
ಗದಗ: ಹದಿನೈದು ದಿನಾ ಆತ್ರಿ ನಮ್ಮ ಓಣ್ಯಾಗ ಕುಡ್ಯಾಕ್ ನೀರ ಬಂದಿಲ್ಲ. ಸವುಳ ನೀರ ಕುಡದು ಗಂಟಲಾನ ಕೆಟ್ಟೇತಿ, ನಮಗ ನೀರ ಬರಲಾರದ ಇಪ್ಪತ್ತು ದಿನಾ ಆತು. ಇನ್ನ ನೀರ ಬಿಡವಲು, ಹಬ್ಬದಾಗ ಸೈತ ನೀರ ಬಿಡಂಗಿಲ್ಲ ಅಂದ್ರ ಆ್ಯಂಗ್ರಿ ಎಂಬ ಮಾತುಗಳು ಲಕ್ಷ್ಮೀಶ್ವರದ ಬಹುತೇಕ ವಾರ್ಡ್ಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಆಕ್ರೋಶ ಭರಿತ ಅಸಹಾಯಕ ಮಾತುಗಳಿವು. ಇಪ್ಪತ್ತು ದಿನಗಳಿಗೊಮ್ಮೆ ಪಟ್ಟಣದ ಜನತೆಗೆ ತುಂಗಭದ್ರಾ ನದಿಯಿಂದ ಪುರಸಭೆ ಕುಡಿಯುವ ನೀರನ್ನು ಪೂರೈಸುತ್ತಿದೆ. ಅದೂ ಕೇವಲ ಎರಡು ತಾಸು ಮಾತ್ರ. ಇನ್ನೊಮ್ಮೆ ನೀರು ಬಿಡುವವರೆಗೆ ಕೊಳವೆಬಾವಿಗಳ ಸವುಳ ನೀರೇ ಗತಿ.

j3tvkannada
ಇಪ್ಪತ್ತು ದಿನಗಳಿಗೊಮ್ಮೆ ಪಟ್ಟಣದ ಜನತೆಗೆ ತುಂಗಭದ್ರಾ ನದಿಯಿಂದ ಪುರಸಭೆ ಕುಡಿಯುವ ನೀರನ್ನು ಪೂರೈಸುತ್ತಿದೆ. ಅದೂ ಕೇವಲ ಎರಡು ತಾಸು ಮಾತ್ರ. ಇನ್ನೊಮ್ಮೆ ನೀರು ಬಿಡುವವರೆಗೆ ಕೊಳವೆಬಾವಿಗಳ ಸವುಳ ನೀರೇ ಗತಿ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿವಿಧ ತಾಂತ್ರಿಕ ತೊಂದರೆಗಳಿಂದಾಗಿ ಪಟ್ಟಣದ ಜನತೆಗೆ ಸರಿಯಾದ ಸಮಯಕ್ಕೆ ನೀರು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು ಅದಕ್ಕೆ ತಕ್ಕಂತೆ ನೀರಿನ ಸಮಸ್ಯೆಯೂ ಇಮ್ಮಡಿಸುತ್ತಿದೆ.
2004ರಲ್ಲಿ ಲಕ್ಷ್ಮೀಶ್ವರದಿಂದ 42 ಕಿ.ಮೀ ದೂರದಲ್ಲಿರುವ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರಿನ ಪೂರೈಕೆ ಶುರುವಾಗಿದ್ದು ಅಂದಿನಿಂದ ಇಂದಿನವರೆಗೆ ಪಟ್ಟಣದ ಶೇ 80ರಷ್ಟು ಜನರಿಗೆ ನದಿ ನೀರು ಸಿಗುತ್ತಿದೆ. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಡಾವಣೆಗಳಿಗೆ ಮಾತ್ರ ನದಿ ನೀರು ಎರಡು ದಶಕ ಕಳೆದರೂ ತಲುಪಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಬಡಾವಣೆ ನಿವಾಸಿಗಳು ಕಿಡಿಕಾರಿದ್ದಾರೆ.

j3tvkananda
ಪಟ್ಟಣದ ಜನಸಂಖ್ಯೆ 40 ಸಾವಿರ ದಾಟಿದೆ. ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಪುರಸಭೆ ಜವಾಬ್ದಾರಿ. ಆದರೆ, ನದಿ ನೀರಿನ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೋರಿವೆ. ಇಪ್ಪತ್ತು ವರ್ಷಗಳ ಹಿಂದಿನ ಪೈಪ್ಗಳು ತುಕ್ಕು ಹಿಡಿದು ಹಾಳಾಗಿವೆ. ಅದರೊಂದಿಗೆ ಚೇಂಬರ್ಗಳು ಒಡೆದು ಸಾಕಷ್ಟು ನೀರು ಪೋಲಾಗುತ್ತಿದೆ. ಅಂದರೆ ಮಾರ್ಗ ಮಧ್ಯದಲ್ಲಿಯೇ ಶೇ 35-40ರಷ್ಟು ನೀರು ವ್ಯರ್ಥವಾಗುತ್ತಿದ್ದು ಇದರಿಂದಾಗಿ ನೀರಿನ ಸಮಸ್ಯೆ ಉಂಟಾಗಿದೆ.
