
ವಿಜಯನಗರ : ಗಣಿಬಾಧಿತ ಡಾಲ್ಟಿಯಾ ಕ್ಯಾಂಪ್ ಇರುವುದು ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಈಗಲೋ, ಆಗಲೋ ಕುಸಿದು ಬೀಳುವ ಸ್ಥಿತಿಯಲ್ಲಿರುವ ಇಲ್ಲಿನ ಮನೆಗಳಲ್ಲಿ ವಾಸ ಮಾಡುತ್ತಿರುವ ಜನರಿಗಿರುವ ನೇರ ಸಂಪರ್ಕ ಎಂದರೆ ರೈಲಿನಡಿ ತೂರಿ ಸಾಗುವ ಅಪಾಯಕಾರಿ ದಾರಿ.

j3tvkannada
ಪಿ.ಕೆ.ಹಳ್ಳಿ ರೈಲು ನಿಲ್ದಾಣದಾಚೆ ಒಂದು ಕಿ.ಮೀ ದೂರದಲ್ಲಿ ಸೇತುವೆ ಇದೆ, ಆದರೆ ಅದನ್ನು ಬಳಸಿ ಕ್ಯಾಂಪಿಗೆ ಬರಲು ಸುಮಾರು ಎರಡು ಕಿ.ಮೀ ನಷ್ಟು ದೂರವಾಗುತ್ತದೆ. ಆಟೋಗಳು ₹150ರಿಂದ ₹200 ತೆಗೆದುಕೊಳ್ಳುತ್ತವೆ. ಅಷ್ಟು ಖರ್ಚು ಮಾಡುವ ಶಕ್ತಿ ಜನರಲ್ಲಿಲ್ಲ. ಪಿ.ಕೆ.ಹಳ್ಳಿ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲುಗಳು ವಾರಗಟ್ಟಲೆ, ತಿಂಗಳುಗಟ್ಟಲೆ ನಿಂತುಕೊಂಡೇ ಇರುತ್ತವೆ. ಹೀಗಾಗಿ ಕ್ಯಾಂಪಿನ ಬಹುತೇಕ ಮಂದಿ ಸಾಗುವುದು ರೈಲಿನಡಿಯಲ್ಲೇ. ಹೀಗೆ ಸಾಗುವಾಗ ಗೂಡ್ಸ್ ರೈಲು ಚಲಿಸಿ ಗಾಯವಾದ ಹಲವು ನಿದರ್ಶನಗಳು ಇಲ್ಲಿವೆ. ಆದರೆ ಜನ ಬೇರೆ ದಾರಿ ಇಲ್ಲದೆ ರೈಲಿನಡಿ ತೂರುವುದನ್ನು ಮುಂದುವರಿಸಿದ್ದಾರೆ. ಪಿ.ಕೆ.ಹಳ್ಳಿ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಕ್ಯಾಂಪಿನ ನಿವಾಸಿಗಳಿಗಾಗಿ ಸಜ್ಜಾಗಿರುವ ನಿವೇಶನದಲ್ಲಿ ಮನೆ ನಿರ್ಮಿಸಿಕೊಡುವುದು ಯಾವಾಗ ಎಂಬ ಪ್ರಶ್ನೆಯನ್ನು ಮೌನವಾಗಿ ಕೇಳುತ್ತಲೇ ನಿವಾಸಿಗಳು ಇಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇದು ಡಾಲ್ಕಿಯಾ ಕಂಪನಿಗೆ ಸೇರಿದ ಜಾಗ. ಇಲ್ಲಿನ ಶೆಡ್ಗಳಲ್ಲಿ 97 ಕುಟುಂಬಗಳು ನಾಲೈದು ತಲೆಮಾರುಗಳಿಂದ ವಾಸವಾಗಿದ್ದವು. ಒಂದೊಂದೇ ಶೆಡ್ ಕುಸಿಯುತ್ತ ಇದೀಗ 80ರಷ್ಟು ಶೆಡ್ಗಳಷ್ಟೇ ಉಳಿದಿದ್ದು, ಅವುಗಳೂ ಶಿಥಿಲಗೊಂಡಿವೆ. ಒಂದೇ ಶೆಡ್ ಒಳಗೆ ಎರಡು, ಮೂರು ಕುಟುಂಬಗಳು ನೆಲೆಸಿರುವ ಪ್ರಸಂಗವೂ ಇಲ್ಲಿದೆ. ಶೌಚಾಲಯ ಇಲ್ಲ, ಅಂಗನವಾಡಿ ಇಲ್ಲ, ಚರಂಡಿ ಇಲ್ಲ, ಶುದ್ಧ ಕುಡಿಯುವ ನೀರಿನ ಮೂರು ನಳಗಳಷ್ಟೇ ಇಡೀ ಪ್ರದೇಶಕ್ಕೆ ಆಸರೆ. ಪಡಿತರ ತಂದು ಕೊಡುವ ವ್ಯವಸ್ಥೆ ಬಿಟ್ಟರೆ ಬೇರೆ ಏನೂ ಇಲ್ಲಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಗೆ ಒಂದಿಷ್ಟು ಕಾಯಕಲ್ಪ ಸಿಕ್ಕಿದ್ದು ಬಿಟ್ಟರೆ ಮನೆಗಳೆಲ್ಲವೂ ಕುಸಿಯುವ ಹಂತದಲ್ಲಿವೆ. ಈ ಮಳೆಗಾಲ ಕಳೆದರೆ ಸಾಕಪ್ಪಾ ಎಂದು ನಿವಾಸಿಗಳು ಹೇಳುತ್ತಿದ್ದಾರೆ.
ಇದು ಇಂದು ನಿನ್ನೆಯ ದೃಶ್ಯವಲ್ಲ, ನನಗೀಗ 68 ವರ್ಷ. ಇಲ್ಲಿಂದ 14 ಕಿ.ಮೀ.ದೂರದಲ್ಲಿರುವ ಗಣಿ ಗುಡ್ಡದಲ್ಲೇ ಗುಡಿಸಲು ಹಾಕಿಕೊಂಡು ತಿಂಗಳುಗಳ ಕಾಲ ಅಲ್ಲೇ ಇದ್ದು ಕೆಲಸ ಮಾಡುತ್ತಿದ್ದೆ. ಈಗ ವಯಸ್ಸಾಯ್ತು, ನಾಡಿಗೆ ಬಂದಿದ್ದೇನೆ, ಆದರೆ ಕಾಡಿನ ಜೀವನವೇ ಇದಕ್ಕಿಂತ ಉತ್ತಮ ಎನಿಸುತ್ತಿದೆ. ಎಂಬ ಡಾಲ್ಮೀಯಾ ಕ್ಯಾಂಪ್ ನಿವಾಸಿ ಆನಂದ ಅವರ ಮಾತಲ್ಲಿ ಇಡೀ ವ್ಯವಸ್ಥೆಯ ಕುರಿತಂತೆ ಬೇಸರ ಇದೆ.