
ಬೆಂಗಳೂರು: ಆರ್ಥಿಕ ಅಪರಾಧಗಳಿಗಾಗಿ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ನಡೆದ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) 33 ವರ್ಷದ ಕನ್ನಡದ ನಟಿ ‘ರನ್ಯಾ ರಾವ್‘ಅವರನ್ನು ಮೂರು ದಿನಗಳ ಕಸ್ಟಡಿಗೆ ಕೋರಿತ್ತು. ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ರನ್ಯಾ ಅವರನ್ನು ಸೋಮವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಬುಧವಾರ ಜಾಮೀನು ಅರ್ಜಿ ಸಲ್ಲಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಡಿ.ಆರ್.ಐ ಅನ್ನು ಪ್ರತಿನಿಧಿಸುವ ವಕೀಲರು ಕಳ್ಳಸಾಗಾಣಿಕೆಯ ದೊಡ್ಡ ಜಾಲದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಮತ್ತು ಪ್ರಕರಣಕ್ಕೆ ಬಹು ಆಯಾಮದ ತನಿಖೆಯ ಅಗತ್ಯವಿದೆ, ಎಂದು ಹೇಳಿ ಮೂರು ದಿನಗಳ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಗಮನಾರ್ಹ ಬೆಳವಣಿಗೆಗಳು ಕಂಡು ಬಂದಿರುವುದರಿಂದ ರನ್ಯಾ ಅವರ ಕಸ್ಟಡಿ ವಿಚಾರಣೆ ಅತ್ಯಗತ್ಯ ಎಂದು ಡಿ.ಆರ್.ಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ವಕೀಲರು ಶಿಷ್ಟಾಚಾರದ ಉಲ್ಲಂಘನೆಗಳನ್ನು ಸಹ ಎತ್ತಿ ತೋರಿಸಿದರು ಮತ್ತು ವಿವರಗಳನ್ನು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಪಡಿಸಲಾಗುವುದಿಲ್ಲ ರಹಸ್ಯವಾಗಿ ಒಪ್ಪಿಸುವುದಾಗಿ ಹೇಳಿದರು.
ರನ್ಯಾ ಅವರ ವಕೀಲರು ಈ ವಿನಂತಿಯನ್ನು ವಿರೋಧಿಸಿದರು, ಹೆಚ್ಚಿನ ಕಸ್ಟಡಿ ಸಮರ್ಥನೀಯವಲ್ಲ ಎಂದು ಹೇಳಿದರು. ಎರಡೂ ಕಡೆಯ ವಾದಗಳನ್ನು ಅನುಸರಿಸಿ, ತನಿಖೆ ಪೂರ್ಣಗೊಂಡ ನಂತರವೇ ಜಾಮೀನು ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನ್ಯಾಯಾಧೀಶರು ತೀರ್ಪು ನೀಡಿದರು.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯ ನಿರ್ವಹಿಸಿದ ಡಿ.ಆರ್.ಐ ಸೋಮವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ತಡೆದು ವಿಚಾರಣೆಗೊಳಪಡಿಸಿದಾಗ 14.2 ಕೆಜಿ ತೂಕದ ಚಿನ್ನದ ಗಟ್ಟಿಗಳು ಅವರ ದೇಹದ ಮೇಲೆ ಮರೆ ಮಾಡಲ್ಪಟ್ಟಿರುವುದನ್ನು ಪತ್ತೆ ಹಚ್ಚಿದ್ದರು.