
ರಾಮನಗರ: ಕನಕಪುರ ತಾಲ್ಲೂಕಿನ ಸಂಗಮದ ತಿರುವಿನಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಬೆಂಗಳೂರು ನಿವಾಸಿಗಳಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

j3tvkannada
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಬೆಟ್ಟದ ಹಲಸೂರು ಗ್ರಾಮದ ಚರ್ಚ್ನಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ ಉತ್ಸವದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಭಕ್ತರು ಸಂಗಮಕ್ಕೆ ಪ್ರವಾಸ ಹೋಗುವಾಗ ಈ ಘಟನೆ ನಡೆದಿದೆ. ಪಲ್ಟಿ ಹೊಡೆದ ಬಸ್ನಲ್ಲಿದ್ದ 50 ಪ್ರಯಾಣಿಕರ ಪೈಕಿ 40 ಮಂದಿಗೆ ಗಾಯಗಳಾಗಿವೆ. ಎಲ್ಲರೂ ಬೆಂಗಳೂರಿನವರಾಗಿದ್ದಾರೆ. ಬೆಟ್ಟದ ಹಲಸೂರಿನ ಚರ್ಚ್ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಸುತ್ತಮುತ್ತಲಿನ ಕ್ರೈಸ್ತ ಸಮುದಾಯದವರು ಪಾಲ್ಗೊಳ್ಳುತ್ತಾರೆ. ಉತ್ಸವ ಮುಗಿಸಿ ಸಂಗಮಕ್ಕೆ ಹೋಗುವುದು ವಾಡಿಕೆ. ಅದರಂತೆ ಜಾತ್ರೆ ಮುಗಿಸಿ ಸಂಗಮಕ್ಕೆ ಹೋಗುವಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಬಸ್ ಬುಡ ಮೇಲಾಗಿ ಬಿದ್ದಿದೆ. ಈ ಬಸ್ ಹಿಂದೆ ಹೋಗುತ್ತಿದ್ದ ಮತ್ತೊಂದು ಬಸ್ ಕೂಡ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಆ ಬಸ್ನಲ್ಲಿದ್ದವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಸ್ಥಳೀಯರು ಅಪಘಾತದ ಮಾಹಿತಿಯನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಗಮನಕ್ಕೆ ತಂದಿದ್ದಾರೆ. ಅವರು ಡಿಎಚ್ಒ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕನಕಪುರದಿಂದ ತೆರಳಿದ ಎಂಟು ಅಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಡಾಲಹಳ್ಳಿ ಮತ್ತು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗಿದೆ. ತೀವ್ರ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಯಾನಂದ ಸಾಗರ್, ಬೆಂಗಳೂರಿನ ನಿಮಾನ್ಸ್ ಹಾಗೂ ಮತ್ತಿತರ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಂಗಮದ ಕಡಿದಾದ ತಿರುವಿನಲ್ಲಿ ಈ ಅಪಘಾತ ಮೊದಲಲ್ಲ. ಈ ಹಿಂದೆಯೂ ಇದೇ ಜಾಗದಲ್ಲಿ ಅನೇಕ ಅಪಘಾತ ಸಂಭವಿಸಿವೆ. ಕಡಿದಾದ ತಿರುವುಗಳಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

j3tvkannada