
ಬಾಗಲಕೋಟೆ: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆಯಲ್ಲಿ ಹಣ್ಣುಗಳ ಮಾರಾಟವು ಜೋರಾಗಿರುತ್ತದೆ. ಆದರೆ, ಈ ವರ್ಷ ಮಾವಿನ ಹಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ಹಣ್ಣುಗಳ ಭರಾಟೆ ಕಡಿಮೆಯಾಗಿದೆ ಎಂದೇ ಹೇಳಬಹುದು.

j3tvkannada
ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಸೈಕ್ಲೋನ್ ಪರಿಣಾಮದಿಂದಾಗಿ ಅಲ್ಲಿ ಮಾವಿನ ಇಳುವರಿ ಕಡಿಮೆ ಆಗಿದೆ. ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬರುತ್ತಿಲ್ಲ. ಸ್ಥಳೀಯ ಮಾವಿನ ಹಣ್ಣನ್ನೇ ಮಾರಾಟಗಾರರು ನೆಚ್ಚಿಕೊಳ್ಳಬೇಕಾಗಿದೆ.
ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಸಲ ಮಾವಿನ ಹಣ್ಣು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಬೆಲೆ ಹೆಚ್ಚಾಗಿರುವುದರಿಂದ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ. ಜಿಲ್ಲೆಯಲ್ಲಿ ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶನಿವಾರ ಮಾವಿನ ಹಣ್ಣು ಪೂರೈಕೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿಯಿಂದ ಬರುತ್ತದೆ. ಹಿಂದಿನ ವರ್ಷ ಒಂದು ಸಲಕ್ಕೆ ಜಿಲ್ಲೆಗೆ 3 ಸಾವಿರ ಬಾಕ್ಸ್ ಹಣ್ಣು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 800ಕ್ಕೆ ಇಳಿದೆ.
ಮಹಾರಾಷ್ಟ್ರದ ರತ್ನಾಗಿರಿ ಮತ್ತು ದೇವಗಡ ಆಪೂಸ್, ರಾಜ್ಯದ ಕಲ್ಕಿ, ಸಿಂದೂರ, ಬೇನಿಷ್ ಮಾವು ಹೆಚ್ಚಾಗಿ ತರಿಸಲಾಗುತ್ತದೆ. ಕಳೆದ ವರ್ಷ ಆಪೂಸ್ ಒಂದು ಬಾಕ್ಸ್ಗೆ (12, 15, 18 ಹಣ್ಣಿನ ಬಾಕ್ಸ್) ₹400 ರಿಂದ 500 ಇರುತ್ತಿದ್ದದ್ದು, ಈಗ ₹600 ರಿಂದ ₹700ಕ್ಕೆ ಏರಿಕೆ ಆಗಿದೆ. ಕಲ್ಕಿ ಹಣ್ಣು ಕೆಜಿಗೆ ₹70 ರಿಂದ ₹100 ಇದ್ದಿದ್ದು, ಈಗ ₹100 ರಿಂದ ₹140, ಸಿಂದೂರ ಕೆಜಿಗೆ ₹50 ರಿಂದ 80 ಇದ್ದಿದ್ದು, ಈಗ ₹90 ರಿಂದ 120ಕ್ಕೆ ಏರಿಕೆ ಆಗಿದೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದರಿಂದ ಹಣ್ಣುಗಳ ಬೆಲೆ ಹೆಚ್ಚಿದೆ. ಪರಿಣಾಮ ಮಾರಾಟ ಪ್ರಮಾಣದಲ್ಲಿ ಕುಸಿತವಾಗಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.