
ಉತ್ತರಕನ್ನಡ: ಕಳೆದ ವರ್ಷದ ದರಕ್ಕೆ ಹೋಲಿಸಿದರೆ ಈ ವರ್ಷ ಹಸಿಶುಂಠಿ ಬೆಲೆ ತೀವ್ರ ಕುಸಿತವಾಗಿದ್ದು, ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆ ದರ ಏರಿಸಿ ರೈತರಿಂದ ಹಸಿಶುಂಠಿ ಖರೀದಿಸಲು ಬನವಾಸಿ ಭಾಗದಲ್ಲಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.

j3tvkannada
2024-25ನೇ ಸಾಲಿನ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹಸಿ ಶುಂಠಿ ಖರೀದಿಗೆ ಜಿಲ್ಲೆಯಲ್ಲಿ ಯಾವುದೇ ಖರೀದಿ ಕೇಂದ್ರಗಳಿಲ್ಲ. ಈ ನಡುವೆ ಹಸಿಶುಂಠಿ ದರ ಇಳಿಕೆಯಾಗಿದೆ. ಬನವಾಸಿ ಹೋಬಳಿಯ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಂಠಿ ಕೃಷಿ ಮಾಡಲಾಗುತ್ತದೆ. ಇತ್ತೀಚಿನ ವರ್ಷದಲ್ಲಿ ಶುಂಠಿ ಬೆಳೆಗಾರರ ಕೈಹಿಡಿದ ಕಾರಣ ಪ್ರದೇಶ ವಿಸ್ತರಣೆಯೂ ಆಗಿದೆ. ಪ್ರಸಕ್ತ ವರ್ಷ ಅಂದಾಜು 200 ಹೆಕ್ಟೇರ್ ಮಾಲ್ಕಿ ಪ್ರದೇಶದಲ್ಲಿ ಶುಂಠಿ ಕೃಷಿ ಮಾಡಲಾಗಿದೆ. ಉಳಿದಂತೆ ಸುಮಾರು 150 ಹೆಕ್ಟೇರ್ ಅತಿಕ್ರಮಣ ಪ್ರದೇಶದಲ್ಲಿಯೂ ಶುಂಠಿ ಬೆಳೆಯಿದೆ. ಆದರೆ ಈ ವರ್ಷ ಬೆಳೆಗಾರರಿಗೆ ಶುಂಠಿ ಲಾಭದಾಯಕ ಆಗದೇ, ಹಾಕಿದ ಬಂಡವಾಳ ವಾಸೂಲಾತಿಗೂ ತೊಡಕಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್ ಹಸಿಶುಂಠಿ ಖರೀದಿಯಲ್ಲಿ ಸರಾಸರಿ ₹2,200 ರಿಂದ ₹2,400 ದರ ಲಭಿಸುತ್ತಿದೆ. ಬಿಡಿ ಮಾರಾಟಗಾರರಿಗೆ ₹3,400 ರಿಂದ ₹3,600 ದರ ಲಭಿಸುತ್ತಿದೆ.
ಕಳೆದ ವರ್ಷ ಈ ಸಮಯದಲ್ಲಿ ಪ್ರತಿ ಕ್ವಿಂಟಲ್ ಹಸಿ ಶುಂಠಿಗೆ ₹14 ಸಾವಿರದಿಂದ ₹15 ಸಾವಿರ ದರವಿತ್ತು. ಈ ವರ್ಷ ಆರಂಭದಲ್ಲಿ ₹6 ಸಾವಿರವಿರುವುದು, ದಿನ ಕಳೆದಂತೆ ₹2 ಸಾವಿರಕ್ಕಿಂತ ಕಡಿಮೆಗೆ ಇಳಿದಿತ್ತು. ಮತ್ತಷ್ಟು ಇಳಿಯುವ ಆತಂಕದಿಂದ ಕೆಲವು ಬೆಳೆಗಾರರು ಉತ್ಪನ್ನ ಮಾರಿದ್ದಾರೆ. ಇದರಿಂದ ಸಾಕಷ್ಟು ನಷ್ಟ ಮಾಡಿಕೊಂಡಿದ್ದಾರೆ. ಈಗೀಗ ಸ್ವಲ್ಪ ಚೇತರಿಕೆ ಕಾಣುತ್ತಿದ್ದರೂ ಉಳಿದ ಬೆಳೆಗಾರರಿಗೆ ನಿರೀಕ್ಷಿತ ದರ ಲಭಿಸುವ ವಿಶ್ವಾಸವಿಲ್ಲ. ಕನಿಷ್ಠ ₹5 ಸಾವಿರ ಪ್ರತಿ ಕ್ವಿಂಟಲ್ಗೆ ನೀಡಿ ಖರೀದಿ ಕೇಂದ್ರ ಆರಂಭಿಸಿದರೆ ದರ ಇಳಿಕೆಯ ಸಂಕಷ್ಟದ ಕಾಲದಲ್ಲಿ ಅನುಕೂಲ ಆಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯ.
ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದು, ಪ್ರತಿ ಕ್ವಿಂಟಲ್ಗೆ ₹2,445ರಂತೆ ಖರೀದಿಸಲು ತೀರ್ಮಾನಿಸಿದ್ದಾರೆ. ಎಕರೆಗೆ 30 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 60 ಕ್ವಿಂಟಲ್ ಪ್ರಮಾಣದ ಪ್ರಥಮ ಗುಣಮಟ್ಟ (ಎಫ್.ಎಕ್ಯು) ಹಸಿಶುಂಠಿ ಖರೀದಿಸಲು ಸರ್ಕಾರ ಮುಂದಾಗಿದೆ. ಬೆಳೆಗಾರರಿಗೆ ಕೃಷಿ ಖರ್ಚು ಪರಿಗಣಿಸಿದರೆ ಈ ಮೊತ್ತ ತೀರಾ ಕಡಿಮೆ. ಅದೂ ಅಲ್ಲದೇ ಬನವಾಸಿಯಿಂದ ಹೊರಗಡೆಯ ಖರೀದಿ ಕೇಂದ್ರಕ್ಕೆ ಹಸಿಶುಂಠಿ ಕೊಂಡೊಯ್ದರೆ ವಾಹನ ವೆಚ್ಚವೇ ಅಧಿಕವಾಗುತ್ತದೆ. ಹೀಗಾಗಿ ಖರೀದಿ ಕೇಂದ್ರದ ನಿಯಮಾವಳಿ ಸಡಿಲಿಸಿ ದರ ಹೆಚ್ಚು ನೀಡುವ ಜತೆ ಬನವಾಸಿ ಕೇಂದ್ರೀಕರಿಸಿ ಖರೀದಿ ಕೇಂದ್ರ ಸ್ಥಾಪಿಸಿದರೆ ಮುಂಡಗೋಡ ಭಾಗದ ಬೆಳೆಗಾರರಿಗೂ ಅನುಕೂಲ ಆಗುತ್ತದೆ ಎನ್ನುತ್ತಾರೆ ಶುಂಠಿ ಕೃಷಿಕ ವಾದಿರಾಜ ಗೌಡ.