
ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದೆ. ನಾಲ್ಕನೇ ಹಂತದ ಯಾತ್ರೆಯು ಜಿಲ್ಲೆಯಲ್ಲಿ ನಡೆಯಲಿದೆ. ಈಗಿನ ವೇಳಾಪಟ್ಟಿ ಪ್ರಕಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏ.27ರಂದು ಜನಾಕ್ರೋಶ ಯಾತ್ರೆ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ರಾಜ್ಯ ಮಟ್ಟದ ಮುಖಂಡರೂ ಭಾಗಿ ಆಗುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಯಾತ್ರೆ ಬರುವ ವೇಳೆಗೆ ಜಿಲ್ಲೆಯಲ್ಲಿನ ನಾಯಕರ ನಡುವೆ ಮೂಡಿಸಿರುವ ವೈಮಸ್ಸು, ಬೇಸರಗಳನ್ನು ಪರಿ ಹರಿಸುತ್ತದೆಯೇ? ಒಗ್ಗಟ್ಟಿನಿಂದ ಮುಖಂಡರು ಮುನ್ನಡೆಯುವರೇ? ಅಥವಾ ನಾನೊಂದು ತೀರಾ ನೀನೊಂದು ತೀರಾ ಎನ್ನುವಂತೆಯೇ ಜಿಲ್ಲೆಯಲ್ಲಿ ಯಾತ್ರೆ ನಡೆಯುತ್ತದೆಯೇ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

J3tvkannada
j3tvkannada
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆದ ಯಾತ್ರೆಯಲ್ಲಿ ಮುಖಂಡ ಸಂದೀಪ್ ರೆಡ್ಡಿ ಭಾಗಿಯಾಗುತ್ತಿದ್ದಾರೆ. ಅವರ ಜೊತೆಗೆ ಜಿಲ್ಲೆಯ ಪದಾಧಿಕಾರಿಗಳೂ ಸಹ ಪಾಲ್ಗೊಂಡಿದ್ದಾರೆ. ವೇದಿಕೆಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಸಂಸದ ಡಾ.ಕೆ.ಸುಧಾಕರ್ ಮಾತ್ರ ಜನಾಕ್ರೋಶ ಯಾತ್ರೆಯಲ್ಲಿ ಕಂಡಿಲ್ಲ. ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬಾಗೇಪಲ್ಲಿ ಕ್ಷೇತ್ರ ಮುಖಂಡ ಸಿ.ಮುನಿರಾಜು ಸಹ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ನಾಯಕರ ನಡುವೆ ಮನಸ್ಸುಗಳು ಒಡೆದಿವೆ. ಆ ಕಾರಣದಿಂದ ಇಂದಿಗೂ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರವೂ ಕಗ್ಗಂಟಾಗಿದೆ. ಈ ಕಾರಣದಿಂದಲೇ ಜಿಲ್ಲೆಗೆ ಬರುವ ಜನಾಕ್ರೋಶ ಯಾತ್ರೆಯ ಸಾಧಕ ಬಾಧಕಗಳ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆಗಳು ನಡೆದಿವೆ. ಜಿಲ್ಲೆಯಲ್ಲಿ ಈ ಯಾತ್ರೆಯ ಜವಾಬ್ದಾರಿಗಳು ಯಾರ ಹೆಗಲಿಗೆ ಬೀಳಲಿವೆ ಎಂಬ ಮಾತಿನ ಮೂಲಕ ಪರಸ್ಪರ ಕಾಲೆಳೆದುಕೊಂಡಿರುವ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವರೇ? ಎನ್ನುವ ಕುತೂಹಲವಿದೆ.

j3tvkannada
ಜ.29ರಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಯುವ ಮುಖಂಡ ಸಂದೀಪ್ ರೆಡ್ಡಿ ಅವರನ್ನು ಪಕ್ಷವು ನೇಮಿಸಿತ್ತು. ಡಾ.ಕೆ.ಸುಧಾಕರ್, ಸಂದೀಪ್ ರೆಡ್ಡಿ ನೇಮಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಕೇಂದ್ರ ನಾಯಕರಿಗೆ ದೂರು ಸಹ ನೀಡಿದ್ದರು. ಇದಕ್ಕೆ ಪ್ರತಿಯಾಗಿ ವಿಜಯೇಂದ್ರ ಬಣದ ನಾಯಕರು ಸಹ ಸುಧಾಕರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಸಂದೀಪ್ ರೆಡ್ಡಿ ಸಹ ಡಾ.ಕೆ.ಸುಧಾಕರ್ ವಿರುದ್ಧ ತೀವ್ರವಾಗಿಯೇ ವಾಗ್ದಾಳಿ ನಡೆಸಿದ್ದರು. ನಂತರ ಫೆ.10ರಂದು ವರಿಷ್ಠರು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ತಡೆ ನೀಡಿದ್ದರು. ಜಿಲ್ಲಾಧ್ಯಕ್ಷರ ಆಯ್ಕೆಗೆ ತಡೆ ನೀಡಿದ ಆದೇಶದ ಪ್ರತಿಯನ್ನು ಸುಧಾಕರ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವಿಜಯೇಂದ್ರ ವಿರುದ್ದ ಸುಧಾಕರ್ ಅವರಿಗೆ ದೊರೆತ ಮೊದಲ ಹಂತದ ಜಯ ಎಂಬಂತೆ ಬಿಂಬಿಸಿ, ಸಂಭ್ರಮಿಸಿದ್ದರು.
ಈ ಎಲ್ಲ ಬೆಳವಣಿಗೆಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿಯಲ್ಲಿ ಬಣ ರಾಜಕೀಯವನ್ನು ಜಗಜ್ಜಾಹೀರುಗೊಳಿಸಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ತಡೆ ತಾತ್ಕಾಲಿಕವಾದುದು, ಬೆರಳೆಣಿಕೆಯ ದಿನಗಳಲ್ಲಿ ಕಗ್ಗಂಟು ಪರಿಹಾರವಾಗಲಿದೆ ಎಂದುಕೊಂಡಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಿರಾಸೆ ಸಹ ತಂದಿದೆ. ಸಂದೀಪ್ ರೆಡ್ಡಿ ಅವರ ನೇಮಕಕ್ಕೆ ತಡೆ ನೀಡಿ ಎರಡು ತಿಂಗಳಾಗಿದೆ. ಈ ನಡುವೆಯೇ ನಾಲ್ಕನೇ ಹಂತದ ಯಾತ್ರೆಗೆ ನಾಯಕರು ವೇಳಾಪಟ್ಟಿ ನಿಗದಿಗೊಳಿಸಿದ್ದಾರೆ. ಜನಾಕ್ರೋಶ ಯಾತ್ರೆಯು ಬೆಳಗಾವಿಗೆ ಹೋಗಿದ್ದ ವೇಳೆ ರಮೇಶ್ ಜಾರಕಿಹೊಳಿ ಗೈರಾಗಿದ್ದರು. ಅದೇ ರೀತಿಯಲ್ಲಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದ ಡಾ.ಕೆ.ಸುಧಾಕರ್ ಅವರು ಯಾತ್ರೆಯಲ್ಲಿ ಭಾಗಿಯಾಗುವರೇ ಇಲ್ಲವೆ ಎನ್ನುವ ಕುತೂಹಲವೂ ಇದೆ.