
ಉಡುಪಿ: ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ವಿವಿಧೆಡೆ ನೀರಿನ ಹಾಹಾಕಾರ ಎದುರಾಗುವುದು ಸಾಮಾನ್ಯ. ಕಾಪು ತಾಲ್ಲೂಕಿನ ಕೆಲವೆಡೆ ತಾಂತ್ರಿಕ ಕಾರಣಗಳಿಂದ ನೀರಿನ ಸಮಸ್ಯೆ ಉಂಟಾಗಿರುವುದು ಬಿಟ್ಟರೆ, ಇನ್ನುಳಿದಂತೆ ಎಲ್ಲೂ ಸಮಸ್ಯೆ ಕಾಡಿಲ್ಲ.

ಕಳೆದ ಬಾರಿ ಕೆಲವೆಡೆ ನೀರಿನ ಸಮಸ್ಯೆ ತಲೆದೋರಿತ್ತು. ಈ ಬಾರಿ ಕಿಂಡಿ ಅಣೆಕಟ್ಟೆಗಳ ನಿರ್ವಹಣೆಗೆ ಒತ್ತು ನೀಡಿದ ಪರಿಣಾಮ ಅಂತರ್ಜಲ ಮಟ್ಟ ಉತ್ತಮವಾಗಿವೆ. ಕಾಪು ತಾಲ್ಲೂಕಿನ ಕೋಟೆ, ಕಟಪಾಡಿ, ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೆಡೆ ನೀರಿನ ಸಮಸ್ಯೆ ಕಳೆದ ಬಾರಿ ಎದುರಾಗಿತ್ತು. ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕುದ್ರು ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಹಲವು ವರ್ಷಗಳಿಂದಲೂ ಇತ್ತು. ಆದರೆ ಈ ಬಾರಿ ಹೊಸದಾಗಿ ನಿರ್ಮಿಸಿದ ಬಾವಿಯಲ್ಲಿ ಯಥೇಚ್ಛವಾಗಿ ನೀರು ಇದ್ದು, ಸಮಸ್ಯೆ ಉದ್ಭವವಾಗಿಲ್ಲ. ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆಸಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದರಿಂದಾಗಿ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣೋನಿ ಎಂಬಲ್ಲಿ ಸಮಸ್ಯೆ ಆಗಿದೆ.
ಟ್ಯಾಂಕರ್ ನೀರಿಗೆ ಕಡಿವಾಣ: ಕಾಪು ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಮುಂದಾಗದೆ ಉತ್ತಮ ನೀರಿನ ಆಶ್ರಯವಿರುವ ಖಾಸಗಿ ಬಾವಿ, ಕೊಳವೆ ಬಾವಿಗಳಿಂದ ನೀರು ಪೂರೈಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಅದು ಸಾಧ್ಯವಾಗದಿದ್ದಲ್ಲಿ ಮಾತ್ರ ಟ್ಯಾಂಕರ್ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಗ್ರಾಮಕ್ಕೆ ನೀರು ಪೂರೈಸಲು ಅಳವಡಿಸಿರುವ ಪೈಪ್ಗಳಿಗೆ ಖಾಸಗಿ ಬಾವಿ, ಕೊಳವೆ ಬಾವಿಗಳಿಂದ ಪಂಪಿಂಗ್ ಮಾಡಿದ ನೀರಿನ ಸಂಪರ್ಕ ಕಲ್ಪಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಕೂಡ ಕುಡಿಯುವ ನೀರನ್ನು ಗಿಡ ಮರಗಳಿಗೆ ಉಪಯೋಗಿಸದಂತೆ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತಿವೆ.
ಬಹುಗ್ರಾಮ ಯೋಜನೆ ನೆನೆಗುದಿಗೆ ಪಲಿಮಾರು ಗ್ರಾಮದಲ್ಲಿರುವ ಶಾಂಭವಿ ನದಿಯಿಂದ ನೀರನ್ನು ಮೇಲೆತ್ತಿ ಈ ಭಾಗದ ಪಲಿಮಾರು, ಪಡುಬಿದ್ರಿ, ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಹುಗ್ರಾಮ ಕುಡಿಯುವ ನೀರಿನ್ನು ಸರಬರಾಜು ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಈ ಬಗ್ಗೆ 10 ವರ್ಷಗಳ ಹಿಂದೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಶಾಂಭವಿ ನದಿಯ ನೀರನ್ನು ಬಳ್ಳುಂಜೆಯಲ್ಲಿ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಳ್ಳುಂಜೆ, ಕಿನ್ನಿಗೋಳಿ, ಹಳೆಯಂಗಡಿ, ಕಟೀಲು, ಐಕಳ ಸುತ್ತಮುತ್ತಲ 17 ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ವಾರಾಹಿ ನೀರು: ಕಾಪು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ವಾರಾಹಿ ನೀರನ್ನು ನೀಡುವ ಯೋಜನೆ ಕೂಡ ಹಾಕಿಕೊಳ್ಳಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಈ ಯೋಜನೆಯೂ ವಿಳಂಬವಾಗುತ್ತಿದೆ. ಆದರೆ ಅಷ್ಟೊಂದು ದೂರದಿಂದ ನೀರು ಬಳಕೆ ಮಾಡುವುದು ಸರಿಯಲ್ಲ. ಶಾಂಭವಿ ನದಿಯಿಂದಲೇ ನೀರು ಮೇಲಕ್ಕೆತ್ತಿ ಕುಡಿಯುವ ನೀರಿನ ಯೋಜನೆ ಹಾಕಿಕೊಳ್ಳಬೇಕು ಎಂಬ ಆಗ್ರಹ ಸ್ಥಳೀಯರಿಂದ ಕೇಳಿ ಬರುತ್ತಿದೆ. ಪಡುಬಿದ್ರಿಯ ನಾಲು ಮತ್ತು ಪಾದೆಬೆಟ್ಟು ಗ್ರಾಮದ ಕೆಲವೆಡೆ ನೀರಿನ ಸಮಸ್ಯೆ ತಲೆದೋರಿದೆ.