
ವಿಜಯಪುರ: ಸಮಾಜದಲ್ಲಿ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಮತ್ತು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರ ಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ‘ಕುವೆಂಪು ಓದು’ ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

j3tvkannada
ಪಠ್ಯವು ಶ್ರೇಷ್ಠವಾಗಿದ್ದಲ್ಲಿ ಅದು ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ. ಕುವೆಂಪು ರಚಿಸಿದ ಸಾಹಿತ್ಯ ಮತ್ತೆ ಮತ್ತೆ ಓದಿಸಿಕೊಳ್ಳುವುದರಿಂದ ಆ ಕವಿ ಜೀವಂತವಾಗಿರುತ್ತಾನೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳಂತೆ ಕವಿಗೆ ವಯಸ್ಸಾಗುತ್ತದೆ ಆದರೆ ಕಾವ್ಯಕ್ಕೆ ಅಲ್ಲಾ ಎಂದರು. ಕುವೆಂಪು ಅವರು ಕನ್ನಡ ಕವಿಗಳಲ್ಲಿಯೇ ಅಗ್ರಗಣ್ಯರು. ಅವರ ಸುದೀರ್ಘವಾದ ಸಾಹಿತ್ಯ ಮಾನವೀಯ ಮೌಲ್ಯವನ್ನು ಸಾರುತ್ತದೆ. ಮನುಷ್ಯ ಮನುಷತ್ವವನ್ನು ಹೊಂದಲು ಕುವೆಂಪುರವರ ಸಾಹಿತ್ಯ ಓದಲೇಬೇಕು ಎಂದು ಸಲಹೆ ನೀಡಿದರು.

j3tvkananda
ಸಿಂಡಿಕೇಟ್ ಸದಸ್ಯ ನಟರಾಜ ಬೂದಾಳು ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮಾನವೀಯ ಒಲುಮೆಯ ಆಗರ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಕುವೆಂಪುರವರ ಓದಿಗೆ ಸ್ಪಂದಿಸುವುದು ಅತ್ಯಂತ ಅವಶ್ಯಕವಾಗಿದೆ. ಓದು ಸಹಜವಾದ ಓದಾಗಿರದೇ ವ್ಯಕ್ತಿತ್ವ ವಿಕಸನವನ್ನು ಮಾಡುವ ಓದಾಗಬೇಕು. ಅಂತಹ ಓದನ್ನು ಕುವೆಂಪುರವರ ಸಾಹಿತ್ಯದಿಂದ ಪಡೆಯಬಹುದಾಗಿದೆ ಎಂದರು.
ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ. ಮಾತನಾಡಿ, ಕುವೆಂಪುರವರು ಆತ್ಮವಿಶ್ವಾಸ ತುಂಬುವ ಕವಿಗಳು. ಯಾವ ವ್ಯಕ್ತಿಯ ಆತ್ಮವಿಕಾಸ ಬೆಳೆಸುತ್ತದೆಯೋ, ಮೌಲ್ಯವನ್ನು ಪ್ರತಿಪಾದಿಸುತ್ತದೆಯೋ, ನಂಬಿಕೆಯನ್ನು ದೃಡಗೊಳಿಸುತ್ತದೆಯೋ, ಸಾಮಾಜಿಕ ಪ್ರಸ್ತುತತೆಯನ್ನು ಬಿಂಬಿಸುತ್ತದೆಯೋ ಅದು ನಿಜವಾದ ಸಾಹಿತ್ಯ ಎಂದರು. ಕುಲಸಚಿವ ಶಂಕರಗೌಡ ಸೋಮನಾಳ, ಪ್ರಾಧಿಕಾರದ ಸದಸ್ಯ ಸಂಚಾಲಕ ಎಸ್.ಗಂಗಾಧರಯ್ಯ, ರಾಮಲಿಂಗಪ್ಪ ಬೇಗೂರು, ಎಂ.ನಾಗರಾಜ ಇದ್ದರು.