
ಬೀದರ್: ಜನಿವಾರದ ಕಾರಣಕ್ಕಾಗಿ ವಿದ್ಯಾರ್ಥಿ ಸುಚಿವ್ರತ್ ಅವರಿಗೆ ಕೆ-ಸಿಇಟಿ ಪರೀಕ್ಷಾ ಕೇಂದ್ರದೊಳಗೆ ತೆರಳಲು ಅವಕಾಶ ನೀಡಲಿಲ್ಲ ಎನ್ನುವುದು ಈಗಾಗಲೇ ತನಿಖೆಯಿಂದ ದೃಢಪಟ್ಟಿದೆ. ಆದರೆ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದು, ಅವರನ್ನು ಜಿಲ್ಲಾಡಳಿತ ವಿಚಾರಣೆಗೆ ಒಳಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಆಗ್ರಹಿಸಿದ್ದಾರೆ.

j3tvkannada
ಸುಚಿವ್ರತ್ ಅವರು ಜನಿವಾರದ ಜೊತೆಗೆ ಗೋಲಾಕಾರದ ಲೋಹದ ವಸ್ತು ಧರಿಸಿದ್ದರು. ಅದನ್ನು ತೆಗೆಯಲು ಹೇಳಿದ್ದಕ್ಕೆ ಪರೀಕ್ಷೆ ಬರೆಯದೇ ವಾಪಸ್ ಹೋಗಿದ್ದಾರೆ ಎಂದು ಅರಳಿ ಹೇಳಿದ್ದಾರೆ. ಹಾಗಿದ್ದರೆ ಇವರಿಗೂ ಪರೀಕ್ಷಾ ಕೇಂದ್ರದವರಿಗೂ ಏನಾದರೂ ಲಿಂಕ್ ಇದೆಯಾ? ಈ ಸಂಬಂಧ ಜಿಲ್ಲಾಡಳಿತ ಅರಳಿ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಗೊತ್ತಾಗುತ್ತದೆ ಎಂದು ಭಾನುವಾರ ಹೊರಡಿಸಿರುವ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಿವಾರ ವಿವಾದಕ್ಕೆ ಬಿಜೆಪಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಷಡ್ಯಂತ್ರ ಕಾರಣ ಎಂದೂ ಅರಳಿ ಆರೋಪಿಸಿದ್ದಾರೆ. ಇದು ಅವರ ಹೀನ ಮನಃಸ್ಥಿತಿಗೆ ಸಾಕ್ಷಿ. ಈ ರೀತಿಯ ಅರ್ಥಹೀನ, ಅಸಂಬದ್ಧ, ತಲೆಬುಡವಿಲ್ಲದ ಹಾಗೂ ಅಸತ್ಯ ಹೇಳಿಕೆ ಖಂಡನಾರ್ಹ ಎಂದು ಟೀಕಿಸಿದ್ದಾರೆ. ಯಾವ ವಿಷಯದ ಬಗ್ಗೆ ಏನು ಹೇಳಬೇಕು? ಎಂಥ ವಿಷಯದಲ್ಲಿ ರಾಜಕೀಯ ಮಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದ ಹೇಳಿಕೆ ಅವರದ್ದಾಗಿದೆ.
ಜನಿವಾರ ತೆಗೆಯದಿದ್ದಕ್ಕೆ ವಿದ್ಯಾರ್ಥಿಗೆ ಸಿಇಟಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದಿರುವುದಕ್ಕೂ ಬಿಜೆಪಿಗೂ ಏನು ಸಂಬಂಧವಿದೆ. ಇದೊಂದು ಧರ್ಮ ವಿರೋಧಿ ಕೆಲಸ. ಒಬ್ಬ ವಿದ್ಯಾರ್ಥಿಯ ಶಿಕ್ಷಣದ ಹಕ್ಕು ಕಸಿದಿದ್ದು, ಸಂವಿಧಾನದ ಆಶಯಕ್ಕೆ ಚ್ಯುತಿ ಉಂಟಾಗಿದೆ. ಇಂತಹ ಘಟನೆಗಳು ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಸಾಕಷ್ಟು ನಡೆದಿವೆ ಎಂದು ಆರೋಪಿಸಿದ್ದಾರೆ.
ಅರಳಿ ಅವರು ಆಗಾಗ್ಗೆ ಅರ್ಥಹೀನ ಹೇಳಿಕೆ ನೀಡಿ ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಮಾಡುತ್ತಾರೆ. ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದರೂ ಜವಾಬ್ದಾರಿಯುತ ಹೇಳಿಕೆ ಕೊಡುವುದು ಕಲಿತಿಲ್ಲ. ಕಾಂಗ್ರೆಸ್ ವರಿಷ್ಠರು ಇವರಿಗೆ ಮತ್ತೊಂದು ಅವಕಾಶ ನೀಡದೆ ಮನೆಯಲ್ಲಿ ಕೂರಿಸಿದ್ದಾರೆ. ತನ್ನ ಪಕ್ಷದಲ್ಲಿ ಅಕ್ಷರಶಃ ಮೂಲೆಗುಂಪಾಗಿರುವ ಅರಳಿ, ಇದೀಗ ಅಗ್ಗದ ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಸಚಿವರ ಹೇಳಿಕೆಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ.