
ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಪಾಳಿ ನಿರ್ವಹಣೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ವಿಫಲರಾಗುತ್ತಿದ್ದು, ರೋಗಿಗಳು ಹಾಗೂ ವೈದ್ಯರ ನಡುವೆ ಗದ್ದಲ, ವಾಗ್ವಾದ ಸಾಮಾನ್ಯವಾಗಿವೆ. ಸಾಕಷ್ಟು ವೈದ್ಯರು ಇದ್ದರೂ ಅವರನ್ನು ಸಮರ್ಪಕವಾಗಿ ಕರ್ತವ್ಯಕ್ಕೆ ನಿಯೋಜಿಸದ ಕಾರಣ ಜಿಲ್ಲೆಯ ವಿವಿಧೆಡೆಯಿಂದ ಬರುವ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ. ಜಿಲ್ಲೆಯಾದ್ಯಂತ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅಪಾರ ಸಂಖ್ಯೆಯ ರೋಗಿಗಳು ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬರುತ್ತಾರೆ. ಅದರಲ್ಲೂ ರಾತ್ರಿ ವೇಳೆ ಹೆಚ್ಚಿನ ರೋಗಿಗಳು ಬರುತ್ತಾರೆ. ನಗರವನ್ನು ಮೂರು ರಾಷ್ಟ್ರೀಯ ಹೆದ್ದಾರಿಗಳು ಸುತ್ತುವರಿದಿದ್ದು, ಅಪಘಾತ ಸಾಮಾನ್ಯ ಎಂಬಂತಾಗಿದೆ. ಹೀಗಾಗಿ 24 ಗಂಟೆಯೂ ತುರ್ತು ಚಿಕಿತ್ಸಾ ವಾರ್ಡ್ ಸನ್ನದ್ಧವಾಗಿರಬೇಕಿದೆ.

j3tvkannada
ತುರ್ತು ಚಿಕಿತ್ಸಾ ಘಟಕ ಸೇರಿ ವಿವಿಧ ವಿಭಾಗಗಳಿಗೆ ರೋಸ್ಟರ್ ಅನುಸಾರ ವೈದ್ಯರ ಪಾಳಿ ನಿಯೋಜನೆ ಮಾಡುವಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಹಿರಿಯ ವೈದ್ಯರೇ ಆರೋಪಿಸಿದ್ದಾರೆ. ನಿರ್ವಹಣೆ ಸಮಸ್ಯೆಯಿಂದ ಪಾಳಿಗಳು ಪಾಲನೆ ಆಗದೆ ರೋಗಿಗಳು ಪರದಾಡುವಂತಾಗಿದೆ. ಚಿಕಿತ್ಸೆ ಪಡೆಯಲು ಅನಗತ್ಯ ವಿಳಂಬವಾಗುತ್ತಿದ್ದು, ರೋಗಿಗಳ ಸಂಬಂಧಿಕರು ವೈದ್ಯರ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಜಗಳ, ಜಟಾಪಟಿಗಳಿಂದ ವೈದ್ಯರು ಹಾಗೂ ಸಿಬ್ಬಂದಿ ಹೈರಾಣಾಗಿದ್ದಾರೆ.
ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಸದ್ಯ ಮೂವರು ವೈದ್ಯಾಧಿಕಾರಿಗಳಿದ್ದಾರೆ (ಸಿಎಂಒ). ಆದರೆ, ಮೂವರಲ್ಲಿ ಒಬ್ಬರು ಕೆಲಸಕ್ಕೆ ಬರುತ್ತಿಲ್ಲ. ಇನ್ನೊಬ್ಬರು ಎಲ್ಲಿರುತ್ತಾರೆ? ಯಾವಾಗ ಬರುತ್ತಾರೆ? ಎಂಬುದು ಯಾರಿಗೂ ಗೊತ್ತಿಲ್ಲ. ಮತ್ತೊಬ್ಬರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ತಿಳಿದಾಗ ಮಾತ್ರ ಬರುತ್ತಾರೆ. ಹೀಗಾಗಿ ಬೇರೆ ವಿಭಾಗಗಳ ವೈದ್ಯರನ್ನು ಈ ವಾರ್ಡ್ಗೆ ನಿಯೋಜಿಸಲಾಗುತ್ತಿದೆ. ಕೇವಲ ಒಬ್ಬ ವೈದ್ಯನಿಂದ ಇಡೀ ರಾತ್ರಿ ಪಾಳಿ ನಿರ್ವಹಣೆ ಮಾಡಲು ಸಾಧ್ಯವೇ? ನಮ್ಮ ಮೇಲೆ ಜನರು ಜಗಳಕ್ಕೆ ಬರುತ್ತಾರೆ. ಹೆಚ್ಚು ಕಮ್ಮಿ ಮಾತನಾಡಿದರೆ ಹಲ್ಲೆ ಮಾಡುತ್ತಾರೆ ಎಂದು ತಜ್ಞ ವೈದ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು.

