
ರಾಮನಗರ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಲ್ಲಿನ ವಿಜಯನಗರ ಬಡಾವಣೆಯ ಅಜಯ್ ಕುಮಾರ್ ಅವರು 895ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಡತನದ ಬೇಗೆಯಲ್ಲೇ ಸತತ 8 ಸಲ ಪರೀಕ್ಷೆ ಎದುರಿಸಿದ್ದ ಅಜಯ್, 8ನೇ ಪ್ರಯತ್ನದಲ್ಲಿ ಗುರಿ ತಲುಪಿದ್ದಾರೆ.

j3tvkannada
ಅಜಯ್ ಅವರ ತಂದೆ ಆದಿಶೇಷ ಬಿ. ಅವರು ಆದಿಚುಂಚನಗಿರಿಯ ಕಾಲಭೈರವೇಶ್ವರ ವೇದ ಆಗಮ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅಧೀಕ್ಷಕರಾಗಿ 9 ವರ್ಷಗಳ ಹಿಂದೆಯೇ ನಿವೃತ್ತರಾಗಿದ್ದಾರೆ. 2021ರಲ್ಲಿ ಪಾರ್ಶ್ವವಾಯುಗೆ ಒಳಗಾಗಿರುವ ಅವರು, ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ತಾಯಿ ನಾಗರತ್ನ ಗೃಹಿಣಿ. ಅರುಣಾಕ್ಷಿ ಎ. ಮತ್ತು ಸತ್ಯವತಿ ಎ. ಸಹೋದರಿಯರು. ಶಾಲಾ ದಿನಗಳಿಂದಲೇ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತ ಅಜಯ್ ಅವರು, ಬಿ.ಜಿ.ಎಸ್.ಐ.ಟಿ.ಯಲ್ಲಿ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್) ಮುಗಿಸಿದ ಬಳಿಕ, ಸಂಸ್ಕೃತ ಮತ್ತು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದು ತಮ್ಮ ಗುರಿಯ ಬೆನ್ನತ್ತಿದರು. ಶಿಕ್ಷಣ ಮುಗಿಸಿ ಯುಪಿಎಸ್ಸಿ ಪರೀಕ್ಷೆ ತಯಾರಿ ಆರಂಭಿಸುವ ಹೊತ್ತಿಗೆ ತಂದೆ ನಿವೃತ್ತರಾಗಿದ್ದರು. ಮನೆಯ ಹಿರಿಯ ಮಗನಾದ ನಾನು ಯಾವುದಾದರೂ ಕೆಲಸಕ್ಕೆ ಸೇರಿ ಕುಟುಂಬದ ನೊಗ ಹೊರಬೇಕಿತ್ತು. ಆದರೆ, ನನ್ನ ಕನಸನ್ನು ಸಹ ಬಿಡುವ ಮನಸ್ಸಿರಲಿಲ್ಲ. ಇದನ್ನು ಅರಿತ ತಂದೆ-ತಾಯಿ ಪರೀಕ್ಷೆಗೆ ತಯಾರಿ ನಡೆಸಲು ಪ್ರೋತ್ಸಾಹಿಸಿ ತರಬೇತಿಗೆ ಕಳಿಸಿ ಕೊಟ್ಟರು ಎಂದು ಅಜಯ್ ಕುಮಾರ್ ಪ್ರತಿಕ್ರಿಯಿಸಿದರು.
ನಾನು ಪರೀಕ್ಷೆಯತ್ತ ದೃಷ್ಟಿ ನೆಟ್ಟಿದ್ದರಿಂದ ತಂದೆಯ ಪಿಂಚಣಿಯಲ್ಲೇ ಕುಟುಂಬ ನಡೆಯತೊಡಗಿತು. ಇದರಿಂದಾಗಿ, ತಂಗಿ ಅರುಣಾಕ್ಷಿ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡು ಕುಟುಂಬಕ್ಕೆ ಆಸರೆಯಾದಳು. ಮತ್ತೊಬ್ಬ ತಂಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಳೆ ಎಂದು ಹೇಳಿದರು. ಅಜಯ್ ಅವರು ಸತತ 8 ವರ್ಷ ಪರೀಕ್ಷೆ ಸಿದ್ಧತೆಯನ್ನು ತಪಸ್ಸಿನಂತೆ ನಡೆಸಿದ್ದಾರೆ. 6 ಸಲ ಪ್ರಿಲಿಮಿನರಿ ಪರೀಕ್ಷೆ ಪಾಸಾಗಿದ್ದರು. 2023ರಲ್ಲಿ ಮುಖ್ಯ ಪರೀಕ್ಷೆ ಪಾಸಾಗಿದ್ದರೂ ಸಂದರ್ಶನಕ್ಕೆ ಕರೆ ಬಂದಿರಲಿಲ್ಲ. 2024ರಲ್ಲಿ ಮುಖ್ಯ ಪರೀಕ್ಷೆ ಪಾಸಾಗಿ, ಸಂದರ್ಶನಕ್ಕೂ ಆಹ್ವಾನ ಬಂತು. ಮಾರ್ಚ್ನಲ್ಲಿ ಸಂದರ್ಶನ ಎದುರಿಸಿ ಬಂದಿದ್ದರು. ನನ್ನ ಚಿಕ್ಕಪ್ಪ ಶಿವಶಂಕರ್ ಅವರು ಶಾಲಾ ದಿನಗಳಲ್ಲೇ ನನ್ನಲ್ಲಿ ಐಎಎಸ್ ಕನಸು ಬಿತ್ತಿದರು. ಜಿಲ್ಲೆಯ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರನ್ನು ಯಾವಾಗಲೂ ಉದಾಹರಣೆ ನೀಡುತ್ತಿದ್ದರು. ಹಾಗಾಗಿ, ಶಿವರಾಮ್ ಸರ್ ಅವರು ನನಗೆ ರೋಲ್ ಮಾಡೆಲ್ ಆಗಿದ್ದರು. ಎಂಟು ವರ್ಷದ ಅವಧಿಯಲ್ಲಿ 2013ರಲ್ಲಿ ಜೆ.ಟಿ.ಒ ಮತ್ತು 2014ರಲ್ಲಿ ಕೆ.ಎ.ಎಸ್ ಪಾಸು ಮಾಡಿದ್ದೆ ಎಂದು ಅಜಯ್ ತಿಳಿಸಿದರು.
