
ಹಾಸನ: ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಹಾದು ಹೋಗಿರುವ ಹಳೆಯ ರಾಷ್ಟ್ರೀಯ ಹೆದ್ದಾರಿಯ ಡಾಂಬರೀಕರಣ ಕಾಮಗಾರಿಯ ಗುಣಮಟ್ಟವನ್ನು ಶಾಸಕ ಸಿಮೆಂಟ್ ಮಂಜು ಭಾನುವಾರ ಪರಿಶೀಲಿಸಿದರು.

j3tvkannada
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಳ್ಳುಪೇಟೆ ಊರಿನೊಳಗೆ ಹಾದು ಹೋಗಿರುವ ರಸ್ತೆಯು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಸೇರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ಗುತ್ತಿಗೆದಾರರು ಗುಣಮಟ್ಟದಲ್ಲಿ ಕಾಮಗಾರಿ ಮಾಡಬೇಕು. ಎಂಜಿನಿಯರ್ ಸ್ಥಳದಲ್ಲಿಯೇ ಇದ್ದು, ಪ್ರತಿ ಹಂತದ ಪರಿಶೀಲನೆ ನಡೆಸಬೇಕು.
ಗುಣಮಟ್ಟ ಕಳಪೆಯಾದರೆ, ಗುತ್ತಿಗೆದಾರ, ಎಂಜಿನಿಯರ್ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಗಳಿಂದ ಅನುದಾನ ಬರುವುದೇ ಕಡಿಮೆ. ಬಂದ ಅನುದಾನದಲ್ಲಿ ಹೆಚ್ಚು ವರ್ಷಗಳು ಬಾಳಿಕೆ ಬರುವಂತೆ ಕಾಮಗಾರಿ ಮಾಡಬೇಕು. ಹಿಂದೆಲ್ಲ ರಸ್ತೆಗೆ ಕಾಂಕ್ರೀಟ್ ಹಾಕಿ ಒಂದು ವಾರದೊಳಗೆ ಕಿತ್ತು ಹೋದದ್ದಿದೆ ಅಂತಹ ಕಾಮಗಾರಿಗಳಿಗೆ ಅವಕಾಶ ಇಲ್ಲ. ಸಾರ್ವಜನಿಕರ ತೆರಿಗೆ ಹಣದ ಪ್ರತಿ ಕಾಮಗಾರಿ ಗುಣಮಟ್ಟದಿಂದ ಕೂಡಿರಲೇಬೇಕು ಎಂದರು.
ಕೊಲ್ಲಹಳ್ಳಿಯಿಂದ ಬಾಳೆಗದ್ದೆ, ತೇಜಸ್ವಿ ವೃತ್ತ, ಹಳೇ ಹೇಮಾವತಿ ಸೇತುವೆ, ಹಳೇ ಬಸ್ ನಿಲ್ದಾಣ, ಚಂಪಕನಗರ ಮಾರ್ಗವಾಗಿ ಮಂಗಳೂರು ಕಡೆಯಿಂದ ಬೈಪಾಸ್ ಪ್ರವೇಶ ಮಾಡುವ ಆನೆಮಹಲ್ ಸಮೀಪದವರೆಗೆ, ಬಾಳ್ಳುಪೇಟೆ ಹಾಗೂ ಪಾಳ್ಯ ಒಳ ರಸ್ತೆಗಳು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ-75ರ ವ್ಯಾಪ್ತಿಯಲ್ಲಿದ್ದವು. ಮೂರು ಕಡೆ ಬೈಪಾಸ್ ರಸ್ತೆ ನಿರ್ಮಾಣ ಆಗಿದ್ದರಿಂದ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಗುಂಡಿ ಬಿದ್ದು ಹಾಳಾಗಿವೆ. ಪಟ್ಟಣದ ಹೇಮಾವತಿ ಸೇತುವೆ ಮೇಲಿನ ರಸ್ತೆ ಸಹ ಗುಂಡಿಮಯವಾಗಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಹಾಗಾಗಿ, ಗುಣಮಟ್ಟವನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದರು.
ಅಕ್ಟೋಬರ್ನಲ್ಲಿ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಹಳೆಯ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ಸಚಿವರು ಈ ರಸ್ತೆ ಅಭಿವೃದ್ಧಿಗೆ ₹10.6 ಕೋಟಿ ಬಿಡುಗಡೆ ಮಾಡಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಆ ಕಾರಣದಿಂದ ತ್ವರಿತವಾಗಿ ರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ ಎಂದರು.