
ಮಂಗಳೂರು: ಎಲ್ಲ ಕಡೆಗಳಲ್ಲೂ ಹಸಿರಿನ ಆವರಣ, ಅದರ ನಡುವೆ ಅಗಲವಾದ ರಸ್ತೆ. ರಸ್ತೆಯ ಬದಿಯಲ್ಲಿ ವಿಶಾಲ 17 ಎಕರೆ 49 ಸೆಂಟ್ಸ್ ವಿಸ್ತೀರ್ಣದ ಬಡಾವಣೆ, ನಿವೇಶನಗಳು. ಮಧ್ಯದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಸುಂದರ ಪ್ರದೇಶ. ಇವೆಲ್ಲ ಇರುವುದು ಕುಂಜತ್ತಬೈಲ್ನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ. ಅಭಿವೃದ್ಧಿಪಡಿಸಿ ಎರಡು ವರ್ಷ ಕಳೆದರೂ ಈ ಬಡಾವಣೆಯ ನಿವೇಶನಗಳಿಗೆ ಬೇಡಿಕೆ ಬರಲಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳೂ ಕುಂಠಿತಗೊಂಡಿದೆ. ಈ ಬಡಾವಣೆ ಮಾತ್ರವಲ್ಲ, ಇಲ್ಲಿಂದ ಬರಬೇಕಾದ ಆದಾಯಕ್ಕಾಗಿ ಕಾಯುತ್ತಿರುವ ಮುಡಾಗೆ ಚೇಳಾಯ್ತು ಮತ್ತು ಕೊಣಾಜೆ ಬಡಾವಣೆಯ ಅಭಿವೃದ್ಧಿಯನ್ನೂ ನಿರೀಕ್ಷಿತ ಮಟ್ಟದಲ್ಲಿ ಮುಗಿಸಲು ಸಾಧ್ಯವಾಗಲಿಲ್ಲ.

j3tvkannada
ಕುಂಜತ್ತಬೈಲ್ ಬಡಾವಣೆಯಲ್ಲಿ ಒಟ್ಟು 209 ನಿವೇಶನಗಳು ಇದ್ದು ವಿವಿಧ ಅಳತೆಯ 173 ನಿವೇಶನಗಳು ಹಂಚಿಕೆಗೆ ಸಿದ್ಧವಾಗಿವೆ. ಇವುಗಳ ಪೈಕಿ ಈ ವರೆಗೆ 18ರ ಖರೀದಿಗೆ ಮಾತ್ರ ಜನರು ಮುಂದೆ ಬಂದಿದ್ದಾರೆ. ಇವುಗಳ ಹಕ್ಕುಪತ್ರ ಶೀಘ್ರದಲ್ಲೇ ವಿತರಣೆ ಆಗಲಿದೆ ಎಂದು ಎಂಜಿನಿಯರ್ ಅಕ್ಟರ್ ಬಾಷಾ ತಿಳಿಸಿದರು. 2023ರಲ್ಲಿ ಈ ಬಡಾವಣೆ ಪೂರ್ಣಗೊಂಡಿತ್ತು. ಆರಂಭದಲ್ಲಿ ಹಂಚಿಕೆಗೆ ಸಿದ್ದವಿರುವ ನಿವೇಶನಗಳಲ್ಲಿ ಪ್ರತಿ ಸೆಂಟ್ಸ್ಗೆ ₹ 8.5 ಲಕ್ಷ ನಿಗದಿ ಮಾಡಲಾಗಿತ್ತು. ಈ ದರದಲ್ಲಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಒಂದು ವರ್ಷದ ನಂತರ ದರ ಇಳಿಸಲು ನಿರ್ಧರಿಸಲಾಯಿತು. ಈಗ ಸೆಂಟ್ಗೆ ₹ 6.5 ಲಕ್ಷ ನಿಗದಿ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಮೀಸಲಿಟ್ಟಿರುವ 20×30 ಅಳತೆಯ ನಿವೇಶನಗಳು ಸೆಂಟ್ಸ್ ಗೆ ₹ 3 ಲಕ್ಷದಂತೆ ವಿತರಣೆಗೆ ಸಿದ್ಧವಿದೆ. 30×40, 30×50, 40×60 2 50×80 ಅಳತೆಯ ನಿವೇಶನಗಳು ಈ ಬಡಾವಣೆಯಲ್ಲಿ ಇವೆ.