j3tvkannada
ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಪ್ರತಿದಿನ ರಾತ್ರಿ 9ರಿಂದ ಮರುದಿನ ಬೆಳಿಗ್ಗೆ 9 ಗಂಟೆಯವರೆಗೆ ಸರಾಸರಿ 250 ಹೊರರೋಗಿಳು, 100 ಒಳರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಇವರೆಲ್ಲರನ್ನೂ ಒಬ್ಬರೇ ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಇಲ್ಲಿರುವ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರು ವಿಫಲವಾಗುತ್ತಿರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದು ವೈದ್ಯರು ಆರೋಪಿಸುತ್ತಾರೆ. ಇತರ ವಿಭಾಗಗಳ ವೈದ್ಯರು ರಾತ್ರಿ ಪಾಳಿಗಾಗಿ ತುರ್ತು ಚಿಕಿತ್ಸೆಗೆ ತೆರಳುವುದರಿಂದ ತಮ್ಮ ಮೂಲ ವಿಭಾಗದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ರಾತ್ರಿ ಪಾಳಿ ಮಾಡಿದವರು ಮರುದಿನ ರಜೆಯಲ್ಲಿರುತ್ತಾರೆ. ಹೀಗಾಗಿ ಬಹುತೇಕ ಹೊರರೋಗಿಗಳ ವಿಭಾಗದಲ್ಲಿ ವೈದ್ಯರ ಕೊರತೆಯಾಗಿ ಚಿಕಿತ್ಸೆ ದೊರೆಯದಾಗಿದೆ.
ಸೋಮವಾರ, ಮಂಗಳವಾರ ಅತೀ ಹೆಚ್ಚು ಜನರು ಹೊರರೋಗಿ ವಿಭಾಗ (ಓಪಿಡಿ)ಕ್ಕೆ ಬರುತ್ತಾರೆ. ಚಿಕಿತ್ಸೆ ಪಡೆಯಲು ವಿಳಂಬವಾಗುವ ಕಾರಣಕ್ಕೆ ಜನರು ವೈದ್ಯರು, ಸಿಬ್ಬಂದಿಯ ಜೊತೆ ಜಗಳಕ್ಕಿಳಿಯುತ್ತಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರು ಈಚೆಗೆ ಎಲುಬು ಮತ್ತು ಮೂಳೆ ವಿಭಾಗದ ವೈದ್ಯರನ್ನು ಬೇರೆ ಬೇರೆ ವಿಭಾಗಗಳಿಗೆ ನಿಯೋಜನೆ ಮಾಡಿರುವುದು ಜಟಾಪಟಿಗೆ ಕಾರಣವಾಗಿದೆ. ಇದನ್ನು ತಜ್ಞ ವೈದ್ಯರು ಪ್ರಶ್ನಿಸಿದ್ದಾರೆ. ವೈದ್ಯರೊಬ್ಬರು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿರುವುದು ಆತಂಕ ಸೃಷ್ಟಿಸಿದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಸಮಸ್ಯೆ ಇರುವ ವಿಭಾಗಗಳನ್ನು ಸರಿಪಡಿಸುತ್ತಿಲ್ಲ. ವೈಯಕ್ತಿಕ ಕಾರಣಕ್ಕಾಗಿ ಸರಿಯಿರುವ ವಿಭಾಗಕ್ಕೆ ಕೈಹಾಕಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹಿರಿಯ ವೈದ್ಯರೊಬ್ಬರು ದೂರಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ಗಂಭೀರ ಸಮಸ್ಯೆಯ ರೋಗಿಗಳು ಬಂದಾಗ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಅಥವಾ ಬೇರೆ ಆಸ್ಪತ್ರೆಗಳಿಗೆ ತೆರಳುವಂತೆ ಸಲಹೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ತಂಗಿಯನ್ನು ಹೆರಿಗೆಗೆಂದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ರಕ್ತಸ್ರಾವ ಜಾಸ್ತಿಯಿದೆ ಎಂಬ ಕಾರಣ ನೀಡಿ ಬೇರೆ ಆಸ್ಪತ್ರೆಗೆ ತೆರಳುವಂತೆ ತಿಳಿಸಿದರು. ಪರಿಚಯಸ್ಥ ವೈದ್ಯರೊಬ್ಬರ ಸಲಹೆ ಮೇರೆಗೆ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಾಗ ಆರೋಗ್ಯಕರವಾಗಿ ಹೆರಿಗೆಯಾಯಿತು. ಜಿಲ್ಲಾ ಆಸ್ಪತ್ರೆ ತಾಲ್ಲೂಕು ಆಸ್ಪತ್ರೆಗಿಂತಲೂ ಕೀಳಾಗಿದೆ ಎಂದು ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.