
ಚಿತ್ರದುರ್ಗ: ತಾಲ್ಲೂಕಿನ ಉಡುವಳ್ಳಿ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಸುತ್ತಲಿನ ಗುಡ್ಡ ಪ್ರದೇಶದಲ್ಲಿ ಆಶ್ರಯ ಪಡೆದಿದ್ದ ಪ್ರಾಣಿ ಪಕ್ಷಿಗಳಿಗೆ, ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತೆಂಗು-ಅಡಿಕೆ ತೋಟಗಳು ಸಾಲು ಸಾಲಾಗಿ ಒಣಗತೊಡಗಿವೆ. ಕೆರೆಯು ಸುತ್ತಮುತ್ತಲಿನ ಆರೇಳು ಗ್ರಾಮಗಳ ಜನರ ಕುಡಿಯುವ ನೀರಿಗೆ ಆಸರೆಯಾಗಿದ್ದ ಕೆರೆ ಬತ್ತಿರುವುದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
“ಐದು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಯಿಸಿ, ಇದ್ದ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಸಸಿ ನಾಟಿ ಮಾಡಿದ್ದೆ. ಮುಂದಿನ ವರ್ಷ ಫಸಲು ಕೈಗೆ ಬರುತ್ತದೆ ಎಂಬ ಭರವಸೆಯಲ್ಲಿದ್ದೆ.

j3tvkannada
ಇದ್ದಕ್ಕಿದ್ದಂತೆ ಕೊಳವೆಬಾವಿಯಲ್ಲಿನ ನೀರು ಬತ್ತಿ ಹೋಯಿತು. ಸುತ್ತಲಿನ ತೋಟದವರಿಗೆ ನೀರನ್ನು ಕೇಳಿದರೆ, ಅವರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಕೊನೆಗೆ ತೋಟ ಉಳಿಸಲು ಕೊಳವೆಬಾವಿ ಕೊರೆಯಿಸಲು ಮುಂದಾದೆ. 900 ಅಡಿ ಕೊರೆಯಿಸಿದರೂ ಹನಿ ನೀರು ಬರಲಿಲ್ಲ. ಇನ್ನೊಂದು ಕೊಳವೆಬಾವಿ ಕೊರೆಯಿಸಲು ಯಾರೂ ಸಾಲ ಕೊಡುತ್ತಿಲ್ಲ. ವಾರದ ಒಳಗೆ ನೀರು ಬಿಡದಿದ್ದರೆ ಅಡಿಕೆ ಗಿಡಗಳೆಲ್ಲ ಸಂಪೂರ್ಣ ಒಣಗಿ ಹೋಗುತ್ತವೆ. ನನ್ನ ಬದುಕು ಬೀದಿಗೆ ಬೀಳುತ್ತದೆ’ ಹೀಗೆನ್ನುತ್ತಲೇ ಹುಲುಗಲಕುಂಟೆ ಗ್ರಾಮದ ಕರಿಯಮ್ಮ ಅವರ ಕಣ್ಣಾಲಿಗಳು ಒದ್ದೆಯಾದವು.
ದೊಡ್ಡನಾಗಣ್ಣ, ದೇವರಾಜ್ ಅವರ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಅವರ ತೋಟಗಳೂ ನೀರಿಲ್ಲದೆ ಒಣಗತೊಡಗಿವೆ. ಸೇವಂತಿಗೆ, ಗುಲಾಬಿ ಬೆಳೆದು ಕುಟುಂಬ ನಡೆಸುತ್ತಿದ್ದ ಹತ್ತಾರು ರೈತರು ಕೊಳವೆಬಾವಿಯಲ್ಲಿ ನೀರು ಬತ್ತಿರುವ ಕಾರಣಕ್ಕೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ನಮ್ಮ ಗ್ರಾಮವೊಂದರಲ್ಲೇ ಒಂದು ತಿಂಗಳಿಂದೀಚೆಗೆ 60-70 ಕೊಳವೆಬಾವಿ ಕೊರೆಯಿಸಲಾಗಿದೆ. 800ರಿಂದ 1,100 ಅಡಿಯವರೆಗೆ ಕೊರೆಸಿದ್ದರೂ ಅರ್ದದಿಂದ ಒಂದಿಂಚು ನೀರು ಬಂದರೆ ದೊಡ್ಡ ಮಾತು ಎಂಬಂತಾಗಿದೆ. 15-20 ದಿನಗಳಲ್ಲಿ ಮಳೆ ಬರದೇ ಹೋದರೆ ನೂರಾರು ಎಕರೆಯಲ್ಲಿರುವ ಅಡಿಕೆ ತೋಟಗಳು, ದಾಳಿಂಬೆ, ತೆಂಗು ಒಣಗಿ ಹೋಗಲಿವೆ. ಕುಡಿಯುವ ನೀರಿಗೂ ಟ್ಯಾಂಕರ್ ಮುಂದೆ ಮಹಿಳೆಯರು ಮತ್ತು ಮಕ್ಕಳು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜನರು ಗುಳೇ ಹೋಗಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್ ಆತಂಕ ವ್ಯಕ್ತಪಡಿಸಿದರು.

