ಶಿವಮೊಗ್ಗ : ನಗರಗಳಲ್ಲಿ ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಟ್ಟು ಬೇಜವಾಬ್ದಾರೀ ಮೆರೆಯುವ ಪೋಷಕರಿಗೆ ಎಚ್ಚರಿಕೆ ನೀಡುವಂತಿದೆ ಈ ಸುದ್ದಿ.

ಶಿವಮೊಗ್ಗದಲ್ಲಿ ಫೆ.24ರಂದು ಮೀನಾಕ್ಷಿ ಭವನ ಹೊಟೇಲ್ ಸಮೀಪ ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ತಪಾಸಣೆ ನಡೆಸುತ್ತಿದ್ದರು. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕನನ್ನು ತಡೆದು ಪರಿಶೀಲಿಸಿದಾಗ ಆತ ಅಪ್ರಾಪ್ತ ಎಂಬುದು ತಿಳಿದು ಬಂದಿತ್ತು.
ಈ ಹಿನ್ನೆಲೆ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ತನಿಖೆ ನಡೆಸಿದ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಆತನ ಪೋಷಕರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮೊಪೆಡ್ ಮಾಲೀಕ ಬಾಪೂಜಿನಗರ ನಿವಾಸಿಗೆ ಇದೀಗ ದಂಡ ವಿಧಿಸಿ ಆದೇಶಿಸಿದೆ. ಅಪ್ರಾಪ್ತನ ಕೈಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಪೋಷಕರಿಗೆ ಶಿವಮೊಗ್ಗ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.