
ಮಂಡ್ಯ: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಒರಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಪ್ರಕರಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

j3tvkannada
ಗ್ರಾಮದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ, ಇದೇ ತಾಲ್ಲೂಕಿನ ಪಿ.ಹೊಸಹಳ್ಳಿಯ ವೀರಭದ್ರಾಚಾರ್ ಅವರ ಪುತ್ರ ಚಂದ್ರ ಎಂಬಾತ ತನ್ನ ಪತ್ನಿ ಸೌಮ್ಯ (27) ಅವರನ್ನು ಹತ್ಯೆ ಮಾಡಿದ್ದು, ಮದ್ಯವ್ಯಸನಿಯಾಗಿದ್ದ ಚಂದ್ರ ಹಲವು ದಿನಗಳಿಂದ ಹಣ ಕೊಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಶಾಂತಮಲ್ಲಪ್ಪ ಭೇಟಿ ನೀಡಿದ್ದರು. ಆರೋಪಿ ನಾಪತ್ತೆಯಾಗಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಸಿಪಿಐ ವಿ.ಎಸ್. ಪ್ರಕಾಶ್ ತಿಳಿಸಿದ್ದಾರೆ.
ಪಾಂಡವಪುರ ತಾಲ್ಲೂಕು ಸಣಬ ಗ್ರಾಮದ ಸೌಮ್ಯ ಅವರನ್ನು ಚಂದ್ರ 9 ವರ್ಷಗಳ ಹಿಂದೆ ವಿವಾಹವಾಗಿದ್ದ. ಈ ದಂಪತಿಗೆ 7 ವರ್ಷದ ಮತ್ತು 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಚಂದ್ರ ಪತ್ನಿ ಮತ್ತು ಮಕ್ಕಳ ಜತೆ ಮೂರು ವರ್ಷಗಳಿಂದ ಬಾಬುರಾಯನಕೊಪ್ಪಲಿನಲ್ಲಿ ವಾಸವಾಗಿದ್ದ. ಕೃತ್ಯ ನಡೆದಾಗ ಮಕ್ಕಳು ಸಂಬಂಧಿಕರ ಊರಿನಲ್ಲಿದ್ದರು ಎಂದು ತಿಳಿದು ಬಂದಿದೆ. ತನ್ನ ಪತ್ನಿ ಹೊಡೆಯುತ್ತಿದ್ದಾಳೆ ಎಂದು ಗುರುವಾರ ರಾತ್ರಿ 9ರ ವೇಳೆ ಪೊಲೀಸ್ ಸಹಾಯವಾಣಿಗೆ 112 ಸಂಖ್ಯೆಗೆ ಚಂದ್ರ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.