
ಕಲಬುರುಗಿ: 2020ರಿಂದ ಜಾರಿಗೆ ಬಂದಿರುವ ಹೊಸ ಮರಳು ನೀತಿ ಪ್ರಕಾರ ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯಲ್ಲಿ ಸದಸ್ಯ ಇಲಾಖೆಯಾದ ಪೊಲೀಸ್ ಇಲಾಖೆಯ ಶಹಾಬಾದ್ ಉಪ ವಿಭಾಗದ ಅಧೀನದ ವಿವಿಧ ಪೊಲೀಸ್ ಠಾಣೆಗಳಲ್ಲಿ 2023 ರಿಂದ ಏ.17, 2025 ವರೆಗೆ ಮರಳು ಅಕ್ರಮ ಸಾಗಾಟದ ವಿರುದ್ಧ ಒಟ್ಟು 124 ಪ್ರಕರಣಗಳು ದಾಖಲಾಗಿವೆ.

j3tvkannada
ದಿನದ 24 ಗಂಟೆಯೂ ಮರಳು ಅಕ್ರಮ ಸಾಗಾಟದ ಮೇಲೆ ನಿಗಾ ಇಡಲು 2024ರ ಡಿಸೆಂಬರ್ 16ರಂದು ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಅವರು, ಶಿಕ್ಷಣ, ಅರಣ್ಯ, ಜೆಸ್ಕಾಂ, ಪೊಲೀಸ್, ತಹಶೀಲ್ದಾರ್, ನೀರು ಇಲಾಖೆ, ಸಾರಿಗೆ, ಅಬಕಾರಿ, ತಾ.ಪಂ, ತೋಟಗಾರಿಕೆ, ಪಶುಸಂಗೋಪನಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪುರಸಭೆ (ಚಿತ್ತಾಪುರ-ವಾಡಿ), ಪಂಚಾಯತ್ ರಾಜ್, ಲೋಕೋಪಯೋಗಿ, ಸಮಾಜ ಕಲ್ಯಾಣ, ಕೃಷಿ, ಅಲ್ಪಸಂಖ್ಯಾತರ ಕಲ್ಯಾಣ, ಸಾಮಾಜಿಕ ವಲಯ ಅರಣ್ಯ ಇಲಾಖೆ, ಹೀಗೆ ವಿವಿಧ ಇಲಾಖೆಗಳ ಒಟ್ಟು 21 ಅಧಿಕಾರಿಗಳ ನೇತೃತ್ವದಲ್ಲಿ 105 ಸಿಬ್ಬಂದಿ ಒಳಗೊಂಡು ಕರ್ತವ್ಯ ನಿರ್ವಹಿಸಲು ಕಾರ್ಯಪಡೆ ರಚಿಸಿದ್ದಾರೆ.
ತಾಲ್ಲೂಕಿನ ಬೆಳಗುಂಪಾ ಕ್ರಾಸ್ ಹತ್ತಿರ ಉಪ ಖನಿಜ ತನಿಖಾ ಠಾಣೆ ಸ್ಥಾಪಿಸಲಾಗಿದೆ. ಶಹಾಬಾದ್ ಉಪ ವಿಭಾಗದ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಮಾರ್ಚ್ ತಿಂಗಳಿನಲ್ಲಿ 14 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಕಾಗಿಣಾ ನದಿ ಮತ್ತು ಖಾಸಗಿ ಪಟ್ಟಾ ಜಮೀನಿನಲ್ಲಿ ನಿಯಮ ಮೀರಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಪೊಲೀಸ್ ಇಲಾಖೆ ಹೊರತುಪಡಿಸಿ ಮರಳು ಉಸ್ತುವಾರಿ ಸಮಿತಿಯು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಅವರು ಆರೋಪಿಸಿದ್ದಾರೆ.
ತಾಲ್ಲೂಕು ಮರಳು ಉಸ್ತುವಾರಿ ಸಮಿತಿ: ಕಳೆದ 2020ರಲ್ಲಿ ಜಾರಿಯಾಗಿರುವ ಹೊಸ ಮರಳು ನೀತಿಯ ಪ್ರಕಾರ ತಾಲ್ಲೂಕು ಮಟ್ಟದ ಮರಳು ಉಸ್ತುವಾರಿ ಸಮಿತಿಯಲ್ಲಿ ಸೇಡಂ ಉಪ ವಿಭಾಗಾಧಿಕಾರಿ (ಅಧ್ಯಕ್ಷ) ತಹಶೀಲ್ದಾರ್ (ಕಾರ್ಯದರ್ಶಿ) ತಾಲ್ಲೂಕು ಪಂಚಾಯಿತಿ ಇ.ಒ, ಪೊಲೀಸ್ ಉಪಾಧೀಕ್ಷಕರು, ಲೋಕೋಪಯೋಗಿ ಇಲಾಖೆಯ ಎ.ಇ.ಇ, ಜಲಸಂನ್ಮೂಲ ಇಲಾಖೆ ಎ.ಇ.ಇ, ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರ್ ವಾಹನ ನಿರೀಕ್ಷಕರು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ, ಗ್ರಾಮ ಪಂಚಾಯಿತಿ ಪಿ.ಡಿ.ಒ ಅಥವಾ ಕಾರ್ಯದರ್ಶಿ ಸದಸ್ಯರಾಗಿದ್ದಾರೆ.