
ಬೀದರ್: ಪಟ್ಟಣದ ದಿನವಹಿ, ವಾರದ ತರಕಾರಿ ಸಂತೆ ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆಯಿಂದ ಸೊರಗುತ್ತಿದೆ.

j3tvkannada
ಮಾರುಕಟ್ಟೆಯಲ್ಲಿ 22 ಮಳಿಗೆಗಳಿದ್ದು, ಅದರಲ್ಲಿ 10-15 ಮಳಿಗೆಗಳನ್ನು ಮಾತ್ರ ತರಕಾರಿ ವ್ಯಾಪಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಹಿಂಭಾಗದ ಕೆಲ ಮಳಿಗೆಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಮೂತ್ರಾಲಯ, ಶೌಚಾಲಯ ದುರಸ್ತಿ ಇಲ್ಲದೆ ಗಬ್ಬುನಾರುತ್ತಿವೆ. ಸಂತೆ ಮೈದಾನವನ್ನು ಗ್ರಾಹಕ, ಮಾರಾಟಗಾರರ ಜತೆಗೆ ಕೆಲ ಸ್ಥಳೀಯರು ಮೂತ್ರ ಮತ್ತು ಶೌಚಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಇಡೀ ಮಾರುಕಟ್ಟೆ ಪರಿಸರ ಸದಾ ಕೊಳಕಿನಿಂದ ಆವೃತ್ತವಾಗಿರುತ್ತದೆ.
ಇನ್ನು ಕುಡಿಯುವ ನೀರು ಮರೀಚಿಕೆಯಾಗಿದೆ. ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳಿಗೂ ಈ ಮಾರುಕಟ್ಟೆಯೇ ಆಶ್ರಯ ತಾಣ. ಮಾರುಕಟ್ಟೆಯಲ್ಲಿ ದನಗಳು, ಹಂದಿಗಳ ಹಾವಳಿಯಿಂದ ಗ್ರಾಹಕರು, ವ್ಯಾಪಾರಿಗಳು ರೋಸಿಹೋಗಿದ್ದಾರೆ.

j3tvkannada
ಪ್ರತಿ ಮಂಗಳವಾರ ನಡೆಯುವ ಸಂತೆಯು ತರಕಾರಿ ಮಾರುಕಟ್ಟೆ ಅದ್ವಾನ ಸ್ಥಿತಿಯಿಂದ ಮೈದಾನದ ಹೊರ ಭಾಗದ ರಸ್ತೆ ಅತಿಕ್ರಮಿಸುವಂತಾಗಿದೆ. ಹೀಗಾಗಿ ಸುಗಮ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ವ್ಯಾಪಾರಿಗಳಿಗೆ ನೆರಳು ವ್ಯವಸ್ಥೆ ಇಲ್ಲದ ಕಾರಣ ಈ ಬಿರು ಬೇಸಿಗೆಯಲ್ಲಂತೂ ತರಕಾರಿಗಳು ಬೇಗ ಬಾಡಿ ಹಾಳಾಗುತ್ತಿವೆ. ತಾಜಾ ತರಕಾರಿ ಎಂದು ಕೊಳ್ಳಲು ಬರುವ ಗ್ರಾಹಕರು ಖರೀದಿ ಮಾಡದೆ ಹೋಗುತ್ತಾರೆ ಎಂದು ಕೆಲ ವ್ಯಾಪಾರಿಗಳು ಅಳಲು ತೋಡಿಕೊಂಡರು. ಇದಕ್ಕೆಲ್ಲ ಪರಿಹಾರ ಸಿಗಬೇಕಿದ್ದರೆ ನೂತನ ಮಾರುಕಟ್ಟೆ ಆದಷ್ಟು ಬೇಗ ನಿರ್ಮಾಣವಾಗಬೇಕು ಎಂಬ ಒತ್ತಾಯ ವ್ಯಾಪಾರಿಗಳು, ನಾಗರಿಕರಿಂದ ಕೇಳಿಬಂದಿದೆ.