ನೆರವಾದ ಸಮಾಜ ಕಲ್ಯಾಣ ಇಲಾಖೆ ತರಬೇತಿ:-
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಸಮುದಾಯದವರಿಗೆ ಯುಪಿಎಸ್ಸಿ ಪರೀಕ್ಷೆಗೆ ದೆಹಲಿಯ ಪ್ರತಿಷ್ಠಿತ ಕೋಚಿಂಗ್ ಸೆಂಟರ್ಗಳಲ್ಲಿ ನೀಡುವ ಪರೀಕ್ಷಾ ಪೂರ್ವ ತರಬೇತಿಗೆ 2015-16ನೇ ವರ್ಷದಲ್ಲಿ ಆಯ್ಕೆಯಾದೆ. ದೆಹಲಿಯ ವಾಜಿರಾಂ ದೆಹಲಿಯ ವಾಜಿರಾಂ ಆ್ಯಂಡ್ ರವಿ ದಿನ್ಮನಿ ಪವನ್ ಕುಮಾರ್ ಐಎಎಸ್ ಹಾಗೂ ಕರ್ನಾಟಕದ ಡಾ. ಶಿವಕುಮಾರ್ ಸಾರಥ್ಯದ ಅಕ್ಕಾ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಒಂದೂವರೆ ವರ್ಷ ತರಬೇತಿ ಪಡೆದೆ. ಬಳಿಕ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರ ನೇತೃತ್ವದ ಆರ್.ಎ.ಜಿ ಎಂ ತಂಡದಲ್ಲಿರುವ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ಮತ್ತು ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ಅವರು ಸಂದರ್ಶನ ಎದುರಿಸುವ ಬಗೆಯ ಹೇಳಿ ಕೊಟ್ಟರು. ವಿಧಾನಸೌಧದ ಅಭಿಲೇಖಾಲಯದ ಅಧಿಕಾರಿ ರಾಜಪ್ಪ ಅವರು ಸಹ ಹೇಗೆ ಓದಬೇಕೆಂಬುದರ ಕುರಿತು ಯಾವಾಗಲೂ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಅಜಯ್ ಹೇಳಿದರು. ಸಂದರ್ಶನಕ್ಕೆ ಹೋಗಲು ಸಾಲ ಮಾಡಿ ಹಣ ಕೊಟ್ಟೆವು ಪುತ್ರನನ್ನು ತುಂಬಾ ಇಷ್ಟಪಡುತ್ತಿದ್ದ ಚಿಕ್ಕಪ್ಪ ಶಿವಶಂಕರ್ ಅವರೇ ಆತನನ್ನು ಚಿಕ್ಕಂದಿನಲ್ಲಿ ಕಾನ್ವೆಂಟ್ಗೆ ಸೇರಿಸಿದರು. ನೀನು ಐಎಎಸ್ ಆಫೀಸರ್ ಆಗಬೇಕು ಎಂದು ಹೇಳುತ್ತಿದ್ದರು. ಮಗನ ಹೆಸರಿನ ಮುಂದೆ ಅಜಯ ಕುಮಾರ್ ಐ.ಎ.ಎಸ್. ಎಂದು ಬರೆದು ಸ್ಪೂರ್ತಿ ತುಂಬುತ್ತಿದ್ದರು. ಅಂಬೇಡ್ಕರ್ ಅವರ ಜೀವನಗಾಥೆಯನ್ನು ಹೇಳಿ ಹುರಿದುಂಬಿಸುತ್ತಿದ್ದರು. ಸಂದರ್ಶನಕ್ಕೆ ಹೋಗುವಾಗ ಹಣವಿರಲಿಲ್ಲ. ಸಾಲ ಮಾಡಿ ಕಳಿಸಿದ್ದೆವು. ಮಗನ ಕನಸು ಯಾವಾಗ ನನಸಾಗುತ್ತದೆ ಎಂದು ಕಾಯುತ್ತಿದ್ದೆವು. ಇಡೀ ಕುಟುಂಬ ಆತನ ಯಶಸ್ಸಿಗಾಗಿ ಕಾಯುತ್ತಿತ್ತು. ಕಡೆಗೂ ಆತನ ಪರಿಶ್ರಮಕ್ಕೆ ಫಲ ಸಿಕ್ಕಿತು ಎಂದು ತಾಯಿ ನಾಗರತ್ನ ಹಾಗೂ ತಂದೆ ಆದಿಶೇಷ ಸಂತಸ ವ್ಯಕ್ತಪಡಿಸಿದರು.