
ಮಂಡ್ಯ: ಮೈಸೂರು, ಬೆಂಗಳೂರಿಗೆ ಕುಡಿಯುವ ನೀರೊದಗಿಸುವ ಹಾಗೂ ಸಕ್ಕರೆ ನಾಡಿನ ರೈತರ ಜೀವನಾಡಿ, ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರದ ನೀರಿನ ಮಟ್ಟ ಮೇ ತಿಂಗಳಲ್ಲೇ ನೂರು ಅಡಿ ದಾಟಿದೆ.

j3tvkannada
ಸಾಮಾನ್ಯವಾಗಿ ಜೂನ್, ಜುಲೈನಲ್ಲಿ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ನೂರಡಿ ತಲುಪುತ್ತದೆ. ಜಲಾಶಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ನೂರಡಿ ತಲುಪಿರುವುದು ಜೂನ್ನಲ್ಲಿ. ಅದರ ಹೊರತಾಗಿ ಮುಂಗಾರು ವಿಳಂಬವಾದಾಗ ಜುಲೈನಲ್ಲಿ ಶತಕ ದಾಟಿದೆ. ಆಗಸ್ಟ್ನಲ್ಲೂ ನೂರಡಿ ತಲುಪಿರುವ ಉದಾಹರಣೆ ಇದೆ.
35 ವರ್ಷಗಳಲ್ಲಿ ಎರಡನೇ ಬಾರಿ ದಾಖಲೆ:-
124.80 ಅಡಿ ಸಾಮರ್ಥ್ಯದ ಜಲಾಶಯ, 2023ರಲ್ಲಿ ಬರಗಾಲದ ಪರಿಣಾಮ ಜಲಾಶಯ ಭರ್ತಿಯಾಗಿರಲಿಲ್ಲ. ಇನ್ನು 2022ರಲ್ಲಿ ಮೇ 11ರಂದೇ ನೂರಡಿ ತಲುಪಿತ್ತು. 2023ರಲ್ಲಿ ಸಾಕಷ್ಟು ವಿಳಂಭವಾಗಿ ಜುಲೈ 25ರಂದು ನೂರಡಿ ಮುಟ್ಟಿತ್ತು. ಕಳೆದ ವರ್ಷ ಜುಲೈ ಮೊದಲ ವಾರದಲ್ಲಿ100 ಅಡಿ ತಲುಪಿತ್ತು.
2024ರಲ್ಲಿ ಜು.11ರಂದೇ ಜಲಾಶಯದ ನೀರಿನ ಮಟ್ಟವು 124 ಅಡಿ ತಲುಪಿದರು ಜು.25ರಂದು ಸಂಪೂರ್ಣ ಭರ್ತಿ(124.80 ಅಡಿಗಳು) ಮಾಡಿಸಲಾಗಿತ್ತು. ಆ ಬಳಿಕ ಬರೋಬ್ಬರಿ 154 ದಿನಗಳ ಕಾಲ ಅಂದರೆ ಡಿ.25ರವರೆಗೂ ಗರಿಷ್ಠ ಮಟ್ಟವನ್ನು ಕಾಯ್ದುಕೊಳ್ಳಲಾಗಿತ್ತು. 2025 ಏಪ್ರಿಲ್ 20 ರಂದು ಕೇವಲ 81 ಕ್ಯೂಸೆಕ್ ಒಳ ಹರಿವು ಮತ್ತು 3841 ಕ್ಯೂಸೆಕ್ ಹೊರ ಹರಿವಿನೊಂದಿಗೆ ಜಲಾಶಯದ ನೀರಿನ ಮಟ್ಟ 99.64 ಕೆಳಗಿಳಿದಿತ್ತು. ಈ ಮಧ್ಯೆ ಈ ವರ್ಷ ಫೆಬ್ರವರಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿತ್ತು. ಹೀಗಾಗಿ ಈ ವರ್ಷ ಬರಗಾಲ ಕಾಡುವುದೇ ಎಂಬ ಆತಂಕ ರೈತರು ಮತ್ತು ಜನರಲ್ಲಿ ಮೂಡಿತ್ತು.
