ಚಿಕ್ಕೋಡಿ : ಸುಮಾರು ಮೂರು ದಶಕಗಳಿಂದಲೂ ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ವಿಭಜಿಸಬೇಕು ಎಂದು ಹೋರಾಟಗಳು ನಡೆಯುತ್ತಲೇ ಇದೆ. ಬೈಲಹೊಂಗಲ, ಚಿಕ್ಕೋಡಿ, ಗೋಕಾಕ ಜಿಲ್ಲೆ ರಚನೆಯ ಬೇಡಿಕೆಗೆ ರಾಜ್ಯ ಸರಕಾರ ಈ ಬಾರಿಯ ಬಜೆಟ್ನಲ್ಲಿ ಸ್ಪಂದನೆ ನೀಡುತ್ತದೆಯೇ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.
ಸಚಿವರಾದ ಸತೀಶ ಜಾರಕಿ ಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ ಹುಕ್ಕೇರಿ, ಲಕ್ಷ್ಮಣ್ ಸವದಿ, ಬಾಲಚಂದ್ರ ಜಾರಕಿಹೊಳಿ, ಅಣ್ಣಾ ಸಾಹೇಬ ಜೊಲ್ಲೆ ಸೇರಿದಂತೆ ಜಿಲ್ಲೆಯ ನಾಯಕರು ಜಿಲ್ಲಾ ವಿಭಜನೆಯಾದರೆ ಅಭಿವೃದ್ಧಿಗೆ ಆಸರೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿ.ಎಂ ಹಾಗೂ ಡಿ.ಸಿ.ಎಂ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಜನರ ಆಕಾಂಕ್ಷೆಗೆ ಇದೀಗ ಹೊಸ ಗರಿ ಮೂಡಿದಂತಾಗಿದೆ.

ಹೊಸ ಜಿಲ್ಲಾ ಕೇಂದ್ರ ಯಾವುದಾಗಬೇಕು ಎಂಬ ವಿಚಾರದಲ್ಲಿ ಜಿಲ್ಲಾ ನಾಯಕರೆಲ್ಲಾ ಸೇರಿ ಒಮ್ಮತಕ್ಕೆ ಬರಬೇಕಿದೆ. ಅಂದಾಗ ಮಾತ್ರ ನೂತನ ಜಿಲ್ಲೆ ರಚನೆ ಸಂಗತಿ ಸಾಕಾರವಾಗಲಿದೆ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ . ಈ ಹಿಂದೆ ಚಿಕ್ಕೋಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಸಿ.ಎಂ ಸಿದ್ದರಾಮಯ್ಯ, ‘‘ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ, ಗೋಕಾಕ ಜಿಲ್ಲೆ ಘೋಷಣೆ ಮಾಡಲು ಸಿದ್ಧ. ಜಿಲ್ಲಾ ವ್ಯಾಪ್ತಿಯ ಜನಪ್ರತಿನಿಧಿಗಳು ಒಮ್ಮತಕ್ಕೆ ಬಂದರೆ ಹೊಸ ಜಿಲ್ಲೆ ಘೋಷಣೆ ಮಾಡಲಾಗುವುದು,’’ ಎಂದಿದ್ದರು.
ರಾಯಬಾಗ, ಅಥಣಿ, ರಾಮದುರ್ಗ, ಕುಡಚಿ, ಕಾಗವಾಡ, ಗೋಕಾಕ ತಾಲೂಕುಗಳ ಜನರು ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಲು 150-200ಕ್ಕೂ ಅಧಿಕ ಕಿಮೀ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ, ಬೈಲಹೊಂಗಲ ಹಾಗೂ ಗೋಕಾಕ ಭಾಗದ ಜನ ಜಿಲ್ಲಾ ವಿಭಜನೆಗಾಗಿ ಧ್ವನಿ ಎತ್ತುತ್ತಲೇ ಇದ್ದಾರೆ.
ವಾಸುದೇವ ರಾವ್, ಹುಂಡೇಕರ್ ಮತ್ತು ಪಿ.ಸಿ ಗದ್ದಿಗೌಡರ್ ಸಮಿತಿಗಳು 1997 ರಲ್ಲೇ ಚಿಕ್ಕೋಡಿ ಹೊಸ ಜಿಲ್ಲೆಯಾಗಲು ಶಿಫಾರಸು ಮಾಡಿದ್ದವು. ಆದರೆ, ಕನ್ನಡ ಪರ ಸಂಘಟನೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಚಿಕ್ಕೋಡಿಯನ್ನು ನೂತನ ಜಿಲ್ಲೆಎಂದು ಘೋಷಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಮರಾಠಿ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಜಿಲ್ಲಾ ವಿಭಜನೆಗೆ ಅಂದು ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಜಿಲ್ಲಾ ವಿಭಜನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.