ಇನ್ನು ಆಗಾಗ ಕೈಕೊಡುವ ವಿದ್ಯುತ್ ಮತ್ತು ಮೋಟಾರ್ ಸುಡುವ ಕಾರಣಗಳಿಂದಾಗಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು ಈ ಕುರಿತು ಅಧಿಕಾರಿಗಳು ಸೂಕ್ತ ಗಮನ ಹರಿಸಿಲ್ಲ ಎಂಬ ಆರೋಪಗಳು ಇವೆ. ನದಿ ನೀರನ್ನು ಶುದ್ಧ ಮಾಡಿ ಪೂರೈಸಬೇಕು. ಆದರೆ ಶುದ್ದೀಕರಣದ ವ್ಯವಸ್ಥೆಯೇ ಸರಿಯಾಗಿಲ್ಲ. ಹೀಗಾಗಿ ಕೆಲವೊಮ್ಮೆ ಜೊಂಡಿನಿಂದ ಕೂಡಿದ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಜನತೆ ಅನಿವಾರ್ಯವಾಗಿ ಶುದ್ಧ ಘಟಕಗಳ ನೀರನ್ನು ಅವಲಂಬಿಸುವಂತಾಗಿದೆ.
ಇನ್ನು ನದಿ ನೀರು ಕೈಕೊಟ್ಟಾಗ ಲಭ್ಯ ಇರುವ ಕೊಳವೆಬಾವಿಗಳಿಂದ ಪುರಸಭೆ ನೀರು ಪೂರೈಕೆ ಮಾಡಲು ಪುರಸಭೆ ಹೆಣಗಾಡುತ್ತಿದೆ. ನಿರಂತರವಾಗಿ ಕೊಳವೆಬಾವಿಗಳಿಂದ ನೀರು ಪೂರೈಸುವುದರಿಂದ ಅವುಗಳ ನೀರಿನಮಟ್ಟ ಕುಸಿಯುತ್ತಿದೆ. ಸದ್ಯ ಬೇಸಿಗೆ ಕಾರಣ ನೀರಿನ ಬಳಕೆ ಹೆಚ್ಚಾಗಿದೆ. ಆದರೆ ಸಕಾಲಕ್ಕೆ ನೀರು ಪೂರೈಸಲು ಪುರಸಭೆಗೆ ಸಾಧ್ಯವಾಗುತ್ತಿಲ್ಲ.
ನಮ್ಮ ಮನೆ ಹತ್ತಿರ ನೀರಿನ ಟ್ಯಾಂಕ್ ಇದ್ದರೂ ಸಹ ನಮಗೆ 15-20 ದಿನಗಳಿಗೊಮ್ಮೆ ನೀರು ಬಿಡುತ್ತಾರೆ.
₹500 ಕೊಟ್ಟು ಖಾಸಗಿಯವರಿಂದ ನೀರು ಖರೀದಿಸಬೇಕಾಗಿದೆ ಎಂದು ಪಟ್ಟಣದ ಎಪಿಎಂಸಿ ಹಮಾಲರ ಕಾಲೊನಿ ನಿವಾಸಿಗಳಾದ ರೇಖಾ ಹಟ್ಟಿ, ರೇಣುಕಾ ಮಲ್ಲೂರ ಬೇಸರದಿಂದ ಹೇಳುತ್ತಾರೆ.ಪುರಸಭೆಯಿಂದ ನೀರಿನ ಪೂರೈಕೆ ವ್ಯವಸ್ಥೆ ಸರಿ ಇಲ್ಲ. ಇಪ್ಪತ್ತು ದಿನಕ್ಕೊಮ್ಮೆ ನೀರು ಬಿಟ್ಟರೆ ಜೀವನ ಮಾಡುವುದೇ ಕಷ್ಟವಾಗುತ್ತದೆ. ಆದಷ್ಟು ಬೇಗನೇ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನ ಹರಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಲಕ್ಷೇಶ್ವರ ತಾಲ್ಲೂಕು ಘಟಕದ ಮಹೇಶ ಕಲಘಟಗಿ ಆಗ್ರಹಿಸಿದರು.