
ಮಂಗಳೂರು: ಮೊಂಟೆಪದವಿನಲ್ಲಿ ಒಂದೆಡೆಯಿಂದ ಗುಡ್ಡ ಕುಸಿದು ಮನೆ ಧರಾಶಾಯಿಯಾಗಿದ್ದರೆ ಇನ್ನೊಂದೆಡೆಯಿಂದ 3 ಜೀವಗಳು ಪ್ರಾಣ ರಕ್ಷಣೆಗಾಗಿ ಗೋಗರೆಯುತ್ತಿದ್ದವು. ಈ ಮಧ್ಯೆ ಮತ್ತೆ ಮತ್ತೆ ಗುಡ್ಡ ಕುಸಿತ ಭೀತಿಯಿತ್ತು. ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಮುಸ್ಲಿಂ ಯುವಕರು ಜೀವರಕ್ಷಣೆಗಾಗಿ ಇಳಿದೇ ಬಿಟ್ಟರು. ಕಳೆದೊಂದು ವಾರದಿಂದ ಕೋಮು ಸಂಘರ್ಷಕ್ಕೆ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಜ ಮಾನವೀಯತೆ ಸೌಹಾರ್ದತೆ ಮತ್ತೆ ಮೇಳೈಸಿದೆ. ಅಲ್ಲಿ ಜಾತಿ ಧರ್ಮದ ಬೇಧಭಾವವಿರಲಿಲ್ಲ. ಅಲ್ಲಾಹು ಈಶನಲ್ಲೂ ಪ್ರಾರ್ಥನೆ ಒಂದೇ ಆಗಿತ್ತು.

ಆ ಮೂರು ಜೀವಗಳು ಬದುಕಿ ಬರಲೆಂದು. ಈ ಮೂಲಕ ಗುಡ್ಡ ಕುಸಿತದ ದುರಂತದ 9 ಗಂಟೆಗಳ ಕಾರ್ಯಾಚರಣೆ ಒಂದೆಡೆ ಪ್ರಕೃತಿಯ ಭೀಕರತೆಯನ್ನು ಪ್ರದರ್ಶಿಸಿದರೆ ಮತ್ತೊಂದೆಡೆ ಧರ್ಮಾಂಧತೆ ಮೀರಿದ ಮಾನವೀಯತೆಯನ್ನು ಸಾಬೀತು ಪಡಿಸಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಉಳ್ಳಾಲ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತವಾದ ವಿಚಾರ ಮಂಜನಾಡಿಗೆ ನಮಾಜ್ಗೆ ತೆರಳುತ್ತಿದ್ದ ಯುವಕರಿಗೆ ತಿಳಿಯುತ್ತದೆ. ಕೂಡಲೇ ಘಟನಾ ಸ್ಥಳಕ್ಕೆ ಬಂದು ಕಾರ್ಯಾಚರಣೆಗೆ ಇಳಿಯುತ್ತಾರೆ. ಮುರಿದು ಬಿದ್ದ ಮನೆಯ ಗೋಡೆಗಳನ್ನು ಒಡೆದು ಒಳಪ್ರವೇಶಿಸುತ್ತಾರೆ ಮಣ್ಣಿನಡಿ ಸಿಲುಕಿ ಜೀವನ್ಮರಣದಲ್ಲಿ ಹೋರಾಟ ಮಾಡುವ ತಾಯಿ ಮಗುವಿಗೆ ನೀರು ಕುಡಿಸಿ ಏನಾಗಲ್ಲ ಎಂದು ಧೈರ್ಯ ತುಂಬುತ್ತಾರೆ.
ಮುಗಿಲು ಮುಟ್ಟಿದ ಮಗುವಿನ ಚೀರಾಟ ನೋಡಿ ದೇವರೇ ಇವರನ್ನು ಬದುಕಿಸಿಕೊಡು ಎಂದು ಪ್ರಾರ್ಥಿಸುತ್ತಾರೆ. ತಾವೇ ಹಾರೆ, ಪಿಕ್ಕಾಸು, ಜಾಕ್, ಟರ್ಪಾಲು, ಮಿನಿ ಜನರೇಟರ್ ತಂದು ಕಾರ್ಯಾಚರಣೆ ನಡೆಸುತ್ತಾರೆ. ಸ್ಥಳೀಯ ಯುವಕರು ಈ ಯುವಕರಿಗೆ ಸಾಥ್ ನೀಡುತ್ತಾರೆ. ಮುಂಜಾನೆ 4.30ರಿಂದ ಮಧ್ಯಾಹ್ನ 2.30ರ ವರೆಗೆ ಒಂದು ನಿಮಿಷವೂ ವಿರಮಿಸದೆ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಾರೆ.ಮುಸ್ಲಿಮರು ಶುಕ್ರವಾರ ಮಧ್ಯಾಹ್ನ ವೇಳೆ ಸಾಮಾನ್ಯವಾಗಿ ನಮಾಜ್ನ್ನು ತಪ್ಪಿಸುವುದಿಲ್ಲ. ಆದರೆ ದುರಂತ ನಡೆದ ಸ್ಥಳದಲ್ಲಿದ್ದ ಯುವಕರು ನಮಾಜ್ಗೂ ತೆರಳದೆ ಇದು ಕೂಡಾ ದೇವರ ಸೇವೆ ಎಂದು ನಂಬಿಕೆಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ನಾನು ಬೆಳಗ್ಗೆ 5 ಗಂಟೆ ಸುಮಾರಿಗೆ ಇಲ್ಲಿಗೆ ಬಂದು ನೋಡುವಾಗ ಮನೆ ಬಿದ್ದಿತ್ತು. ಕ್ಷಣ ಮಾತ್ರದಲ್ಲಿ ಮನೆ ಗೋಡೆಯನ್ನು ಮುರಿದು ನಾನು ಮತ್ತು ಇನ್ನೊಬ್ಬ ಒಳಗೆ ಹೋದೆವು. ಮನೆಯೊಳಗಿನಿಂದ ಮಣ್ಣು ಕುಸಿಯುತ್ತಿತ್ತು. ತಾಯಿ ಅಶ್ವಿನಿ ಮಕ್ಕಳನ್ನು ರಕ್ಷಣೆ ಮಾಡಿ ಎಂದು ಬೊಬ್ಬಿಡುತ್ತಿದ್ದರು. ನಾವು ಧೈರ್ಯ ಹೇಳಿದೆವು. ಆದರೆ ನಾವು ಇಷ್ಟೆಲ್ಲ ಶ್ರಮವಹಿಸಿ ಕಾರ್ಯಾಚರಣೆ ನಡೆಸಿದರೂ ದೇವರು ಕರುಣೆ ತೋರಿ ಮಕ್ಕಳನ್ನು ಉಳಿಸಲಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯ ಆಸೀಫ್ ಕಣ್ಣೀರು ಹಾಕಿದರು.