರಸ್ತೆ ಸಂಪೂರ್ಣವಾಗಿ ಹಾನಿಗೊಳಗಾಗುತ್ತಿದೆ ಎಂದು ನಿವಾಸಿ ಶೇಖರ್ ಹೇಳಿದ್ದಾರೆ. ಅಣೆಕಟ್ಟಿನ ಎಡಭಾಗದಲ್ಲಿ ಕೇವಲ 200 ರಿಂದ 300 ಮೀಟರ್ ದೂರದಲ್ಲಿ ಹಿಟಾಚಿ ಯಂತ್ರಗಳಿಂದ ಬೃಹತ್ ಬೆಟ್ಟವನ್ನು ಅಗೆಯಲಾಗುತ್ತಿದೆ ಮತ್ತು ಸಾವಿರಾರು ಲೋಡ್ಗಳಷ್ಟು ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಆದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ಈ ವಿಷಯವನ್ನು ಪರಿಶೀಲಿಸುವುದಾಗಿ ದೃಢಪಡಿಸಿದರು. ಹಾರಂಗಿ ವಿಭಾಗದ ಇಇ ಪುಟ್ಟಸ್ವಾಮಿ, ‘ಜಲಾಶಯದ ಬಳಿ ನಡೆಯುತ್ತಿರುವ ಚಟುವಟಿಕೆಯ ಬಗ್ಗೆ ನಮಗೆ ದೂರುಗಳು ಬಂದಿವೆ. ಸಣ್ಣ ನೀರಾವರಿ, ಕಂದಾಯ, ಅರಣ್ಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಶೀಘ್ರದಲ್ಲೇ ಸ್ಥಳದ ಪರಿಶೀಲನೆ ನಡೆಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.