
ಮೈಸೂರು: ಎಸ್ಪಿ ಕಚೇರಿ ಸಮೀಪದ ಹೈದರಾಲಿ ರಸ್ತೆಯ ಇಕ್ಕೆಲಗಳಲ್ಲಿ ನೆಲಕ್ಕುರುಳಿಸಿದ ಮರಗಳ ಅವಶೇಷಗಳ ಮುಂದೆ ಪರಿಸರ ಪ್ರೇಮಿಗಳು ಶುಕ್ರವಾರ ರಾತ್ರಿ ಮೋಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ವಿವಿಧ ಸಂಘಟನೆಗಳು ಕರೆ ನೀಡಿದ್ದು ಮರಗಳಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿ ಪರಿಸರ ರಕ್ಷಣೆಯ ಸಂದೇಶ ಸಾರಿದರು.

j3tvkannada
ಸೂರ್ಯ ಮುಳುಗುತ್ತಿದ್ದಂತೆ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸಂಘಟನೆಗಳ ಪ್ರಮುಖರು, ಮಹಿಳೆಯರು ಹೀಗೆ ರಾಜಕೀಯ ಪಕ್ಷ, ಜಾತಿ, ಧರ್ಮದ ಭೇದವಿಲ್ಲದೆ ಒಂದೆಡೆ ಸೇರಿದರು. ತಲೆಗೆ ಕಪ್ಪುಪಟ್ಟಿ ಕಟ್ಟಿಕೊಂಡು ‘ಮರಗಳ ಹನನ ನಿಲ್ಲಿಸಿ, ಪರಿಸರ ಉಳಿಸಿ’ಎಂಬ ಸಂದೇಶವುಳ್ಳ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಗುವೊಂದು ಹಿಡಿದಿದ್ದ ‘ಸ್ಟಾಪ್ ಟ್ರೀ ಕಟ್ಟಿಂಗ್’ (ಮರ ಕಡಿಯುವುದನ್ನು ನಿಲ್ಲಿಸಿ) ಎಂಬ ಬರಹವುಳ್ಳ ಫಲಕ ವಿಶೇಷ ಗಮನ ಸೆಳೆದಿತ್ತು.
ಗ್ರಾಹಕರ ಪರಿಷತ್ ಪ್ರಕೃತಿ ವಕೀಲರ ತಂಡ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ರಾಜ್ಯ ರೈತ ಕಲ್ಯಾಣ ಸಂಘ, ಮೈಸೂರು ಸೈಕ್ಲಿಂಗ್ ಕ್ಲಬ್, ಮೈಸೂರು ಅಥ್ಲೆಟಿಕ್ ಕ್ಲಬ್, ಹುಮಾನಿಟೀಸ್ ರಿಲೀಫ್ ಸೊಸೈಟಿ ಜೊತೆಗೆ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದವು.
ಘೋಷಣೆಗಳನ್ನು ಕೂಗದೆ ಮೌನವಾಗಿಯೇ ಮನದ ಆಕ್ರೋಶವನ್ನು ಹೊರಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ಉಳಿದಿರುವ ಮರದ ಅವಶೇಷಕ್ಕೆ ಬಿಳಿ ಬಟ್ಟೆ ಕಟ್ಟಿ, ಹೂವು ಇಡಲಾಗಿತ್ತು. ಕತ್ತಲು ಆವರಿಸುತ್ತಿದ್ದಂತೆ ರಸ್ತೆಯ ಎರಡೂ ಬದಿಗಳಲ್ಲಿ ನಿಂತ ಪರಿಸರ ಪ್ರೇಮಿಗಳು ಮೇಣದ ಬತ್ತಿ ಬೆಳಗಿದರು. ರಸ್ತೆ ತಡೆ ನಡೆಸಿ ರಸ್ತೆಯಲ್ಲೇ ಕುಳಿತು ಮೌನವಾಗಿ ಪ್ರತಿಭಟಿಸಿದರು. ನಂತರ ಎಸ್ಪಿ ಕಚೇರಿ ಮುಂಭಾಗದ ವೃತ್ತದವರೆಗೂ ಮೆರವಣಿಗೆ ಮಾಡಿದರು.