
ಗದಗ: ಹೋಬಳಿಯ ಖಾಲಿ ಜಮೀನಿನಲ್ಲಿ ದೇಸೀ ಗೋವುಗಳ ಹಿಂಡು ಬೀಡು ಬಿಟ್ಟಿವೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿ ಅವರು ದೇಸೀ ಗೋವುಗಳ ಮೊರೆ ಹೋಗಿದ್ದು, ಕೊಪ್ಪಳ ಜಿಲ್ಲೆಯ ಕೆರಳ್ಳಿ ಗ್ರಾಮದ ಸಾವಿರಾರು ಆಕಳುಗಳನ್ನು ಆಹ್ವಾನಿಸಿ ಮಣ್ಣಿನ ಫಲವತ್ತತೆ ಕಾಪಾಡಲು ಮುಂದಾಗಿದ್ದಾರೆ. 18 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುರಗಡ್ಡಿ, ಹಾಲವರ್ತಿ ಹಾಗೂ ಕೆರಳ್ಳಿ ಗೋಪಾಲಕರ ಗೆಳತನ ಮಾಡಿದ್ದ ರಾಮಣ್ಣ ಅವರು ಗೋವುಗಳ ಸಗಣಿ ಹಾಗೂ ಗಂಜಲು ಪ್ರಯೋಗಕ್ಕೆ ಮುಂದಾಗಿದ್ದು, ಅವುಗಳನ್ನು ತಮ್ಮ ಹೊಲದಲ್ಲಿ ನಿಲ್ಲಿಸಿದ್ದಾರೆ.
ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಿ ಮಣ್ಣಿನ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚಳಗೊಂಡಿದೆ. ಇಳುವರಿಯೂ ಉತ್ತಮವಾಗಿ ಬಂದಿದ್ದು, ವರ್ಷಕ್ಕೊಮ್ಮೆ ತಮ್ಮ ಜಮೀನಿನಲ್ಲಿ ದೇಸೀ ಗೋವುಗಳನ್ನು ಕರೆತರಲು ಆದ್ಯತೆ ನೀಡಿದ್ದಾರೆ. ನೂರಾರು ಗೋವುಗಳನ್ನು ಕಂಡ ಇಲ್ಲಿನ ರೈತರು ತಮ್ಮ ಜಮೀನುಗಳಿಗೆ ದನಗಳನ್ನು ಬಿಡುವಂತೆ ಬೇಡಿಕೆ ಇಡುತ್ತಿದ್ದಾರೆ.

j3tvkannada
ಗೋವುಗಳನ್ನು ನಿಲ್ಲಿಸಲು ಎರಡು ವರ್ಷ ಮುಂಚಿತವಾಗಿ ಬುಕಿಂಗ್ ಮಾಡಬೇಕು. ಮಳೆಗಾಲ ಆರಂಭವಾಗುವ ಮೊದಲು ಬಳ್ಳಾರಿ, ಗಂಗಾವತಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ವಿವಿಧ ಭಾಗದ ರೈತರ ಜಮೀನುಗಳಿಗೆ ಹೋಗುತ್ತೇವೆ. ನೀರು, ಮೇವು ಸಿಗುವ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಮಳೆಗಾಲದಲ್ಲಿ ಸಂಡೂರು ಗುಡ್ಡ,ಕೊಪ್ಪಳ ಗುಡ್ಡದಲ್ಲಿ ವಾಸ ಮಾಡುತ್ತೇವೆ. ಗೋವಿನ ಹಿಂಡಿನ ಜೊತೆಯಲ್ಲೇ ನಮ್ಮ ಸಂಸಾರ ಇರುತ್ತದೆ. ಕಾಲಕ್ಕನುಗುಣವಾಗಿ ಔಷಧೋಪಚಾರ, ರಕ್ಷಣೆ ಮಾಡುತ್ತೇವೆ ಹಾಗೂ ಕುಟುಂಬ ಸಮೇತರಾಗಿ ಬರುವ ಗೋಪಾಲಕರು ಊರಿನ ಜಾತ್ರೆ ಬರುತ್ತಿದ್ದಂತೆ ಕೊಪ್ಪಳ ಕಡೆಗೆ ಸಾಗುತ್ತೇವೆ ಎಂದು ಗೋಪಾಲಕ ಭರಮಣ್ಣ ಈರಪ್ಪ ಗುರಿಕಾರ ತಿಳಿಸಿದರು.
ಪ್ರತೀ ಆಕಳಿಗೆ ₹10ರಂತೆ ಒಂದು ರಾತ್ರಿ ನಿಲ್ಲಿಸಿದರೆ ₹7 ಸಾವಿರ ಸಿಗುತ್ತದೆ. ದಿನಕ್ಕೆ 2 ಎಕರೆ ಪ್ರದೇಶಕ್ಕೆ ಗೋವಿನ ಸಗಣಿ ಹಾಗೂ ಗಂಜಲಿನಲ್ಲಿರುವ ಪೋಷಕಾಂಶಗಳು ಜಮೀನಿಗೆ ಸಿಗುತ್ತದೆ. ಹೊಲದ ಮಾಲೀಕರು ಹಣ, ಜೋಳ, ಮೇವು ನೀಡುತ್ತಿರುವುದರಿಂದ ಗೋಪಾಲಕರು ಖುಷಿಯಾಗಿದ್ದಾರೆ. 60ಕ್ಕೂ ಹೆಚ್ಚು ದೇಸೀ ತಳಿ ಹೋರಿ ಕರುಗಳಿದ್ದು, ಅವುಗಳ ಖರೀದಿ ಜೋರಾಗಿ ನಡೆದಿದೆ. ಉಳುಮೆಗೆ ಉಪಯುಕ್ತವಾಗುವ ಹೋರಿ ಕರುಗಳಿಗೆ ಬೆಳವಣಿಗೆಗೆ ತಕ್ಕಂತೆ ₹10ರಿಂದ ₹12 ಸಾವಿರ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಚಿಕ್ಕಹಂದಿಗೋಳ ರೈತರು 2 ಜೊತೆ ಹೋರಿ ಕರುಗಳನ್ನು ₹50 ಸಾವಿರ ಕೊಟ್ಟು ಕೊಂಡುಕೊಂಡಿದ್ದಾರೆ. ಎರಡು ವರ್ಷ ಮೇಯಿಸಿದರೆ ಲಕ್ಷದ ಮೇಲೆ ಮಾರಾಟವಾಗುತ್ತವೆ, ಎನ್ನುವುದು ರೈತರ ಅಭಿಪ್ರಾಯವಾಗಿದೆ.