
ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಆದರ್ಶ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿಪೂರ್ವ ಕಾಲೇಜು ವಿಭಾಗ ಆರಂಭವಾಗುತ್ತಿದ್ದು ಮೂಲಭೂತ ಸೌಲಭ್ಯ ವಿಸ್ತರಿಸುವ ಕಾರ್ಯ ನಡೆಯುತ್ತಿದೆ. ಆದರ್ಶ ಶಾಲೆಗಳಲ್ಲಿ ಪಿಯುಸಿ ಕಲಿಕೆಗೆ ಅವಕಾಶ ದೊರೆತಿರುವುದು ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ.

j3tvkananda
ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ತಲಾ ಒಂದು ಸೇರಿದಂತೆ ಜಿಲ್ಲೆಯಲ್ಲಿ ನಾಲ್ಕು ಆದರ್ಶ ವಿದ್ಯಾಲಯಗಳಿವೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ (ಎಸ್ಎಸ್ಕೆ) ಯೋಜನೆಯಡಿ ಆದರ್ಶ ವಿದ್ಯಾಲಯಗಳನ್ನು ತೆರೆದಿದ್ದು ಇದೀಗ ಪಿಯುಸಿ ಹಂತದವರೆಗೆ ಮೇಲ್ದರ್ಜೆಗೇರಿಸಿದ್ದು ವಿಜ್ಞಾನ, ವಾಣಿಜ್ಯ ಹಾಗೂ ಗಣಕ ವಿಜ್ಞಾನ ವಿಭಾಗಗಳನ್ನು ತೆರೆಯಲು ಮುಂದಾಗಿದೆ.
ಆದರ್ಶ ವಿದ್ಯಾಲಯಗಳಲ್ಲಿ ಇಲ್ಲಿಯವರೆಗೂ 6 ರಿಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಎಸ್.ಎಸ್.ಎಲ್.ಸಿ ನಂತರ ಮಕ್ಕಳು ಪದವಿಪೂರ್ವ ಹಂತದಲ್ಲಿ ಶಿಕ್ಷಣ ಪಡೆಯಲು ಜಿಲ್ಲಾ ಕೇಂದ್ರ ಅಥವಾ ಮೈಸೂರು ಜಿಲ್ಲೆಗೆ ಹೋಗಬೇಕಿತ್ತು. ಇದೀಗ ಆದರ್ಶ ವಿದ್ಯಾಲಯಗಳಲ್ಲಿ ಪಿ.ಯು.ಸಿವರೆಗೂ ಶಿಕ್ಷಣ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಗುರುಮೂರ್ತಿ ಹೇಳಿದರು.