
ಬೆಳಗಾವಿ: ರೈತರು ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರ ಗೃಹ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಮಂಜೂರಾದ 9 ಕಬ್ಬು ಕಟಾವು ಯಂತ್ರಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು. ರೈತರು ಬದಲಾವಣೆಗೆ ಸ್ವಂದಿಸಿ ಕೃಷಿ ಇಲಾಖೆ ಹಾಗೂ ಇತರ ಇಲಾಖೆಗಳ ಮಾರ್ಗದರ್ಶನದಲ್ಲಿ ಆಧುನಿಕ ಪದ್ಧತಿಗಳನ್ನು ಆಳವಡಿಸಿಕೊಳ್ಳಬೇಕು. ಕಬ್ಬು ಕಟಾವು ಯಂತ್ರಗಳಿಂದ ಕೂಲಿಕಾರರ ಸಮಸ್ಯೆ ಪರಿಹಾರದೊಂದಿಗೆ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದರಂತೆ ಇತರ ಯಂತ್ರಗಳನ್ನು ಹೆಚ್ಚು ಉಪಯೋಗಿಸಿ ಕೃಷಿಯಲ್ಲಿ ಯಶಸ್ವಿಯಾಗಿ ಎಂದು ಹೇಳಿದರು.

j3tvkananda
ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಚ್.ಡಿ. ಕೋಳಕರ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ನುರಿಸುವ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3.15 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು. ಆದರೆ ಈಚಿನ ವರ್ಷಗಳಲ್ಲಿ ಕಬ್ಬು ಬೆಳೆದ ರೈತರು ಕಬ್ಬು ಕಟಾವು ಮಾಡುವುದಕ್ಕಾಗಿ ಗ್ಯಾಂಗ್ ಮತ್ತು ಕೂಲಿಕಾರರನ್ನು ಹುಡುಕುವುದೇ ಒಂದು ದೊಡ್ಡ ಸವಾಲವಾಗಿ ಪರಿಣಮಿಸಿದೆ. 2023-24ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇಂಥ ಯಂತ್ರಗಳ ಪೂರೈಕೆಗೆ ಒಟ್ಟು 141 ಅರ್ಜಿಗಳು ಸಲ್ಲಿಕೆಯಾಗಿದ್ದು ಲಾಟರಿ ಮೂಲಕ 31 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿತ್ತು. ಕಳೆದ ಆರ್ಥಿಕ ವರ್ಷ 2024-25 ಅವಧಿಯಲ್ಲಿ ಒಟ್ಟು 379 ಅರ್ಜಿ ಸಲ್ಲಿಕೆಯಾಗಿದ್ದು 77 ಜನರಿಗೆ ಕಬ್ಬು ಕಟಾವು ಯಂತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

j3tvkannada
ಒಟ್ಟು ₹ 98 ಲಕ್ಷ ಮೌಲ್ಯದ ಕಬ್ಬು ಕಟಾವು ಯಂತ್ರವನ್ನು ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ಶೇ 50ರಷ್ಟು ರಿಯಾಯತಿ ಮತ್ತು ಸಾಮಾನ್ಯ ವರ್ಗದವರಿಗೆ ಶೇ 40ರಷ್ಟು ಸಹಾಯಧನದಲ್ಲಿ ಕೃಷಿ ಇಲಾಖೆಯಿಂದ ವಿತರಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅರ್ಜಿ ಸಲ್ಲಿಸುವ ರೈತರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. ಸಾಮಾನ್ಯ ರೈತರಿಗೆ ₹ 40 ಲಕ್ಷ, ಎಸ್ಸಿ ಮತ್ತು ಎಸ್ಟಿ ರೈತರಿಗೆ ₹ 50 ಲಕ್ಷ ಸಬ್ಸಿಡಿ ಇದೆ ಎಂದು ತಿಳಿಸಿದರು. ಗೋಕಾಕ ತಾಲ್ಲೂಕಿನಲ್ಲಿ 2024-25 ನೇ ಸಾಲಿಗೆ ಒಟ್ಟು 24 ಅರ್ಜಿಗಳು ಸಲ್ಲಿಕೆಯಾಗಿದ್ದು ಲಾಟರಿ ಮೂಲಕ 9 ಜನರಿಗೆ ಕಬ್ಬು ಕಟಾವು ಯಂತ್ರಗಳನ್ನು ವಿತರಿಸಲಾಗಿದೆ.
ಹಾರ್ವೆಸ್ಟರ್ ಯಂತ್ರಗಳಿಂದ ಕಬ್ಬನ್ನು ಹಗಲು & ರಾತ್ರಿ ಯಾವುದೇ ಸಮಯದಲ್ಲಿ ಕಬ್ಬು ಕಟಾವು ಮಾಡಬಹುದು. ಈ ಯಂತ್ರವು ಗಂಟೆಗೆ 15-20 ಟನ್ ಕಟಾವು ಮಾಡುತ್ತದೆ. ಒಂದು ದಿನದಲ್ಲಿ 6ರಿಂದ 8 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬನ್ನು ಕಟಾವು ಮಾಡಬಹುದು ಎಂದು ವಿವರಿಸಿದರು. ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಶಾಸಕರ ಆಪ್ತ ಸಹಾಯಕರಾದ ಭೀಮಗೌಡ ಪೊಲೀಸ್ ಪಾಟೀಲ, ಸುರೇಶ ಸನದಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತುಕಾರಾಮ ಕಾಗಲ, ಮಡ್ಡೆಪ್ಪ ತೋಳಿನವರ ಮತ್ತು ಕೃಷಿ ಅಧಿಕಾರಿಗಳು ಇದ್ದರು.