
ಬೆಂಗಳೂರು: ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲೂ ಇ.ಎಸ್.ಐ ಕಾರ್ಡ್ದಾರರು ಶೂನ್ಯ ಬಿಲ್ ವ್ಯವಸ್ಥೆಯಡಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಪ್ರಯತ್ನ ನಡೆದಿದೆ, ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

j3tvkannada
ಕೇಂದ್ರ ಸಚಿವರಾಗಿ ಒಂದು ವರ್ಷದ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು, ಅಸಂಘಟಿತ ಹಾಗೂ ಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ದೇಶದ ಎಲ್ಲಾ ನಾಗರಿಕರು ಮುಕ್ತವಾಗಿ ಭವಿಷ್ಯ ನಿಧಿ ಯೋಜನೆಯಡಿ ಪಿಂಚಣಿ ಪಡೆಯಲು ನೋಂದಣಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲೂ ಇ.ಎಸ್.ಐ ಕಾರ್ಡ್ದಾರರಿಗೆ ಚಿಕಿತ್ಸೆ:-
ಇ.ಎಸ್.ಐ ಕಾರ್ಡ್ದಾರರು ಇ.ಎಸ್.ಐ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುವ ವ್ಯವಸ್ಥೆ ಇತ್ತು. ಆದರೆ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆಗಳಲ್ಲೂ ಇ.ಎಸ್.ಐ ಕಾರ್ಡ್ದಾರರಿಗೆ ಚಿಕಿತ್ಸೆ ಕಲ್ಪಿಸುವ ಪ್ರಾಯೋಗಿಕ ಪ್ರಯತ್ನ ದಿಲ್ಲಿಯಲ್ಲಿ ನಡೆದಿದೆ. ಶೀಘ್ರವೇ ದೇಶಾದ್ಯಂತ ಈ ಸೌಲಭ್ಯ ವಿಸ್ತರಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.
2017ರಿಂದ ಈವರೆಗೆ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ವ್ಯಾಪ್ತಿಗೆ 7.1 ಕೋಟಿ ಮಂದಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಅಷ್ಟು ಪ್ರಮಾಣದಲ್ಲಿ ಹೊಸ ಉದ್ಯೋಗ ಸೃಷ್ಟಿಯಾದಂತಾಗಿದೆ. ಅದೇ ರೀತಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಭವಿಷ್ಯ ನಿಧಿ ಯೋಜನೆಯಡಿ ಪಿಂಚಣಿ ಪಡೆಯಲು ನೋಂದಣಿಗೆ ಅವಕಾಶ ಕೊಡುವ ದೃಷ್ಟಿಯಿಂದ ಶೀಘ್ರದಲ್ಲೇ ಹೊಸ ಯೋಜನೆ ಘೋಷಣೆಯಾಗಲಿದೆ ಎಂದರು.