
ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ 4ರ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಟ್ಯಾಂಕರ್ ಹರಿದು ಮೂವರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆದ್ದಾರಿ ಗಸ್ತು ಸಿಬ್ಬಂದಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಮಗ ಮಹೇಶ್ ರಾಮಚಂದ್ರ ಜಾಧವ್ (18), ರಾಮಣ್ಣ ಅಲಿಯಾಸ್ ರಮೇಶ್ (38) ಮೃತ ದುರ್ದೈವಿಗಳು.

j3tvkannada
ಮೃತ ರಾಮಚಂದ್ರ ಪತ್ನಿ ಲಕ್ಷ್ಮೀಬಾಯಿ, ಅನುಶ್ರೀ, ಮೃತ ರಾಮಣ್ಣನ ಪತ್ನಿ ಭೀಮವ್ವ (55) ಎಂಬವರಿಗೆ ಗಂಭೀರ ಗಾಯವಾಗಿದೆ. ಗಾಯಾಳು ಭೀಮವ್ವ ಅವರ ಎರಡೂ ಕಾಲುಗಳು ಕಟ್ ಆಗಿದ್ದು, ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಮಿಕರು ಎನ್.ಹೆಚ್.ಎ.ಐನಲ್ಲಿ ದಿನಗೂಲಿ ಕೆಲಸಕ್ಕಾಗಿ ಕಲಬುರಗಿಯ ಶಹಬಾದ್, ಸೇಡಂ, ಚಿಂಚೋಳಿಯಿಂದ ಬಂದಿದ್ದರು. ರವಿವಾರ (ಜೂ.01) ಬೆಳಿಗ್ಗೆ ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರ ಮೇಲೆ ಆಯಿಲ್ ತುಂಬಿದ್ದ ಟ್ಯಾಂಕರ್ ಏಕಾಏಕಿ ಹರಿದು, ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ನಲ್ಲಿ ಸಿಲುಕಿದ್ದ ಚಾಲಕನನ್ನು ಪೊಲೀಸರು ಹೊರ ತೆಗೆದಿದ್ದಾರೆ. ಟ್ಯಾಂಕರ್ ಚಾಲಕ ದಿನೇಶ್ ಶೆಟ್ಟಿ ಅವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ ಆರ್.ಬಿ ಬಸರಗಿ ಕೂಡ ಭೇಟಿ ನೀಡಿ ಮಾಹಿತಿ ಪಡೆದರು. ಆಯಿಲ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಟ್ಯಾಂಕರ್ ಮೇಲೆತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕಾರ್ಮಿಕರು ರಸ್ತೆ ಸ್ವಚ್ಛ ಮಾಡುತ್ತಿದ್ದರು ಎನ್ನಲಾಗಿದೆ.