ಕಳೆದ ವರ್ಷಕ್ಕಿಂತ 16 ಅಡಿಯಷ್ಟು ಹೆಚ್ಚು ನೀರು ಸಂಗ್ರಹ:-
ಮೇ 26ರಂದು 89.35 ಅಡಿಯಿದ್ದ ಜಲಾಶಯದ ನೀರಿನ ಮಟ್ಟವು ಮೇ 30ರಂದು(ಶುಕ್ರವಾರ) 100.10 ಅಡಿಗೇರಿದೆ. ಕೇವಲ ನಾಲ್ಕು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟವು ಸುಮಾರು 11 ಅಡಿಯಷ್ಟು ಏರಿಕೆಯಾಗಿದೆ.
ಮೇ 29ರಂದು ಬೆಳಗ್ಗೆ 8ಕ್ಕೆ 98 ಅಡಿಯಿದ್ದ ಜಲಾಶಯದ ನೀರಿನ ಮಟ್ಟವು ಮೇ 30ರಂದು ಬೆಳಗ್ಗೆ 8ರ ವೇಳೆಗೆ 2.10 ಅಡಿಯಷ್ಟು ಹೆಚ್ಚಾಗಿ ನಿರೀಕ್ಷೆಯಂತೆಯೇ ನೂರಡಿ ದಾಟಿದೆ. ಪ್ರಸ್ತುತ ಜಲಾಶಯಕ್ಕೆ 19,448 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೇವಲ 670 ಕ್ಯೂಸೆಕ್ ನೀರನ್ನು ಮಾತ್ರ ಕಟ್ಟೆಯಿಂದ ಹೊರ ಬಿಡಲಾಗಿದೆ. ಕಳೆದ ವರ್ಷ(2024) ಇದೇ ಅವಧಿಯಲ್ಲಿ1,515 ಕ್ಯೂಸೆಕ್ಒಳ ಹರಿವು, 493 ಕ್ಯೂಸೆಕ್ ಹೊರ ಹರಿವಿನೊಂದಿಗೆ ಜಲಾಶಯದ ನೀರಿನ ಮಟ್ಟ 83.85 ಅಡಿ ದಾಖಲಾಗಿತ್ತು. ಕಳೆದ ವರ್ಷಕ್ಕಿಂತ 16 ಅಡಿಯಷ್ಟು ನೀರು ಹೆಚ್ಚು ಸಂಗ್ರಹವಾಗಿದೆ.
ಜಲಾಶಯದಲ್ಲಿದೆ 22,888 ಟಿ.ಎಂ.ಸಿ ನೀರು:-
49.452 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಕೆ.ಆರ್.ಎಸ್ ಜಲಾಶಯದಲ್ಲಿ ಪ್ರಸ್ತುತ 22.888 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗಿದ್ದು, ಇದರಲ್ಲಿ14.509 ನೀರು ಕೃಷಿ ಬಳಕೆಗೆ ಲಭ್ಯವಿದೆ. ಉಳಿದ 8.379 ಟಿ.ಎಂ.ಸಿಯಲ್ಲಿ 4.400 ಟಿ.ಎಂ.ಸಿ ಯಾವುದಕ್ಕೂ ಬಳಕೆಗೆ ಬಾರದ ಡೆಡ್ ಸ್ಟೋರೇಜ್. ಉಳಿದ 3.979 ಟಿ.ಎಂ.ಸಿ ಕುಡಿಯುವ ನೀರಿಗೆ ಮೀಸಲು. ಈ ವರ್ಷ ಮೇ ಅಂತ್ಯದಲ್ಲೇ ಕನ್ನಂಬಾಡಿ ಕಟ್ಟೆ ನೂರಡಿ ತಲುಪಿದೆ. ಈಗಾಗಲೇ ಮುಂಗಾರು ಆರಂಭವಾಗಿರುವುದರಿಂದ ಜಲಾಶಯ ಬೇಗ ಭರ್ತಿಯಾಗುವ ನಿರೀಕ್ಷೆಯಿದೆ ಎಂದು ಮಂಡ್ಯದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಕೆ.ರಘುರಾಮ್ ಹೇಳಿದರು.