
ವಿಜಯನಗರ: ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಲಿದೆ.

j3tvkannada
ರಥೋತ್ಸವದ ಮಾರನೇ ದಿನದಂದು ವೈಶಾಖ ಶುದ್ಧಿ ಷಷ್ಠಿಯಂದು ದೇವಸ್ಥಾನದ ಶಿಖರಕ್ಕೆ ತೈಲಾಭಿಷೇಕ ನಡೆಯುವುದನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಾಲಯವು ಅದ್ಭುತ ಶಿಲ್ಪಕಲೆಯಿಂದ ನಿರ್ಮಾಣವಾಗಿದೆ. ಇದನ್ನು ಕಂಡು ಪೂರ್ವಜರು ಹಂಪಿಯನ್ನು ಹೊರ ನೋಡು, ಉಜ್ಜಯಿನಿಯನ್ನು ಒಳ ನೋಡು ಎಂದಿದ್ದಾರೆ. 11ನೇ ಶತಮಾನದಲ್ಲಿ ನಿರ್ಮಿತವಾದ ಈ ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಗಾರೆಯಿಂದ ನಿರ್ಮಿಸಿರುವ ವಿಜಯನಗರ ಶೈಲಿಯ ನಾಲ್ಕು ಅಂತಸ್ಥಿನ ಗೋಪುರಕ್ಕೆ ತಂಗಾಳಿ ಗೋಪುರವೆಂದು ಕರೆಯಲಾಗುತ್ತದೆ.
ಈ ದೇವಾಲಯದ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ ಗರ್ಭಗುಡಿಯ ಶಿಖರದ ತೈಲಾಭಿಷೇಕವು ಅತ್ಯಂತ ಆಕರ್ಷಕವಾಗಿರುತ್ತದೆ. ಪ್ರಾಚೀನ ಕಾಲದಿಂದಲೂ ಈ ಪ್ರದೇಶದ ಜರ್ಮಲಿ ನಾಯಕರ ವಂಶಸ್ಥರು ಮಂಗಳವಾದ್ಯಗಳೊಂದಿಗೆ ಕಾಲ್ನಡಿಗೆಯ ಮುಖಾಂತರ ಹೊತ್ತು ತಂದ ಕುಂಭದ ತೈಲವನ್ನು ಪ್ರಥಮವಾಗಿ ಶಿಖರಕ್ಕೆ ಎರೆಯುವ ಸಂಪ್ರದಾಯವಿದೆ. ನಂತರ ಭಕ್ತರ ಹರಕೆಯಂತೆ ತಂದ ಎಣ್ಣೆ ಡಬ್ಬಗಳಿಂದ ತೈಲವನ್ನು ಎರೆಯಲಾಗುತ್ತದೆ. ಈ ದೃಶ್ಯವು ನೋಡುಗರ ಕಣ್ಮನ ಸೆಳೆಯುತ್ತದೆ.
ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಪೀಠವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ಪೀಠದಲ್ಲಿ ಆಯೋಜಿಸುತ್ತಿದೆ. ಪೀಠದ ವತಿಯಿಂದ ನಾಡಿನಾದ್ಯಂತ ವಿವಿಧ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣ ದಾಸೋಹದಲ್ಲೂ ಮುನ್ನಡೆದಿದ್ದಾರೆ. ರಥೋತ್ಸವ ಹಾಗೂ ತೈಲಾಭಿಷೇಕಕ್ಕೆ ಸಾಕ್ಷಿಯಾಗಲು ಲಕ್ಷಾಂತರ ಭಕ್ತರು ಆಗಮಿಸುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.