
ದಕ್ಷಿಣ ಕನ್ನಡ: ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಲಾಗಿದ್ದರೂ ಸ್ಪಂದಿಸದ ಯಾತ್ರಾರ್ಥಿಗಳು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಮತ್ತೆ ಕಸದ ರಾಶಿ ಬೀಳುತ್ತಿದೆ. ಕುಮಾರಧಾರಾ ಸ್ನಾನ ಘಟ್ಟ ಪರಿಸರ, ಸೇತುವೆ ಬಳಿ ಕಸ ಎಸೆಯದಂತೆ, ಸ್ವಚ್ಛತೆ ಕಾಪಾಡುವಂತೆ ಸೂಚನಾ ಫಲಕ ಅಳವಡಿಸಲಾಗಿತ್ತು. ನದಿಯಲ್ಲಿ, ಕುಮಾರಧಾರಾ ಪರಿಸರದಲ್ಲಿ ಮತ್ತೆ ಮತ್ತೆ ಕಸದ ರಾಶಿ ಬೀಳುತ್ತಿದೆ. ಸುಬ್ರಹ್ಮಣ್ಯದ ವಲಯ ಅರಣ್ಯ ಕಚೇರಿ ಬಳಿಯಿಂದ ಹೆದ್ದಾರಿಯ ಎರಡೂ ಬದಿಯಲ್ಲೂ ವಾಹನ ಸವಾರರೂ, ಯಾತ್ರಾರ್ಥಿಗಳು, ಸಾರ್ವಜನಿಕರು ಕಸ ಎಸೆಯುತ್ತಿದ್ದಾರೆ.

ನದಿಗೆ ಬಟ್ಟೆ ಎಸೆಯದಂತೆ, ಸ್ನಾನ ಮಾಡಿದ ಬಳಿಕ ಬಟ್ಟೆಗಳನ್ನು ಬದಿಯಲ್ಲಿ ಬಿಡದಂತೆ ಭಕ್ತರಿಗೂ ಸೂಚನೆ ನೀಡಲಾಗುತ್ತಿದ್ದರೂ ಭಕ್ತರು ಸ್ಪಂದಿಸುತ್ತಿಲ್ಲ. ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸುವ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ, ಅಥವಾ ದೊಡ್ಡ ಮೊತ್ತದ ದಂಡ ವಿಧಿಸಬೇಕು. ಕಸ ಎಸೆದವರಿಂದಲೇ ಸ್ವಚ್ಛತೆ ಮಾಡಿಸಬೇಕು ಎಂದು. ಸ್ನಾನ ಘಟ್ಟ ಪ್ರದೇಶದಲ್ಲಿ ಸ್ವಚ್ಛತಾ ಗಸ್ತು ವ್ಯವಸ್ಥೆಯನ್ನೂ ನಡೆಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.