j3tvkannada
ವಿಪರೀತ ಬೆಲೆ, ನಿಧಾನಗತಿಯ ಪ್ರಗತಿ ಮತ್ತು ಖಾಸಗಿ ಬಡಾವಣೆಗಳ ಆಕರ್ಷಣೆ ಮುಡಾ ಬಡಾವಣೆಗಳ ಬಗ್ಗೆ ನಿರಾಸಕ್ತಿಗೆ ಕಾರಣ ಎಂದು ಜನರು ಹೇಳಿದರೆ, ನಗರದ ಒಳಗೆಯೇ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗದೇ ಇರುವುದರಿಂದ ನಿವೇಶನಗಳಿಗೆ ಬೇಡಿಕೆ ಕಡಿಮೆ ಎಂಬುದು ಅಧಿಕಾರಿಗಳ ಸಮಜಾಯಿಷಿ. ಕುಂಜತ್ತಬೈಲ್ ಬಡಾವಣೆ ಕುಂಜತ್ತಬೈಲ್ ವೃತ್ತ ಮತ್ತು ಬಸ್ ನಿಲ್ದಾಣದಿಂದ ಹೆಚ್ಚೇನೂ ದೂರವಿಲ್ಲ.
ಉತ್ತಮ ರಸ್ತೆ ಸಂಪರ್ಕ, ಹಸಿರಿನಿಂದ ಕೂಡಿದ ವಾತಾವರಣ ಇದೆ. ಆದರೂ ನಿವೇಶನ ಖರೀದಿಗೆ ಆಸಕ್ತಿ ತೋರದೇ ಇರುವುದು ಸಳೀಯರಲಿ ಅಚರಿ ಮೂಡಿಸಿದೆ. ಒಳ್ಳೆಯ ವಾತಾವರಣ. ನಗರದಿಂದ ತೀರಾ ದೂರವಿಲ್ಲ. ಇದು ಉತ್ತಮ ನೀರು ಇರುವ ಜಾಗ. ಮುಡಾ ಬಡಾವಣೆ ಆಗುತ್ತಿದ್ದಾಗ ಎಲ್ಲರೂ ಖುಷಿಗೊಂಡಿದ್ದೆವು. ಆದರೆ ಈಗ ಎರಡು ವರ್ಷಗಳಾಗಿಯೂ ಯಾರೂ ಇತ್ತ ಸುಳಿಯದೇ ಇರುವುದನ್ನು ನೋಡುವಾಗ ಬೇಸರವಾಗುತ್ತಿದೆ. ಇದಕ್ಕೆ ಮುಡಾವೇ ಪರಿಹಾರ ಕಂಡುಕೊಳ್ಳಬೇಕು ಎಂದು ಆಟೊ ಚಾಲಕರೊಬ್ಬರು ಹೇಳಿದರು.
ಬಡಾವಣೆಗೆ ಪ್ರವೇಶ ಮಾಡುವ ಭಾಗದಲ್ಲಿ ದೊಡ್ಡ ಪ್ರವೇಶದ್ವಾರ ನಿರ್ಮಿಸಲಾಗಿದೆ. ಆದರೆ ಗೇಟ್ ಅಳವಡಿಸಿಲ್ಲ. ಮಾತ್ರವಲ್ಲದೆ ಸುತ್ತ ಗೋಡೆ ನಿರ್ಮಾಣವೂ ಆಗಲಿಲ್ಲ. ಹೀಗಾಗಿ ಯಾರು ಯಾವ ಸಮಯದಲ್ಲಿ ಬೇಕಾದರೂ ಒಳಗೆ ನುಗ್ಗಬಹುದು. ಕೆರೆಯ ಒಂದು ಸ್ವಲ್ಪ ದೂರ ಮರಗಳಿಂದ ಆವೃತವಾಗಿರುವ ಕುರುಚಲು ಕಾಡಿನಂಥ ಜಾಗ ಇದೆ. ಅಲ್ಲಿ ಪುಂಡರ ಕಾಟ ಇದೆ ಎಂದು ಸ್ಥಳೀಯರು ದೂರುತ್ತಾರೆ. ಕೆಲವೊಮ್ಮೆ ವಾಹನದಲ್ಲಿ ಬರುವವರು ಅಲ್ಲಿ ತಾಸುಗಟ್ಟಲೆ ಕುಳಿತುಕೊಳ್ಳುತ್ತಾರೆ. ಅವರ ಚಟುವಟಿಕೆ ಏನು ಎಂಬುದು ಅರ್ಥವಾಗುತ್ತಿಲ್ಲ. ಆಗಾಗ ಇತ್ತ ಬಂದು ಪರಿಶೀಲನೆ ಮಾಡುವಂತೆ ಮುಡಾದವರು ಪೊಲೀಸರಿಗೆ ಸೂಚಿಸಬೇಕು. ಇಲ್ಲವಾದರೆ ಇದು ಅಕ್ರಮ ಚಟುವಟಿಕೆಯ ತಾಣವಾಗುವ ಆತಂಕವಿದೆ. ಅದು ನಿವೇಶನದ ಬೇಡಿಕೆ ಮೇಲೆಯೂ ದುಷ್ಪರಿಣಾಮ ಬೀರಲಿದೆ ಎಂದು ಬಡಾವಣೆಗೆ ಆಗಾಗ ಭೇಟಿ ನೀಡುವ ಬಸ್ ನಿಲ್ದಾಣ ಸಮೀಪದ ನಿವಾಸಿಯೊಬ್ಬರು ಹೇಳಿದರು.