
ಕೋಲಾರ: ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬಣ್ಣ ತಯಾರಿಕಾ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕಾರ್ಖಾನೆ ಏಳು ತಾಸು ಹೊತ್ತಿ ಉರಿದಿದೆ.

j3tvkannada
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 90ಕ್ಕೂ ಹೆಚ್ಚು ಕಾರ್ಮಿಕರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸೌತ್ ಫೀಲ್ಡ್ ಪೇಂಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಬಣ್ಣ ತಯಾರಿಸಲು ಬಳಸಲು ಇಟ್ಟಿದ್ದ ಕಚ್ಚಾ ರಾಸಾಯನಿಕ ವಸ್ತುಗಳಿಗೆ ಬೆಂಕಿ ತಗುಲಿದೆ.
ಬೇಸಿಗೆಯಾದ್ದರಿಂದ ನೋಡ ನೋಡುತ್ತಿದ್ದಂತೆಯೇ ಬೆಂಕಿ ಇಡೀ ಕಾರ್ಖಾನೆಗೆ ಆವರಿಸಿಕೊಂಡಿತು. ಕಾರ್ಖಾನೆ ಸುತ್ತಲೂ ದಟ್ಟವಾದ ಹೊಗೆ ಆವರಿಸಿತ್ತು. ಏಳು ತಾಸು ಹೊತ್ತಿ ಉರಿದು ಕಾರ್ಖಾನೆಯಲ್ಲಿನ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಮಾಲೂರು ಮತ್ತು ಬಂಗಾರಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆ 5ಕ್ಕೆ ಬೆಂಕಿಯನ್ನು ಹತೋಟಿಗೆ ತಂದರು.
ವಿದ್ಯಾ ರೈ ಮತ್ತು ಶಿವರಾಮ ಶೇಷಪ್ಪ ಹೆಗ್ಡೆ ಪಾಲುದಾರಿಕೆಯ ಈ ಕಾರ್ಖಾನೆ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 90ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ತಹಶೀಲ್ದಾರ್ ಎಂ.ವಿ.ರೂಪಾ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಖಾರಿ ವರಲಕ್ಷ್ಮಿ, ಮಾಲೂರು ಕಾರ್ಮಿಕ ಇಲಾಖೆಯ ನಿರೀಕ್ಷಕ ರೇಣುಕಾ ಪ್ರಸನ್ನ, ಇನ್ಸ್ಪೆಕ್ಟರ್ ವಸಂತ್ ಸ್ಥಳಕ್ಕೆ ಭೇಟಿ ನೀಡಿದ್ದರು