
ಯಾದಗಿರಿ: ಕೂಲಿ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕವಾಗಿ ಉನ್ನತಿ ಹೊಂದಲು ಹೊಸ ನಿಯಮವನ್ನು ಜಾರಿಗೆ ತಂದು ಕೂಲಿ ಕಾರ್ಮಿಕರ ಮಕ್ಕಳಲ್ಲಿ ಅಕ್ಷರದ ಕ್ರಾಂತಿ ನಡೆಯುವಂತೆ ನೋಡಿಕೊಳ್ಳ ಬೇಕಾಗಿರುವುದು ಸರ್ಕಾರದ ಕೆಲಸವಾಗಿದೆ ಎಂದು ರೈತ ಹೋರಾಟಗಾರ ಸಿದ್ದಯ್ಯ ಸ್ವಾಮಿ ಕರ್ಕಳ್ಳಿ ತಿಳಿಸಿದರು.

j3tvkannada
ತಾಲ್ಲೂಕಿನ ಕಕ್ಕಸಗೇರಾ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೂಲಿ ಕೆಲಸ ಸಿಗುವಂತೆ ಯೋಜನೆ ರೂಪಿಸಬೇಕು. ಇಲ್ಲಿನ ನೀರಾವರಿ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಕೂಲಿ ಕೆಲಸ ಸಿಗುವುದಿಲ್ಲ. ಆದರೆ ನರೇಗಾ ಯೋಜನೆ ತುಸು ಕೈ ಹಿಡಿದಿದೆ. ಮಳೆಗಾಲದವರೆಗೂ ಇದನ್ನು ವಿಸ್ತರಿಸಬೇಕು. ನರೇಗಾವನ್ನು ಮುಚ್ಚಿ ಹಾಕಲು ಇಲ್ಲದ ಕಾನೂನು ಜಾರಿ ಮಾಡಿ ಕೂಲಿ ಕೆಲಸ ಸಿಗದಂತೆ ಮಾಡುತ್ತಿದೆ ಎಂದರು.
ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರಿಗೂ ನರೇಗಾ ಯೋಜನೆ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಕೆರೆ ಸಂರಕ್ಷಣೆ, ಪುಷ್ಕರಣಿ ಜೀರ್ಣೋದ್ದಾರ, ಅಂತರ್ಜಲಮಟ್ಟ ಹೆಚ್ಚಿಸಲು ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲು ನರೇಗಾದಲ್ಲಿ ಕೆಲಸ ಕೈಗೆತ್ತಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಯ್ಯಗೌಡ, ಹಣಮಂತರಾಯ, ನಿಂಗಣ್ಣಗೌಡ, ಹಣಮಂತ, ನಾಗಮ್ಮ ಸುಲೋಚನಾ, ಚಂದಮ್ಮ, ಯಲ್ಲಮ್ಮ ಭಾಗವಹಿಸಿದ್ದರು.