
ರಾಮನಗರ: ಪರಿಸರವಾದಿ ಹಾಗೂ ಕವಿ ಭೂಹಳ್ಳಿ ಪುಟ್ಟಸ್ವಾಮಿ ಅವರು ಹೊರತಂದಿರುವ ಕೃತಿಗಳ ಸಮಗ್ರ ಸಂಪುಟ ಹೊರತರಬೇಕೆಂದು ಸಾಹಿತಿ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ ಅಭಿಪ್ರಾಯಪಟ್ಟರು.

j3tvkannada
ತಾಲ್ಲೂಕಿನ ಭೂಹಳ್ಳಿ ಗ್ರಾಮದ ಬುದ್ದೇಶ್ವರ ವನದಲ್ಲಿ ರಾಮನಗರ ಜಿಲ್ಲಾ ಲೇಖಕರ ವೇದಿಕೆ ಹಾಗೂ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶನಿವಾರ ಪರಿಸರವಾದಿ ದಿ.ಭೂಹಳ್ಳಿ ಪುಟ್ಟಸ್ವಾಮಿ ಅವರ ನೆನೆಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಹಳ್ಳಿ ಪುಟ್ಟಸ್ವಾಮಿ ಅವರು ಭೌತಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ಅವರು ಬೆಳೆಸಿರುವ ವನಗಳ ಮರ ಗಿಡಗಳಲ್ಲಿ, ಪಕ್ಷಿಗಳ ಕಲರವಗಳಲ್ಲಿ, ದುಂಬಿಗಳ ಝೇಂಕಾರಗಳಲ್ಲಿ ಅವರ ಉಸಿರಿದೆ. ಪುಟ್ಟಸ್ವಾಮಿ ಅವರ ಹೆಸರನ್ನು ಮತ್ತಷ್ಟು ಚಿರಸ್ಥಾಯಿಯಾಗಿಸಲು ಅವರು ತಂದಿರುವ ಕೃತಿಗಳ ಜೊತೆಗೆ ಅವರ ಬಗ್ಗೆ ಸಾಹಿತ್ಯಾಸಕ್ತರಿಂದ ಲೇಖನಗಳನ್ನು ಬರೆಸಿ ಸಮಗ್ರ ಸಂಪುಟ ಹೊರತರಬೇಕು ಎಂದರು.
ಸಿಂ.ಲಿಂ. ನಾಗರಾಜು ಪ್ರತಿಷ್ಠಾನದ ಅಧ್ಯಕ್ಷ ನಾಗವಾರ ಶಂಭೂಗೌಡ ಮಾತನಾಡಿ, ಭೂಹಳ್ಳಿ ಪುಟ್ಟಸ್ವಾಮಿ ಅವರ ಸಾಹಿತ್ಯ ಹಾಗೂ ಪರಿಸರ ಪ್ರೇಮವನ್ನು ಯುವ ಪೀಳಿಗೆ ಆದರ್ಶವಾಗಿಟ್ಟುಕೊಳ್ಳಬೇಕು. ಅವರಂತೆಯೇ ಗಿಡ ಮರಗಳನ್ನು ಬೆಳೆಸುವ ಸಂಕಲ್ಪ ಮಾಡಬೇಕು. ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತದ ವತಿಯಿಂದ ಇಂತಹ ಮಹನೀಯರನ್ನು ಸ್ಮರಣೆ ಮಾಡುವ ಕೆಲಸವಾಗಬೇಕು ಎಂದರು. ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಸಾಹಿತಿಗಳಾದ ಕೂರಣಗೆರೆ ಕೃಷ್ಣಪ್ಪ, ಎಲೆಕೇರಿ ಶಿವರಾಮು, ವಿ.ಪಿ.ವರದರಾಜು, ಕಸಾಪ ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ ಇತರರು ಭೂಹಳ್ಳಿ ಪುಟ್ಟಸ್ವಾಮಿ ಅವರ ಸಾಹಿತ್ಯ, ಪರಿಸರ ಪ್ರೇಮವನ್ನು ಸ್ಮರಿಸಿದರು. ಗಾಯಕರಾದ ಬೇವೂರು ರಾಮಯ್ಯ, ರಾಮನಗರ ಪೂರ್ಣಚಂದ್ರ, ವಿನಯ್ ಕುಮಾರ್ ಗೀತಗಾಯನ ನಡೆಸಿಕೊಟ್ಟರು. ಗಿರಿಯಪ್ಪ, ಎಸ್.ಎನ್.ಆದರ್ಶಕುಮಾರ್, ಹೇಮಂತ್ ಗೌಡ, ಸುರೇಶ್, ಎಚ್.ನಿರ್ಮಲಾ, ಚನ್ನೇಗೌಡ, ಕರಿಯಪ್ಪ, ಮರಿದೇವರು, ನಾಗರಾಜು, ಸಾತ್ವಿಕ್ ಪುಟ್ಟಸ್ವಾಮಿ, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.