j3tvkannada
ಹುಲುಗಲಕುಂಟೆ ಮೇಲ್ಬಾಗದಲ್ಲಿರುವ ಉಡುವಳ್ಳಿ ಕೆರೆಗೆ ನೀರು ಬಂದಲ್ಲಿ ಮಾತ್ರ ಅಂತರ್ಜಲ ಹೆಚ್ಚುತ್ತದೆ. ಕೊಳವೆಬಾವಿಗಳಲ್ಲಿ ಮತ್ತೆ ನೀರು ಕಾಣಿಸಿಕೊಳ್ಳುತ್ತದೆ. ಆಗ ಮಾತ್ರ ರೈತರು ಉಳಿಯಲು ಸಾಧ್ಯ. ಇದು ಕೇವಲ ಹುಲುಗಲಕುಂಟೆ ಗ್ರಾಮದ ಸಮಸ್ಯೆ ಅಲ್ಲ. ಉಡುವಳ್ಳಿ ಕೆರೆ ಭರ್ತಿಯಾದರೆ, ಸೋಮೇರಹಳ್ಳಿ, ಸೋಮೇರಹಳ್ಳಿ ತಾಂಡಾ, ಹುಲುಗಲಕುಂಟೆ, ಪರಮೇನಹಳ್ಳಿ, ಚಳಮಡು, ಗಾಂಧಿನಗರ, ಇದ್ದಲ ನಾಗೇನಹಳ್ಳಿಗಳ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಅಂದಾಜು 800 ಎಕರೆ ಭೂಮಿಗೆ ನೀರಾವರಿ ಕಲ್ಪಿಸಬಹುದು ಎಂದು ಅವರು ಹೇಳಿದರು. ಉಡುವಳ್ಳಿ ಕೆರೆಗೆ ಕತ್ತೆಹೊಳೆಯಿಂದ ಅಂದಾಜು ₹ 2 ಕೋಟಿ ವೆಚ್ಚದಲ್ಲಿ ಪೂರಕ ನಾಲೆ ನಿರ್ಮಿಸುವ ಕಾಮಗಾರಿಗೆ 2003ರಲ್ಲಿ ಭೂಮಿಪೂಜೆ ನೆರವೇರಿತ್ತು.
22 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಆರೇಳು ಹಳ್ಳಿಗಳ ರೈತರು ಆಡಳಿತ ನಡೆಸುವವರಿಗೆ ಶಾಪ ಹಾಕುತ್ತಿದ್ದಾರೆ. ಈಚೆಗೆ ಈ ಭಾಗದ ರೈತರು ವಾಣಿವಿಲಾಸ ಜಲಾಶಯದಿಂದ ಉಡುವಳ್ಳಿ ಕೆರೆಗೆ ನೀರು ತುಂಬಿಸುವ ಮೂಲಕ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದರು. ಉಡುವಳ್ಳಿ ಕೆರೆ ಒಣಗಿರುವ ಕಾರಣ ಆರೇಳು ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದ್ದರೆ ಅತ್ಯಂತ ರುಚಿಕರವಾದ ಮೀನಿಗೆ ಹೆಸರಾಗಿದ್ದ ಕೆರೆಯಲ್ಲಿ ಮೀನು ಸಿಗದಾಗಿದೆ. ಜೊತೆಗೆ ಮೀನು ಕೃಷಿಯನ್ನು ನಂಬಿದ್ದ ಹತ್ತಾರು ಕುಟುಂಬಗಳ ಕೈಗೆ ಕೆಲಸ ಇಲ್ಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ವಾಣಿವಿಲಾಸ ಜಲಾಶಯದಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಹಸಿದ ರೈತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂಬುದು ರೈತರ ಎಚ್ಚರಿಕೆಯಾಗಿದೆ.